Home Advertisement
Home ಸುದ್ದಿ ರಾಜ್ಯ ದೆಹಲಿ ಅಂಗಳದಲ್ಲಿ ‘ಕೈ’ ಅಧಿಕಾರ ಸಮರ: ನವೆಂಬರ್ ಕ್ರಾಂತಿಯತ್ತ ಕರ್ನಾಟಕ ಕಾಂಗ್ರೆಸ್?

ದೆಹಲಿ ಅಂಗಳದಲ್ಲಿ ‘ಕೈ’ ಅಧಿಕಾರ ಸಮರ: ನವೆಂಬರ್ ಕ್ರಾಂತಿಯತ್ತ ಕರ್ನಾಟಕ ಕಾಂಗ್ರೆಸ್?

1
167

ಕರ್ನಾಟಕ ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷಗಳ ಆಡಳಿತದ ಮಹತ್ವದ ಘಟ್ಟವನ್ನು ಸಮೀಪಿಸುತ್ತಿದ್ದಂತೆ, ರಾಜಧಾನಿ ಬೆಂಗಳೂರಿನಿಂದ ದೆಹಲಿಯವರೆಗೂ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. “ನವೆಂಬರ್ ಕ್ರಾಂತಿ” ಎಂಬ ಮಾತು ‘ಕೈ’ ಪಾಳಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಇದು ಕೇವಲ ಸಂಪುಟ ಪುನಾರಚನೆಗೆ ಸೀಮಿತವೇ ಅಥವಾ ರಾಜ್ಯದ ನಾಯಕತ್ವ ಬದಲಾವಣೆಯ ಮುನ್ನುಡಿಯೇ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ಚರ್ಚೆ ಇದೀಗ ನಿರ್ಣಾಯಕ ಹಂತ ತಲುಪಿದಂತೆ ಕಾಣುತ್ತಿದೆ. ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಉದ್ದೇಶದಿಂದ, ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿಗೆ ಪಡೆಯಲು ಸಿಎಂ ಸಿದ್ದರಾಮಯ್ಯ ನವೆಂಬರ್ 15 ರಂದು ದೆಹಲಿಗೆ ತೆರಳಲು ಸಿದ್ಧತೆ ನಡೆಸಿದ್ದಾರೆ.

ಡಿ.ಕೆ.ಶಿ ದಿಢೀರ್ ದೆಹಲಿ ಪ್ರಯಾಣ: ಆದರೆ, ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದು ಡಿ.ಕೆ. ಶಿವಕುಮಾರ್ ದಿಢೀರ್ ದೆಹಲಿ ಪ್ರಯಾಣ. “ದೆಹಲಿಗೆ ಹೋಗುವುದಿಲ್ಲ, ಯಾರನ್ನೂ ಭೇಟಿಯಾಗುವುದಿಲ್ಲ” ಎಂದು ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ವಿಮಾನ ಏರಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಡಿ.ಕೆ. ಶಿವಕುಮಾರ್ ನವೆಂಬರ್ 11 ರಂದು ರಾಹುಲ್ ಗಾಂಧಿ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಲು ಸಮಯ ಕೋರಿದ್ದಾರೆ. ಈ ಭೇಟಿಯಲ್ಲಿ, ಚುನಾವಣೆಗೂ ಮುನ್ನ ಚರ್ಚೆಯಾಗಿದ್ದ ಅಧಿಕಾರ ಹಂಚಿಕೆ ಸೂತ್ರ ಮತ್ತು ತಮ್ಮ ರಾಜಕೀಯ ಭವಿಷ್ಯದ ಕುರಿತು ಸ್ಪಷ್ಟವಾದ ನಿರ್ಧಾರಕ್ಕೆ ಬರುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ.

ಇದರ ಜೊತೆಗೆ, ನವೆಂಬರ್ 20 ರಂದು ರಾಹುಲ್ ಗಾಂಧಿ ಅವರನ್ನು ರಾಜ್ಯಕ್ಕೆ ಆಹ್ವಾನಿಸಿ, ‘ಗಾಂಧಿ ಭಾರತ್’ ಶತಮಾನೋತ್ಸವದ ಅಂಗವಾಗಿ 100 ಕಾಂಗ್ರೆಸ್ ಕಚೇರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ತಮ್ಮ ಸಂಘಟನಾತ್ಮಕ ಶಕ್ತಿಯನ್ನು ಪ್ರದರ್ಶಿಸಲು ಡಿ.ಕೆ. ಶಿವಕುಮಾರ್ ಮುಂದಾಗಿದ್ದಾರೆ. ಇದು ಹೈಕಮಾಂಡ್‌ಗೆ ನೀಡುತ್ತಿರುವ ಒಂದು ಸ್ಪಷ್ಟ ಸಂದೇಶ ಎಂದೇ ವಿಶ್ಲೇಷಿಸಲಾಗುತ್ತಿದೆ.

ಈ ನಡುವೆ, “ಸಂಪುಟ ಪುನಾರಚನೆಗೆ ಹೈಕಮಾಂಡ್ ಒಪ್ಪಿದರೆ ಸಿದ್ದರಾಮಯ್ಯ ಐದು ವರ್ಷ ಪೂರ್ಣಗೊಳಿಸುತ್ತಾರೆ, ಇಲ್ಲದಿದ್ದರೆ ರಾಜಕೀಯವೇ ತಲೆಕೆಳಗಾಗಬಹುದು” ಎಂಬ ಮಾಜಿ ಸಚಿವ ರಾಜಣ್ಣ ಸ್ಫೋಟಕ ಹೇಳಿಕೆ, ಬಿಕ್ಕಟ್ಟಿನ ತೀವ್ರತೆಯನ್ನು ಹೆಚ್ಚಿಸಿದೆ.

ಸಚಿವರಾದ ಕೃಷ್ಣಭೈರೇಗೌಡ ಮತ್ತು ಪ್ರಿಯಾಂಕ್ ಖರ್ಗೆಯಂತಹ ನಾಯಕರು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸುತ್ತಿದ್ದಾರೆ. ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರದ ಚದುರಂಗದಾಟ ರೋಚಕ ಘಟ್ಟ ತಲುಪಿದೆ.

ಸಿದ್ದರಾಮಯ್ಯ ಅನುಭವ ಮತ್ತು ಡಿ.ಕೆ. ಶಿವಕುಮಾರ್ ಸಂಘಟನಾ ಚಾತುರ್ಯದ ನಡುವೆ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುದರ ಮೇಲೆ ರಾಜ್ಯದ ಮುಂದಿನ ರಾಜಕೀಯ ಭವಿಷ್ಯ ನಿಂತಿದೆ. ನವೆಂಬರ್ ತಿಂಗಳು ರಾಜ್ಯ ರಾಜಕಾರಣದಲ್ಲಿ ಕ್ರಾಂತಿಗೆ ಸಾಕ್ಷಿಯಾಗಲಿದೆಯೇ ಅಥವಾ ಯಥಾಸ್ಥಿತಿ ಮುಂದುವರೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರ ದೆಹಲಿಯಲ್ಲೇ ಸಿಗಬೇಕಿದೆ.

1 COMMENT

LEAVE A REPLY

Please enter your comment!
Please enter your name here