ರಕ್ತದಾನದಿಂದ ಜೀವ ಉಳಿಸಿದ ಆತ್ಮತೃಪ್ತಿ: ಡಿವೈಎಸ್‌ಪಿ ಸತ್ಯನಾರಾಯಣ ರಾವ್

0
4

ಚಳ್ಳಕೆರೆ: ರಕ್ತದಾನ ಮಾಡುವುದರಿಂದ ರಕ್ತದೊತ್ತಡ ಮತ್ತು ಮಧುಮೇಹದಂತಹ ಕಾಯಿಲೆಗಳು ನಿಯಂತ್ರಣಕ್ಕೆ ಬರುವುದಲ್ಲದೆ, ಆಪತ್ತಿನಲ್ಲಿರುವವರ ಜೀವ ಉಳಿಸಿದ ಶ್ರೇಷ್ಠ ಆತ್ಮತೃಪ್ತಿ ದೊರೆಯುತ್ತದೆ, ಎಂದು ಡಿವೈಎಸ್‌ಪಿ ಸತ್ಯನಾರಾಯಣ ರಾವ್ ಅಭಿಪ್ರಾಯಪಟ್ಟರು.

ಪಟ್ಟಣದ ಬಾಲಾಜಿ ಬ್ಲಡ್ ಬ್ಯಾಂಕ್‌ನಲ್ಲಿ, ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಪೊಲೀಸ್ ಇಲಾಖೆ ಹಾಗೂ ಬಾಲಾಜಿ ಬ್ಲಡ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಉಚಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಪಘಾತಗಳು ಅಥವಾ ತುರ್ತು ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲಿ ರಕ್ತದ ಲಭ್ಯತೆ ಇಲ್ಲದೆ ಪ್ರಾಣಹಾನಿ ಸಂಭವಿಸುವ ಉದಾಹರಣೆಗಳಿವೆ. ಇಂತಹ ಸಾವು-ನೋವುಗಳನ್ನು ತಡೆಯಲು ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು. ಅಮೂಲ್ಯವಾದ ಜೀವಗಳನ್ನು ಉಳಿಸಲು ರಕ್ತದಾನ ಅತ್ಯಗತ್ಯ ಎಂದು ಅವರು ಕರೆ ನೀಡಿದರು.

ಚಿತ್ರದುರ್ಗ ಜಿಲ್ಲೆಯಾದ್ಯಂತ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಶಿಬಿರದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ, ಗೃಹರಕ್ಷಕ ದಳದ ಸದಸ್ಯರು ಹಾಗೂ ಪಟ್ಟಣದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ರಕ್ತದಾನ ಮಾಡಿದರು.

ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಹನುಮಂತಪ್ಪ, ಠಾಣಾಧಿಕಾರಿ ಕೆ. ಕುಮಾರ್, ಪಿ ಎಸ್‌ ಐಗಳಾದ ಈರೇಶ್, ಶಿವರಾಜ್, ಧರಪ್ಪ ಹಾಗೂ ಪೊಲೀಸ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Previous articleನವೆಂಬರ್ ಕ್ರಾಂತಿ ಊಹಾಪೋಹ: ಒಗ್ಗಟ್ಟಿನ ಮಂತ್ರ ಜಪಿಸಿದ ಡಿಕೆಶಿ, ಸಿದ್ದು ಪ್ರತಿಕ್ರಿಯೆ ಏನು?
Next articleMovie Review: ಚೆಲುವೆಯರ ಮಧ್ಯೆ – ಬಡಪಾಯಿ ಬ್ರದರ್

LEAVE A REPLY

Please enter your comment!
Please enter your name here