ಅಂತರ್ಜಾತಿ ವಿವಾಹ ಹೆಚ್ಚಾಗಲಿ: ಪ್ರತಿ ದಂಪತಿಗೆ ಒಂದೋ-ಎರಡೋ ಮಕ್ಕಳು ಸಾಕು – ಸಿಎಂ ಸಿದ್ದರಾಮಯ್ಯ

0
83

ಧಾರವಾಡ: ದೇಶದ ಜನಸಂಖ್ಯೆ ನಿಯಂತ್ರಣದ ಅಗತ್ಯದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಹೇಳಿಕೆ ನೀಡಿದ್ದು, ಪ್ರತಿ ದಂಪತಿಯು ಒಂದು ಅಥವಾ ಎರಡು ಮಕ್ಕಳಿಗೆ ಸೀಮಿತಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ನವಲಗುಂದ ಪಟ್ಟಣದ ಮಾಡೆಲ್‌ ಹೈಸ್ಕೂಲ್ ಆವರಣದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ್ದಾರೆ.

ಭಾರತ ಚೀನಾವನ್ನು ಹಿಂದಿಕ್ಕಿದೆ: “ದೇಶದ ಜನಸಂಖ್ಯೆ ತೀವ್ರವಾಗಿ ಹೆಚ್ಚಾಗಿದೆ. ಜನಸಂಖ್ಯೆಯಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿದೆ. ಇದನ್ನು ನಿಯಂತ್ರಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಹೀಗಾಗಿ ಪ್ರತಿಯೊಂದು ದಂಪತಿಯು ಜನಸಂಖ್ಯಾ ನಿಯಂತ್ರಣಕ್ಕೆ ಸಹಕರಿಸಿ ಒಂದೋ ಎರಡೋ ಮಕ್ಕಳು ಮಾಡಿಕೊಳ್ಳುವುದು ಸೂಕ್ತ,” ಎಂದು ಮುಖ್ಯಮಂತ್ರಿಗಳು ಒತ್ತಿ ಹೇಳಿದರು.

ಇದೇ ವೇಳೆ ಸಾಮಾಜಿಕ ಸಮಾನತೆಯ ಕುರಿತು ಹೇಳಿದರು. “ಸಮಾಜದಲ್ಲಿ ಜಾತಿ, ವರ್ಗ ಪದ್ಧತಿ ಮತ್ತು ಅಸ್ಪೃಶ್ಯತೆ ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು. ಇದಕ್ಕೆ ಪೂರಕವಾಗಿ ಅಂತರ್ಜಾತಿ ವಿವಾಹಗಳು ಹೆಚ್ಚಾಗಬೇಕು,” ಎಂದು ಕರೆ ನೀಡಿದರು.

ಆದರ್ಶ ದಂಪತಿಗಳಾಗಿ: ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, “ಹೊಸ ಬಾಳಿಗೆ ಕಾಲಿಟ್ಟ ವಧು-ವರರು ಆದರ್ಶ ದಂಪತಿಗಳಾಗಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು. ಯುವಕರು ಸರ್ಕಾರಿ ಉದ್ಯೋಗವನ್ನೇ ಅವಲಂಬಿಸದೆ, ಸ್ವಂತ ಉದ್ಯೋಗ ಆರಂಭಿಸಿ ಉದ್ಯೋಗದಾತರಾಗಬೇಕು,” ಎಂದು ಶುಭ ಹಾರೈಸಿದರು.

ಸರ್ಕಾರದ ಆಶಯವನ್ನು ಸ್ಪಷ್ಟಪಡಿಸಿದ ಡಿಕೆಶಿ, “ಕುವೆಂಪು ಹೇಳಿದಂತೆ ನಮ್ಮ ನಾಡನ್ನು “ಸರ್ವ ಜನಾಂಗದ ಶಾಂತಿಯ ತೋಟವಾಗಿಸುವುದು” ನಮ್ಮ ಆಶಯ. ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತ ತತ್ವಗಳು ನಮ್ಮ ಸರ್ಕಾರದ ಧೈಯಗಳಾಗಿವೆ,” ಎಂದರು.

ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಒಟ್ಟು 75 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಶಾಸಕ ಎನ್.ಎಚ್.ಕೋನರಡ್ಡಿ ಅವರ ಪುತ್ರ ನವೀನ್ ಕುಮಾರ್ ಮತ್ತು ಸಹನಾ ಅವರ ಆರತಕ್ಷತೆ ಕೂಡ ಇದೇ ಸಂದರ್ಭದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಚಿವರಾದ ಸಂತೋಷ ಲಾಡ್, ಕೃಷ್ಣ ಬೈರೇಗೌಡ, ಡಾ ಎಚ್.ಸಿ. ಮಹದೇವಪ್ಪ, ಹಾಗೂ ಶಾಸಕರಾದ ಪ್ರಸಾದ ಅಬ್ಬಯ್ಯ ಮತ್ತು ಎನ್‌.ಎಚ್‌.ಕೋನರಡ್ಡಿ ಉಪಸ್ಥಿತರಿದ್ದರು.

Previous articleಮಹಿಳೆ ಸಾವಿಗೆ ಕಾರಣವಾಗಿದ್ದ ಶ್ವಾನಗಳ ಮಾಲೀಕನ ಬಂಧನ
Next articleವಿಮಾನ ವಿಳಂಬದಿಂದ ಜೀವ ಉಳಿಯಿತು

LEAVE A REPLY

Please enter your comment!
Please enter your name here