ಡಿಕೆಶಿಯನ್ನು ಕಟ್ಟಿಹಾಕಲು ಸಿದ್ದು ಬಣದ ‘2028’ ಬಾಣ: ಆಫರ್‌ಗೆ ಸತೀಶ್ ಸೈಲೆಂಟ್

0
17

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನೊಳಗಿನ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಯು ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೊಂದು ರಾಜಕೀಯ ಚದುರಂಗದಾಟವಾಗಿ ಮಾರ್ಪಟ್ಟಿದೆ.

ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರನ್ನು ಪೂರ್ಣಾವಧಿಗೆ ಸಿಎಂ ಆಗಿ ಉಳಿಸಿಕೊಳ್ಳಲೇಬೇಕು ಎಂದು ಪಣತೊಟ್ಟಿರುವ ಆಪ್ತ ಬಣ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಸದ್ಯಕ್ಕೆ ಸಮಾಧಾನಪಡಿಸಲು “2028ರ ಸಿಎಂ” ಎಂಬ ಹೊಸ ಬಾಣವನ್ನು ಪ್ರಯೋಗಿಸಿದೆ. ಆದರೆ, ಈ ಬಾಣವು ಪಕ್ಷದೊಳಗೆ ಹೊಸ ಗೊಂದಲವನ್ನೂ ಸೃಷ್ಟಿಸಿದೆ.

ಸಿದ್ದು ಬಣದ ‘ಟಾರ್ಗೆಟ್ 2028’ ತಂತ್ರ: ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಡಿ.ಕೆ. ಶಿವಕುಮಾರ್ ಅವರು, ಸದ್ದಿಲ್ಲದೆ ಹೈಕಮಾಂಡ್ ಮಟ್ಟದಲ್ಲಿ ತಮ್ಮ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. ಇದನ್ನು ಅರಿತಿರುವ ಸಿದ್ದರಾಮಯ್ಯ ಬಣ, ಡಿಕೆಶಿ ಅವರನ್ನು ಕಟ್ಟಿಹಾಕಲು ಹೊಸ ತಂತ್ರ ಹೆಣೆದಿದೆ.

ಈ ಹಿಂದೆ, “2028ರ ಚುನಾವಣೆಯನ್ನೂ ಸಿದ್ದರಾಮಯ್ಯ ನೇತೃತ್ವದಲ್ಲೇ ಎದುರಿಸುತ್ತೇವೆ” ಎಂದು ಹೇಳುತ್ತಿದ್ದ ಇದೇ ಬಣ, ಈಗ “2028ರಲ್ಲಿ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಸದ್ಯಕ್ಕೆ ಯಾವುದೇ ಬದಲಾವಣೆ ಬೇಡ,” ಎಂಬ ದಾಳವನ್ನು ಉರುಳಿಸಿದೆ.

ಈ ತಂತ್ರಕ್ಕೆ ಬಹಿರಂಗ ಮುದ್ರೆ ಒತ್ತಿದ್ದು ಸಚಿವ ಜಮೀರ್ ಅಹ್ಮದ್ ಖಾನ್. ಅದೂ ಕೂಡಾ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದ ನಂತರ, ಅವರ ಮನೆಯ ಮುಂದೆಯೇ, “ಡಿಕೆಶಿ ಪಕ್ಷಕ್ಕಾಗಿ ಬಹಳ ಕಷ್ಟಪಟ್ಟಿದ್ದಾರೆ, ಅವರೇ 2028ರಲ್ಲಿ ಸಿಎಂ ಆಗಲಿ,” ಎಂದು ಹೇಳಿಕೆ ನೀಡಿರುವುದು ಈ ತಂತ್ರದ ಹಿಂದಿನ ರಾಜಕೀಯ ಲೆಕ್ಕಾಚಾರವನ್ನು ಸ್ಪಷ್ಟಪಡಿಸುತ್ತದೆ.

ಆಫರ್‌ನಿಂದ ಅಂತರ ಕಾಯ್ದುಕೊಂಡ ಸತೀಶ್ ಜಾರಕಿಹೊಳಿ: ಸಿದ್ದರಾಮಯ್ಯ ಬಣದ ಈ ‘2028’ ಆಫರ್, ಪಕ್ಷದ ಮತ್ತೊಬ್ಬ ಪ್ರಭಾವಿ ನಾಯಕ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನಕ್ಕೆ ಕಾರಣವಾದಂತಿದೆ. ಸಿಎಂ ಸ್ಥಾನದ ಆಕಾಂಕ್ಷಿಯಾಗಿರುವ ಅವರು, ಈ ಆಫರ್‌ನಿಂದ ಸದ್ದಿಲ್ಲದೆ ಅಂತರ ಕಾಯ್ದುಕೊಂಡಿದ್ದಾರೆ.

“2028ರಲ್ಲಿ ನಾನೂ ಕೂಡ ಸಿಎಂ ಸ್ಥಾನದ ಆಕಾಂಕ್ಷಿ,” ಎಂದು ಹೇಳುವ ಮೂಲಕ, ಸಿದ್ದು ಬಣದ ಆಫರ್‌ಗೆ ತಮ್ಮ ಸಮ್ಮತಿ ಇಲ್ಲ ಮತ್ತು ತಾವೂ ಕೂಡ ರೇಸ್‌ನಲ್ಲಿದ್ದೇವೆ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದ್ದಾರೆ. ಇದು ಸಿದ್ದರಾಮಯ್ಯ ಆಪ್ತ ಬಣದಲ್ಲಿಯೇ ಗೊಂದಲ ಮೂಡಿಸಿದೆ.

ಡಿ.ಕೆ. ಶಿವಕುಮಾರ್ ನಿಗೂಢ ನಡೆ: ಹಾಗಾದರೆ, ಈ ಆಫರ್‌ಗೆ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ಏನು? ಅವರು ಈ ಆಫರ್ ಅನ್ನು ಒಪ್ಪಿಕೊಂಡಿದ್ದಾರೆಯೇ? ಖಂಡಿತ ಇಲ್ಲ. ಜಮೀರ್ ಹೇಳಿಕೆಗೆ ಅತ್ಯಂತ ಮಾರ್ಮಿಕವಾಗಿ ಪ್ರತಿಕ್ರಿಯಿಸಿರುವ ಅವರು, “ಬಹಳ ಸಂತೋಷ. ಸಿದ್ದರಾಮಯ್ಯನವರು ಪೂರ್ಣಾವಧಿಗೆ ಮುಖ್ಯಮಂತ್ರಿ ಆಗಿದ್ದರೆ ತಪ್ಪೇನು? ನಾವು ಯಾರು ಬೇಜಾರು ಮಾಡಿಕೊಂಡಿಲ್ಲ,” ಎಂದು ಹೇಳಿದ್ದಾರೆ.

ಈ ಮೂಲಕ, ಈ ಆಫರ್ ಅನ್ನು ಒಪ್ಪದೆ, ತಿರಸ್ಕರಿಸದೆ, ತಮ್ಮ ಮುಂದಿನ ನಡೆಯನ್ನು ನಿಗೂಢವಾಗಿಟ್ಟಿದ್ದಾರೆ.ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿರುವ ಈ ರಾಜಕೀಯ ಚದುರಂಗದಾಟವು ಮತ್ತಷ್ಟು ಕುತೂಹಲ ಕೆರಳಿಸಿದೆ. ಸಿದ್ದು ಬಣದ ‘2028’ ಬಾಣವು ಡಿಕೆಶಿಯನ್ನು ಕಟ್ಟಿಹಾಕುತ್ತದೆಯೇ ಅಥವಾ ಪಕ್ಷದೊಳಗೆ ಮತ್ತಷ್ಟು ಆಕಾಂಕ್ಷಿಗಳನ್ನು ಹುಟ್ಟುಹಾಕಿ ಹೊಸ ತಲೆನೋವಾಗಿ ಪರಿಣಮಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

Previous articleರಾಜಘಟ್ಟದಲ್ಲಿ ಗುಮ್ಮಟಾಕಾರದ ಆಕರ್ಷಕ ಅಂಗನವಾಡಿ – ಸೃಜನಶೀಲ ಗ್ರಾಮ ಪಂಚಾಯಿತಿಯ ನೂತನ ಪ್ರಯತ್ನ
Next articleಒಬ್ಬ ಗಂಡ, ಆರು ಪತ್ನಿಯರು, ಎಲ್ಲರೂ ಒಂದೇ ಸಮಯದಲ್ಲಿ ಗರ್ಭಿಣಿ!

LEAVE A REPLY

Please enter your comment!
Please enter your name here