ಉತ್ತರ ಕನ್ನಡ ಜಿಲ್ಲೆಯಲ್ಲಿ ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ದೀಪಗಳನ್ನು ಬೆಳಗಿಸಿ, ಮನಸ್ಸಿನ ಕತ್ತಲೆಯನ್ನು ಹೊರದೂಡಿ, ಬೆಳಕಿನೆಡೆಗೆ ಸಾಗುವ ಮೂಲಕ ಮಾಲಿನ್ಯ ರಹಿತ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸೋಣ ಎಂದು ಅವರು ಕರೆ ನೀಡಿದ್ದಾರೆ.
ದೀಪಾವಳಿಯ ಸಂದರ್ಭದಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಮತ್ತು ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಲು, ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಹಸಿರು ಪಟಾಕಿಗಳನ್ನು ಸಿಡಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ನಿಷೇಧಿತ ಪಟಾಕಿಗಳ ಬಳಕೆಯಿಂದ ವಾಯು ಮಾಲಿನ್ಯ ಮತ್ತು ಪರಿಸರ ಹದಗೆಡುತ್ತದೆ.
ಅಲ್ಲದೆ, ಪ್ರಾಣಿ, ಪಕ್ಷಿ, ಮಕ್ಕಳು ಮತ್ತು ವೃದ್ಧರಿಗೆ ತೊಂದರೆಯಾಗಬಹುದು. ಆಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳ ವಸತಿ ಗೃಹಗಳು, ವೃದ್ಧಾಶ್ರಮಗಳು ಮತ್ತು ಇತರೆ ನಿಷೇಧಿತ ಪ್ರದೇಶಗಳ ಸುತ್ತಮುತ್ತ ಪಟಾಕಿ ಸಿಡಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪಟಾಕಿ ಮಾರಾಟಗಾರರು ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಬೇಕು ಎಂದು ಸೂಚಿಸಲಾಗಿದೆ. ಸಾರ್ವಜನಿಕರು ಪಟಾಕಿಗಳನ್ನು ಖರೀದಿಸುವಾಗ ಹಸಿರು ಚಿಹ್ನೆ ಮತ್ತು ಕ್ಯೂಆರ್ ಕೋಡ್ ಅನ್ನು ಪರಿಶೀಲಿಸುವಂತೆ ತಿಳಿಸಲಾಗಿದೆ.
ಜಿಲ್ಲೆಯ ಸಮಸ್ತ ಜನರಿಗೆ ಜಿಲ್ಲಾಧಿಕಾರಿ ಲಕ್ಷ್ಮಿ ಪ್ರಿಯಾ ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.