ಬೆಳಗಾವಿ: ಕುಡಿಯುವ ನೀರಿನ ಪೂರೈಕೆಯಲ್ಲಿ ಆಗುತ್ತಿರುವ ಲೋಪವನ್ನು ಗಂಭೀರವಾಗಿ ಪರಿಗಣಿಸಿರುವ ಬೆಳಗಾವಿ ಶಾಸಕ ಅಭಯ ಪಾಟೀಲರು ನೀರು ಪೂರೈಕೆ ಜವಾಬ್ದಾರಿ ಹೊತ್ತ ಎಲ್ ಆ್ಯಂಡ್ ಟಿ ಕಂಪನಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಳೆದ ದಿನ ಬೆಂಗಳುರಿನಲ್ಲಿ ನಡೆದ ಕಂಪನಿಯ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕರು ಕೆಂಡಾಮಂಡಲವಾಗಿ ಸಂಬಂಧಿಸಿದವರನ್ನು ತೀವೃವಾಗಿ ತರಾಟೆಗೆ ತೆಗೆದುಕೊಂಡರು.
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಜನ ಪರದಾಡುತ್ತಿದ್ದಾರೆ, ಅಧಿಕಾರಿಗಳು ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ಅಷ್ಟೇ ಅಲ್ಲ ಅಲ್ಲಿ ತೆಗೆದುಕೊಂಡ ಕಾಮಗಾರಿಗಳು ತ್ವರಿತಗತಿಯಲ್ಲಿ ಮುಗಿಯುತ್ತಿಲ್ಲ ಎನ್ನುವ ಆಕ್ಷೇಪಣೆ ವ್ಯಕ್ತಪಡಿಸಿದರು, ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಹೊಸದಾಗಿ ಪೈಪ್ ಅಳವಡಿಸುವುದು ಸೇರಿದಂತೆ ಇನ್ನಿತರ ಕಾಮಗಾರಿಯನ್ನು ತ್ವರಿತವಾಗಿ ತೆಗೆದು ಕೊಳ್ಳಬೇಕು. ಅಷ್ಟೇ ಅಲ್ಲ ಈ ಕಾಮಗಾರಿಯನ್ನು ಎಪ್ರಿಲ್ 15 ರೊಳಗೆ ಮುಗಿಸಿ ನಂತರ ಪ್ರತಿ 4 ದಿನಕ್ಕೊಮ್ಮೆ ನೀರು ಪೂರೈಕೆ ಮಾಡಬೇಕೆಂದು ಸೂಚನೆ ನೀಡಿದರು.
ಇದರ ಜತೆಗೆ ದಕ್ಷಿಣ ಕ್ಷೇತ್ರದಲ್ಲಿನ ವಾರ್ಡಗಳಿಗೆ 25 ಟ್ಯಾಂಕರಗಳ ಮೂಲಕ ನೀರು ಪೂರೈಕೆ ಮಾಡಬೇಕೆಂದು ಅವರು ಸೂಚನೆ ನೀಡಿದರು. ಅದಕ್ಕೆ ಕಂಪನಿಯ ಅಧಿಕಾರಿಗಳು ಸಮ್ಮತಿ ಸೂಚಿಸಿದರು ಎಂದು ಗೊತ್ತಾಗಿದೆ, ಗಮನಿಸಬೇಕಾದ ಸಂಗತಿ ಎಂದರೆ, ನೀರು ಬಿಡುವ ವಾಲ್ವಮನ್ಗಳ ಸಂಬಳದ ಬಗ್ಗೆಯೂ ಅವರು ಪ್ರಸ್ತಾಪಿಸಿದರು, ಅವರಿಗೂ ನ್ಯಾಯ ಒದಗಿಸಬೇಕೆಂದು ಶಾಸಕ ಅಭಯ ಪಾಟೀಲರು ಸೂಚನೆ ನೀಡಿದರು.