ಉತ್ತರ ಕನ್ನಡ: ಜಿಲ್ಲೆಯಾದ್ಯಂತ ಸ್ವಚ್ಛತಾ ಹಿ ಸೇವಾ ಪಾಕ್ಷಿಕ ಅಭಿಯಾನ

0
31

ದಾಂಡೇಲಿ: ಗ್ರಾಮೀಣ ಭಾರತದಲ್ಲಿ ಸಂಪೂರ್ಣ ನೈರ್ಮಲ್ಯದತ್ತ ಪ್ರಯತ್ನಗಳನ್ನು ವೇಗಗೊಳಿಸಲು ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು ಸ್ವಚ್ಚತಾ ಹಿ ಸೇವಾ ಎಂಬ ಪಾಕ್ಷಿಕ ಅಭಿಯಾನವನ್ನು ಪ್ರಾರಂಭಿಸಿದೆ. ಈ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಸೆಪ್ಟಂಬರ್ 17 ರಿಂದ ಅಕ್ಟೋಬರ್ 2 ರ ವರೆಗೆ ಸ್ವಚ್ಛತಾ ಹಿ ಸೇವಾ ಪಾಕ್ಷಿಕ ಅಭಿಯಾನವನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಡಾ.ದಿಲೀಷ್ ಶಶಿ ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಸಾರ್ವಜನಿಕರಲ್ಲಿ ನೈರ್ಮಲ್ಯ ಮತ್ತು ಶುಚಿತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಸೆ.17 ರಿಂದ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಸ್ವಚ್ಛತಾ ಹಿ ಸೇವಾ ಪಾಕ್ಷಿಕ ಅಭಿಯಾನವನ್ನು ಅತ್ಯಂತ ಪರಿಣಾಮಕಾರಿಯಾಗಿ ಆಯೋಜಿಸಲು ಕ್ರಮಗಳನ್ನು ಕೈಗೊಂಡಿದ್ದು, ಈ ಕುರಿತಂತೆ ಎಲ್ಲ ಗ್ರಾಮ ಪಂಚಾಯತಗಳಿಗೆ ನಿರ್ದೆಶನಗಳನ್ನು ನೀಡಲಾಗಿದೆ.

ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯ ಜೊತೆಗೆ ಎಲ್ಲಾ ಜನಪ್ರತಿನಿಧಿಗಳು ಮತ್ತು ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ತಾಲೂಕು ಮತ್ತು ಗ್ರಾಮ ಪಂಚಾಯತ್ ಮಟ್ಟದಲ್ಲಿ ಕ್ರಿಯಾಶೀಲ ಕಾರ್ಯಕ್ರಮಗಳನ್ನು ರೂಪಿಸಲಾಗುವದು ಎಂದು ತಿಳಿಸಿದ್ದಾರೆ.

ಈ ಪಾಕ್ಷಿಕ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ, ಶಾಲೆ, ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಹಮ್ಮಿಕೊಳ್ಳಲಾಗುತ್ತಿದ್ದು, ಜಿಲ್ಲಾ ಮಟ್ಟದಲ್ಲಿ ಸ್ವಚ್ಛತೆಯ ಸೇವೆ ಉದ್ಘಾಟನಾ ಕಾರ್ಯಕ್ರಮ ಜೊತೆಗೆ ವಿವಿಧ ಇಲಾಖೆಗಳ ಸಮನ್ವಯ ಸಮಿತಿ ರಚಿಸಿ, ಅಭಿಯಾನದ ಮೇಲ್ವಿಚಾರಣೆ ಮಾಡಲಾಗುವದು.

ಬೃಹತ್ ಕಸ ರಾಶಿ ಹೊಂದಿರುವ ಸ್ಥಳಗಳು ಮತ್ತು ವಿವಿಧ ಸಂಸ್ಥೆಗಳ ಆವರಣಗಳಲ್ಲಿ ಶುಚಿತ್ವ ಸುಧಾರಿಸಲು ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಗಳು, ನೈರ್ಮಲ್ಯ ಕಾರ್ಯಕರ್ತರಿಗೆ ಆರೋಗ್ಯ ತಪಾಸಣೆ ಮತ್ತು ಸರ್ಕಾರದ ವತಿಯಿಂದ ಜಾರಿ ಮಾಡಿರುವ ವಿವಿಧ ಜನಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ನೀಡಲು ಏಕಗವಾಕ್ಷಿ ಶಿಬಿರಗಳ ಆಯೋಜನೆ, ಪರಿಸರ ಸ್ನೇಹಿ ಮತ್ತು ತ್ಯಾಜ್ಯ ರಹಿತ ಹಬ್ಬಗಳ ಆಚರಣೆಗೆ ಪ್ರೋತ್ಸಾಹ,ಸ್ವಚ್ಛ ಸುಜಲ ಗ್ರಾಮ, ತ್ಯಾಜ್ಯದಿಂದ ಕಲಾಕೃತಿಗಳ ರಚನೆ,ಸ್ವಚ್ಛ ಬೀದಿ -ಸ್ವಚ್ಛ ಆಹಾರ ಮತ್ತು ಆರ್. ಆರ್.ಆರ್. ಕೇಂದ್ರಗಳ ಬಗ್ಗೆ ಜಾಗೃತಿ ಮೂಡಿಸಲಾಗುವದು ಎಂದು ತಿಳಿಸಿದರು.

Previous articleಮೈಸೂರು: ದಸರಾ ಉತ್ಸವಕ್ಕೆ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಅವರಿಗೆ ಅಧಿಕೃತ ಆಹ್ವಾನ
Next articleMovie Review: ಸರ್ಕಾರಿ ಶಾಲೆ ಉಳಿಸುವ ಮಕ್ಕಳ ಮಹೋನ್ನತ ಗುರಿ

LEAVE A REPLY

Please enter your comment!
Please enter your name here