ಶಿಮ್ಲಾ: ಹಿಮಾಲಯ ಪರ್ವತಶ್ರೇಣಿಯಲ್ಲಿ ಕುಳಿರ್ಗಾಳಿ ಹಾಗೂ ಹಿಮಪಾತದ ನಡುವೆಯೇ ಯೋಗಿ ಸತ್ಯೇಂದ್ರನಾಥ್ ತಪಸ್ಸು ಮಾಡುತ್ತಿರುವ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಇದನ್ನು ವೀಕ್ಷಿಸಿದವರಲ್ಲಿ ಕುತೂಹಲ ಹುಟ್ಟುಹಾಕಿದೆ.
ಇಶುಪುತ್ರರೆಂದೇ ಖ್ಯಾತರಾಗಿರುವ ಮಹಾಯೋಗಿ ಸತ್ಯೇಂದ್ರನಾಥ್ ಕೌಲಾಂತಕ ಪೀಠದ ಮುಖ್ಯಸ್ಥರಾಗಿದ್ದು ಹಿಮಾಲಯದ ಸಿದ್ದ ಯೋಗ ಸಂಪ್ರದಾಯವನ್ನು ಅನುಸರಿಸುತ್ತಿದ್ದಾರೆ. ಅವರು ಫೆಬ್ರವರಿ ಆರಂಭದಲ್ಲಿ ಹಿಮಾಲಯಕ್ಕೆ ತೆರಳಿದ್ದು ಒಂದು ತಿಂಗಳ ಕಾಲ ಪ್ರತಿಕೂಲ ಹವಾಮಾನದ ನಡುವೆಯೇ ಕಠಿಣ ಯೋಗಾಭ್ಯಾಸ ಹಾಗೂ ಧ್ಯಾನ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಜೊತೆಗಿರುವ ಅನುಯಾಯಿ ರಾಹುಲ್ ಈ ಕಠಿಣ ತಪಸ್ಸಿನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅದರಂತೆ ಹಿಮಗಡ್ಡೆಗಳು ಅವರ ಮೈಗಂಟಿಕೊಂಡಿದ್ದರೂ ಧ್ಯಾನದಲ್ಲಿ ತಲ್ಲೀನರಾಗಿರುವುದು ಕಂಡುಬಂದಿದೆ.