ಧರ್ಮಸ್ಥಳ: ಸತ್ಯವೇ ಗೆಲ್ಲುತ್ತದೆ ಸಂಚು ಸಾಯುತ್ತದೆ: ವೀರೇಂದ್ರ ಹೆಗ್ಗಡೆ

0
81

ಮಂಗಳೂರು: ಧರ್ಮಸ್ಥಳ ಪ್ರಕರಣದ ಕುರಿತು ದೇಶ, ವಿದೇಶದಲ್ಲಿ ಸದ್ದು ಕೇಳಿ ಬರುತ್ತಿದೆ. ಕರ್ನಾಟಕ ಸರ್ಕಾರ ಪ್ರಕರಣಗಳ ತನಿಖೆಗೆ ಎಸ್‌ಐಟಿ ರಚನೆ ಮಾಡಿದೆ. ಧರ್ಮಸ್ಥಳದ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಈ ಕುರಿತು ಮೌನ ಮುರಿದಿದ್ದಾರೆ. ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಅವರು, “ಈಗ ಕೇಳಿಬಂದಿರುವ ಆರೋಪಗಳೆಲ್ಲಾ ಆಧಾರ ರಹಿತ ಹಾಗೂ ಸಂಪೂರ್ಣ ಸುಳ್ಳಾಗಿವೆ. ಸತ್ಯವೇ ಗೆಲ್ಲುತ್ತದೆ, ಸಂಚು ಸಾಯುತ್ತದೆ” ಎಂದು ಹೇಳಿದ್ದಾರೆ.

“ಭಕ್ತರ ದಾರಿ ತಪ್ಪಿಸಲು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಗಳನ್ನು ಮಾಡಲಾಗಿದೆ. ಇದರಿಂದ ತೀವ್ರ ನೋವಾಗಿದೆ. ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ, ಪಿತೂರಿಗಳು ಕೊನೆಗೊಳ್ಳುತ್ತವೆ. ನಮ್ಮ ವಿರುದ್ಧದ ಎಲ್ಲಾ ಎಲ್ಲಾ ಆರೋಪಗಳೂ ಸುಳ್ಳು, ಆರೋಪಗಳ ನಡುವೆಯೂ ಕ್ಷೇತ್ರಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಲೇ ಇದ್ದಾರೆ. ಪೂಜೆ, ಆಚರಣೆಗಳು ಎಂದಿನಂತೆ ನಡೆಯುತ್ತಿವೆ” ಎಂದು ತಿಳಿಸಿದ್ದಾರೆ.

“ಆರೋಪಗಳ ತನಿಖೆಗೆ ಕರ್ನಾಟಕ ಸರ್ಕಾರ ಎಸ್‌ಐಟಿ ರಚಿಸಿರುವುದು ಸ್ವಾಗತಾರ್ಹ, ಸತ್ಯ ಎಲ್ಲರಿಗೂ ತಿಳಿಯಲು ಬೇಗ ತನಿಖೆ ಪೂರ್ಣಗೊಳ್ಳಲಿ. ನಾವು ನಮ್ಮ ಎಲ್ಲಾ ದಾಖಲೆಗಳನ್ನು ತೆರೆದಿಟ್ಟಿದ್ದೇವೆ. ತನಿಖೆಗೆ ಸಂಪೂರ್ಣವಾಗಿ ಸಹಕಾರ ನೀಡಲಾಗುತ್ತಿದೆ. ಧರ್ಮಸ್ಥಳದಲ್ಲಿ ಯಾವುದೇ ಅಕ್ರಮ ನಡೆಯುತ್ತಿಲ್ಲ. ಎಲ್ಲಾ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಗಳು ಟ್ರಸ್ಟ್ ಅಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದೆ. ನಮ್ಮ ಕುಟುಂಬದ ಒಡೆತನದ ಆಸ್ತಿ ಬಹಳ ಕಡಿಮೆಯಿದೆ. ಹೆಚ್ಚಿನ ಆಸ್ತಿ ಟ್ರಸ್ಟ್‌ಗೆ ಸೇರಿದ್ದು ಅದಕ್ಕೆ ದಾಖಲೆಗಳಿವೆ. ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಯುತ್ತಿದ್ದರೂ ನಾವು ಅಚಲವಾಗಿ ನಮ್ಮ ಸಮಾಜ ಸೇವೆ ಮುಂದುವರಿಸಿದ್ದೇವೆ” ಎಂದು ಹೆಗ್ಗಡೆ ಸಂದರ್ಶನದಲ್ಲಿ ಹೇಳಿದ್ದಾರೆ.

ಸಂದರ್ಶನದ ಪ್ರಮುಖ ಅಂಶ

  • ಧರ್ಮಸ್ಥಳದಲ್ಲಿ ಯಾವುದೇ ಅಕ್ರಮ ನಡೆಯುತ್ತಿಲ್ಲ. ಟ್ರಸ್ಟ್ ಅಡಿಯಲ್ಲೇ ಎಲ್ಲಾ ಧಾರ್ಮಿಕ, ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿವೆ.
  • ಧರ್ಮಸ್ಥಳದಲ್ಲಿ ಯಾರೇ ಮೃತಪಟ್ಟರೂ, ಪಂಚಾಯತ್‌ಗೆ ತಿಳಿಸಿ ಕಾನೂನಿನಂತೆ ಮುಂದುವರಿಯುತ್ತೇವೆ.
  • ದೇವಾಲಯದ ಮಾನಹಾನಿಗೆ ಕೆಲವರು ಪ್ರಯತ್ನಿಸುತ್ತಿದ್ದು, ಪಕ್ಷಾತೀತವಾಗಿ ಬೆಂಬಲಕ್ಕೆ ನಿಂತಿದ್ದಾರೆ.
  • ದೇವಾಲಯದ ಅಧಿಕಾರಿಗಳು ತಪ್ಪು ಮಾಡಿದ್ದರೂ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಧರ್ಮಸ್ಥಳದ ವಿವಿಧ ಕಡೆಗಳಲ್ಲಿ ಶವಗಳನ್ನು ಹೂತು ಹಾಕಲಾಗಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿ, “ಈ ಆರೋಪಗಳು ಸುಳ್ಳು, ಧರ್ಮಸ್ಥಳದಲ್ಲಿ ನಿಧನ ಹೊಂದಿದವರು ಮೋಕ್ಷವನ್ನು ಪಡೆಯುತ್ತಾರೆ ಎಂಬ ಜನಪ್ರಿಯ ನಂಬಿಕೆ ಇದೆ. ಯಾರೇ ಮೃತಪಟ್ಟರೂ ನಾವು ಪಂಚಾಯತ್‌ಗೆ ತಿಳಿಸಿ ಕಾನೂನಿನಂತೆಯೇ ಮುಂದಿನ ಕಾರ್ಯ ನಡೆಸಿದ್ದೇವೆ. ಈಗ ಪ್ರಚಾರದಲ್ಲಿರುವ ಆರೋಪಗಳೆಲ್ಲವೂ ಕಟ್ಟುಕಥೆ” ಎಂದರು.

ಪಕ್ಷಾತೀತವಾಗಿ ರಾಜಕೀಯ ನಾಯಕರು ಧರ್ಮಸ್ಥಳಕ್ಕೆ ಬೆಂಬಲವಾಗಿ ಭೇಟಿ ನೀಡುವ ಬಗ್ಗೆ ಪ್ರತಿಕ್ರಿಯಿಸಿ, “ಇದು ರಾಜಕೀಯ ವಿಷಯವಲ್ಲ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್‌ ನಾಯಕರು ಇಲ್ಲಿಗೆ ಬಂದಿದ್ದಾರೆ. ದೇವಾಲಯದ ಮಾನಹಾನಿ ಮಾಡಲು ಕೆಲವರು ಪ್ರಯತ್ನಿಸುತ್ತಿರುವುದರಿಂದ ಎಲ್ಲಾ ಪಕ್ಷಗಳು ದೇವಸ್ಥಾನದ ಪರವಾಗಿ ನಿಂತಿದೆ” ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಪ್ರಕರಣದ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಲಾಗುತ್ತದೆ ಎಂದು ಹೇಳಿರುವುದನ್ನು ಸ್ವಾಗತಿಸಿದ್ದಾರೆ. ಇದು ಪಕ್ಷಪಾತರಹಿತ ನಿಲುವು, ದೇವಾಲಯದ ಅಧಿಕಾರಿಗಳು ತಪ್ಪು ಮಾಡಿದ್ದರೆ, ಕಾನೂನು ಕ್ರಮವನ್ನು ಅವರು ಎದುರಿಸಬೇಕಾಗುತ್ತದೆ. ಇತರರು ತಪ್ಪಿತಸ್ಥರಾಗಿದ್ದರೆ ಅವರಿಗೂ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದ ಪ್ರಭಾವ ಮತ್ತು ‘ಕಾಂತಾರ’ ಚಲನಚಿತ್ರದಂತಹ ಜನಪ್ರಿಯ ಸಂಸ್ಕೃತಿಯಲ್ಲಿನ ಉಲ್ಲೇಖಗಳ ಬಗ್ಗೆ ಮಾತನಾಡಿ, “ವಿಷಯಗಳನ್ನು ಬಿಂಬಿಸುವ ರೀತಿ ನಮಗೆ ಆಘಾತವನ್ನುಂಟು ಮಾಡಿದೆ. ಸಾಮಾಜಿಕ ಮಾಧ್ಯಮವು ಪ್ರಬಲವಾಗಿದೆ ಮತ್ತು ದುರದೃಷ್ಟವಶಾತ್, ಕೆಲ ಸ್ವಾರ್ಥಿಗಳು ಯುವ ಮನಸುಗಳನ್ನು, ಕಲುಷಿತಗೊಳಿಸಲು ಇದನ್ನು ಬಳಸಿಕೊಂಡಿದ್ದಾರೆ. ನಾವು ನಮ್ಮ ಒಳ್ಳೆಯ ಕೆಲಸವನ್ನು ಎಂದಿಗೂ ಪ್ರಚಾರ ಮಾಡಿಲ್ಲ. ಆದರೆ ನಮ್ಮ ಸೇವೆ 55 ಲಕ್ಷ ಕುಟುಂಬಗಳನ್ನು ತಲುಪಿದೆ” ಎಂದರು.

Previous articleಧಾರವಾಡ: ಮಮತಾ ಫಾರ್ಮ್ ಹೌಸ್ ನಲ್ಲಿ ದರೋಡೆ, 15 ಆರೋಪಿಗಳ ಬಂಧನ
Next articleದೆಹಲಿ: ಜನರ ಸಮಸ್ಯೆ ಆಲಿಸುವಾಗ ಸಿಎಂಗೆ ಕಪಾಳಮೋಕ್ಷ!

LEAVE A REPLY

Please enter your comment!
Please enter your name here