Home Advertisement
Home ಸುದ್ದಿ ದೇಶ ದೆಹಲಿಯಲ್ಲಿ ‘ನಕ್ಸಲ್’ ಆರ್ಭಟ: ಮಾಲಿನ್ಯದ ಪ್ರತಿಭಟನೆಯಲ್ಲಿ ಪೊಲೀಸರಿಗೇ ಬಿತ್ತು ಪೆಪ್ಪರ್ ಸ್ಪ್ರೇ!

ದೆಹಲಿಯಲ್ಲಿ ‘ನಕ್ಸಲ್’ ಆರ್ಭಟ: ಮಾಲಿನ್ಯದ ಪ್ರತಿಭಟನೆಯಲ್ಲಿ ಪೊಲೀಸರಿಗೇ ಬಿತ್ತು ಪೆಪ್ಪರ್ ಸ್ಪ್ರೇ!

0
191

ದೆಹಲಿಯಲ್ಲಿ ‘ಶುದ್ಧ ಗಾಳಿ’ ಬೇಕು ಎಂದು ನಡೆದ ಹೋರಾಟ ಇದೀಗ ‘ವಿಷಕಾರಿ’ ತಿರುವು ಪಡೆದುಕೊಂಡಿದೆ. ವಾಯು ಮಾಲಿನ್ಯದ ವಿರುದ್ಧ ಇಂಡಿಯಾ ಗೇಟ್ ಬಳಿ ಸೋಮವಾರ ನಡೆಯುತ್ತಿದ್ದ ಪ್ರತಿಭಟನೆ ಏಕಾಏಕಿ ಹಿಂಸಾಚಾರಕ್ಕೆ ತಿರುಗಿದ್ದು, ಘಟನಾ ಸ್ಥಳ ರಣರಂಗವಾಗಿ ಬದಲಾಗಿದೆ. ಶಾಂತಿಯುತ ಪ್ರತಿಭಟನೆಯಲ್ಲಿ ನಕ್ಸಲರ ಪರ ಘೋಷಣೆಗಳು ಕೇಳಿಬಂದಿದ್ದು ಇಡೀ ಪ್ರಕರಣಕ್ಕೆ ಭಯಾನಕ ಟ್ವಿಸ್ಟ್ ನೀಡಿದೆ.

ದೆಹಲಿಯ ಹದಗೆಟ್ಟ ಗಾಳಿಯ ಗುಣಮಟ್ಟವನ್ನು ಖಂಡಿಸಿ ನಾಗರಿಕರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ, ಈ ಗುಂಪಿನಲ್ಲಿದ್ದ ಕೆಲವರು ಇದ್ದಕ್ಕಿದ್ದಂತೆ ಇತ್ತೀಚೆಗೆ ಎನ್‌ಕೌಂಟರ್‌ಗೆ ಬಲಿಯಾದ ಕುಖ್ಯಾತ ನಕ್ಸಲ್ ನಾಯಕ ‘ಮಾದ್ವಿ ಹಿಡ್ಮಾ’ನ ಪೋಸ್ಟರ್‌ಗಳನ್ನು ಪ್ರದರ್ಶಿಸಲು ಆರಂಭಿಸಿದರು.

ಅಷ್ಟೇ ಅಲ್ಲದೆ, ನಕ್ಸಲ್ ನಾಯಕನ ಪರವಾಗಿ ಜೋರಾಗಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಪರಿಸರ ಕಾಳಜಿಯ ಹೆಸರಿನಲ್ಲಿ ದೇಶವಿರೋಧಿ ಘೋಷಣೆಗಳು ಕೇಳಿಬಂದಿದ್ದು ಪೊಲೀಸರನ್ನೇ ದಂಗಾಗಿಸಿತು.

ಖಾಕಿ ಪಡೆಯ ಮೇಲೆ ‘ಖಾರ’ದ ದಾಳಿ!: ಸಂಚಾರಕ್ಕೆ ಅಡ್ಡಿಯಾಗದಂತೆ ಮತ್ತು ಅಂಬುಲೆನ್ಸ್‌ಗಳಿಗೆ ದಾರಿ ಮಾಡಿಕೊಡುವಂತೆ ಪೊಲೀಸರು ಪ್ರತಿಭಟನಾಕಾರರಿಗೆ ಮನವಿ ಮಾಡಿದ್ದರು. ಆದರೆ ಉದ್ರಿಕ್ತ ಗುಂಪು ರಸ್ತೆ ತಡೆ ನಡೆಸಿತು.

ಇವರನ್ನು ಚದುರಿಸಲು ಪೊಲೀಸರು ಮುಂದಾದಾಗ, ಪ್ರತಿಭಟನಾಕಾರರು ಪೊಲೀಸರ ಮೇಲೆಯೇ ಎರಗಿದ್ದಾರೆ. ಅಚ್ಚರಿ ಎಂಬಂತೆ, ಪೊಲೀಸರ ಕಣ್ಣಿಗೆ ‘ಚಿಲ್ಲಿ ಸ್ಪ್ರೇ’ ಮತ್ತು ‘ಪೆಪ್ಪರ್ ಸ್ಪ್ರೇ’ (ಮೆಣಸಿನ ದ್ರಾವಣ) ಸಿಂಪಡಿಸಿ ಹಲ್ಲೆ ನಡೆಸಿದ್ದಾರೆ. ಬ್ಯಾರಿಕೇಡ್‌ಗಳನ್ನು ಮುರಿದು ದಾಂಧಲೆ ನಡೆಸಿದ ಪರಿಣಾಮ ಮೂರ್ನಾಲ್ಕು ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ತಕ್ಷಣ ಎಚ್ಚೆತ್ತ ಪೊಲೀಸರು ಲಾಠಿ ರುಚಿ ತೋರಿಸಿ, ಸ್ಥಳದಲ್ಲೇ 15ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.

ಯಾರು ಈ ಮಾದ್ವಿ ಹಿಡ್ಮಾ?: ಪ್ರತಿಭಟನೆಯಲ್ಲಿ ರಾರಾಜಿಸಿದ ಮಾದ್ವಿ ಹಿಡ್ಮಾ ಸಾಮಾನ್ಯ ವ್ಯಕ್ತಿಯಲ್ಲ. ಈತ ಛತ್ತೀಸ್‌ಗಢ ದಂಡಕಾರಣ್ಯದ ಟಾಪ್ ನಕ್ಸಲ್ ಕಮಾಂಡರ್ ಆಗಿದ್ದವನು. ಸಿಆರ್‌ಪಿಎಫ್ ಯೋಧರ ಮೇಲಿನ ಹಲವು ಭೀಕರ ದಾಳಿಗಳ ಹಿಂದಿನ ಮಾಸ್ಟರ್ ಮೈಂಡ್ ಈತನೇ ಆಗಿದ್ದ.

26ಕ್ಕೂ ಹೆಚ್ಚು ದೊಡ್ಡ ಮಟ್ಟದ ದಾಳಿಗಳನ್ನು ಸಂಘಟಿಸಿದ್ದ ಈತನ ತಲೆಗೆ ಕೋಟ್ಯಂತರ ರೂಪಾಯಿ ಬಹುಮಾನವಿತ್ತು. ಇತ್ತೀಚೆಗಷ್ಟೇ ಭದ್ರತಾ ಪಡೆಗಳ ಗುಂಡಿಗೆ ಈತ ಮತ್ತು ಈತನ ಪತ್ನಿ ಬಲಿಯಾಗಿದ್ದರು. ಈಗ ದೆಹಲಿಯ ನಡು ರಸ್ತೆಯಲ್ಲಿ ಈತನ ಪರ ಘೋಷಣೆ ಕೂಗಿದ್ದು ಪೊಲೀಸರಿಗೆ ದೊಡ್ಡ ತಲೆನೋವಾಗಿದೆ.

ಮಾಲಿನ್ಯ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಯ್ತಾ?: ಮತ್ತೊಂದೆಡೆ, ದೆಹಲಿಯ ವಾಯು ಮಾಲಿನ್ಯ ಮಿತಿ ಮೀರಿದೆ. ಉಸಿರಾಟಕ್ಕೂ ಜನ ಪರದಾಡುತ್ತಿದ್ದಾರೆ. ಆದರೆ ಸರ್ಕಾರ ಕೇವಲ ನೀರು ಸಿಂಪಡಿಸುವುದು, ಕೃತಕ ಮಳೆ ತರಿಸುತ್ತೇವೆ ಎಂದು ಹೇಳುವುದರಲ್ಲೇ ಕಾಲ ಕಳೆಯುತ್ತಿದೆ.

ಸಮಸ್ಯೆಗಳ ಮೂಲ ಕಾರಣ ಹುಡುಕಿ ಶಾಶ್ವತ ಪರಿಹಾರ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ‘ಶುದ್ಧ ಗಾಳಿಗಾಗಿ ದೆಹಲಿ ಸಮನ್ವಯ ಸಮಿತಿ’ ಕಿಡಿಕಾರಿದೆ. ಆದರೆ, ನ್ಯಾಯಯುತ ಬೇಡಿಕೆಯ ಈ ಹೋರಾಟವನ್ನು ನಕ್ಸಲ್ ಪರ ಘೋಷಣೆಗಳು ಹಾದಿ ತಪ್ಪಿಸಿರುವುದು ವಿಪರ್ಯಾಸ.

LEAVE A REPLY

Please enter your comment!
Please enter your name here