ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ಯುವಕನೊಬ್ಬನ ಆತ್ಮಹತ್ಯೆ ಪ್ರಕರಣವು ಹಲವು ಅನುಮಾನಗಳಿಗೆ ಎಡೆಮಾಡಿದೆ. ಈ ಯುವಕ ಹನಿಟ್ರ್ಯಾಪ್ಗೆ ಬಲಿಯಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಸಾವಿಗೂ ಮುನ್ನ ಬರೆದಿರುವ ಏಳು ಪುಟಗಳ ಸುದೀರ್ಘ ಡೆತ್ ನೋಟ್ ಹಲವು ಸ್ಫೋಟಕ ವಿಷಯಗಳನ್ನು ಬಹಿರಂಗಪಡಿಸಿದೆ.
ಈ ಡೆತ್ ನೋಟ್ನಲ್ಲಿರುವ ಮಾಹಿತಿ, ಪ್ರಕರಣದ ವಿವರಗಳು ಮತ್ತು ಪೊಲೀಸ್ ತನಿಖೆಯ ಕುರಿತು ಇಲ್ಲಿ ವಿವರಿಸಲಾಗಿದೆ. ನಿಟ್ಟೆ ಗ್ರಾಮದ ಅಭಿಷೇಕ್ ಇತ್ತೀಚೆಗೆ ಖಾಸಗಿ ಲಾಡ್ಜ್ ಒಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಸಾವಿನ ನಂತರ ದೊರೆತ ಏಳು ಪುಟಗಳ ಡೆತ್ ನೋಟ್, ತಾನು ಪ್ರೀತಿಸುತ್ತಿದ್ದ ಹುಡುಗಿ ನಿರೀಕ್ಷಾ ಮತ್ತು ಆಕೆಯ ತಂಡದಿಂದ ಬ್ಲಾಕ್ಮೇಲ್ಗೆ ಒಳಗಾಗಿದ್ದಾಗಿ ತಿಳಿಸಿದೆ.
ಡೆತ್ ನೋಟ್ ಪ್ರಕಾರ, ನಿರೀಕ್ಷಾ ಮೊದಲು ಪ್ರೀತಿಯ ನಾಟಕವಾಡಿ ಅಭಿಷೇಕ್ನ ಅಶ್ಲೀಲ ಫೋಟೋಗಳನ್ನು ತೆಗೆದುಕೊಂಡಿದ್ದಳು. ನಂತರ, ಆಕೆ ಮತ್ತು ಆಕೆಯ ತಂಡದಲ್ಲಿರುವ ಮಂಗಳೂರು ಮೂಲದ ರಾಕೇಶ್, ರಾಹುಲ್ ಹಾಗೂ ತಸ್ಲೀಮ್ ಎಂಬುವರು ಸುಮಾರು 4 ಲಕ್ಷ ರೂ. ಗೂ ಹೆಚ್ಚು ಹಣವನ್ನು ಅಭಿಷೇಕ್ನಿಂದ ಕೀಳಲು ಯತ್ನಿಸಿದ್ದಾರೆ.
ಹೆಚ್ಚಿನ ಹಣಕ್ಕಾಗಿ ನಿರಂತರವಾಗಿ ಬೇಡಿಕೆ ಇಟ್ಟಿದ್ದರಿಂದ ರೋಸಿಹೋಗಿ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಡೆತ್ ನೋಟ್ನಲ್ಲಿ ಬರೆದಿದ್ದಾರೆ. ಈ ತಂಡವು ಅನೇಕ ಜನರನ್ನು ಇದೇ ರೀತಿ ಬ್ಲಾಕ್ಮೇಲ್ ಮಾಡಿ ವಂಚಿಸಿದೆ ಎಂದೂ ಆರೋಪಿಸಲಾಗಿದೆ.
ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಮೆಡಿಕಲ್ ಸಲಕರಣೆಗಳ ಸರ್ವಿಸಿಂಗ್ ಕೆಲಸ ಮಾಡುತ್ತಿದ್ದ ಅಭಿಷೇಕ್, ಅದೇ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ನಿರೀಕ್ಷಾಳ ಬಲೆಗೆ ಬಿದ್ದಿದ್ದ ಎನ್ನಲಾಗಿದೆ. ಈ ಪ್ರಕರಣ ಕುಟುಂಬಸ್ಥರಿಗೆ ಮತ್ತು ಅಭಿಷೇಕ್ನ ಸಹೋದರ ಸಂಬಂಧಿಗಳಿಗೆ ಆಘಾತ ತಂದಿದೆ. ಅಭಿಷೇಕ್ ಕುಟುಂಬದ ನೆರವಿಗೆ ವಿಶ್ವಕರ್ಮ ಸಂಘಟನೆಗಳು ಬಂದಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸುವಂತೆ ಒತ್ತಾಯಿಸಿವೆ.
ಪೊಲೀಸ್ ಇಲಾಖೆ ಕೂಡ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಡೆತ್ ನೋಟ್ನಲ್ಲಿ ಆರೋಪಿಸಲಾಗಿರುವ ವ್ಯಕ್ತಿಗಳನ್ನು ಕರೆಸಿ ವಿಚಾರಣೆ ನಡೆಸಲಾಗಿದೆಯಾದರೂ, ಪ್ರಾಥಮಿಕ ತನಿಖೆಯಲ್ಲಿ ಅಥವಾ ಮೊಬೈಲ್ ದಾಖಲೆಗಳಲ್ಲಿ ಯಾವುದೇ ಸ್ಪಷ್ಟ ಸುಳಿವು ದೊರೆತಿಲ್ಲ.
ಪ್ರೇಮ ವೈಫಲ್ಯದಿಂದಲೇ ಅಭಿಷೇಕ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದಾಗ್ಯೂ, ಹನಿಟ್ರ್ಯಾಪ್ನಂತಹ ಗಂಭೀರ ಆರೋಪಗಳಿರುವ ಹಿನ್ನೆಲೆಯಲ್ಲಿ ಆರೋಪಿತ ವ್ಯಕ್ತಿಗಳ ಮೊಬೈಲ್ಗಳನ್ನು ರಿಟ್ರೈವ್ ಮಾಡಲು ಕಳುಹಿಸಲಾಗಿದೆ. ತಾಂತ್ರಿಕ ದಾಖಲೆಗಳ ಮೂಲಕ ಈ ಪ್ರಕರಣವನ್ನು ಭೇದಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.























