ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ

0
16

ಬೆಂಗಳೂರು: ಸರ್ಕಾರದ ಸ್ಪಷ್ಟ ನೀತಿಗಳು, ಸುಗಮ ಅನುಮತಿಗಳು, ಕೌಶಲ್ಯ, ಮೂಲಸೌಕರ್ಯ ಹಾಗೂ ಪೂರಕ ವಾತಾವರಣಗಳು, ಕರ್ನಾಟಕವನ್ನು ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಸಾಫ್ಟ್‌ವೇರ್ ಟೆಕ್ನಾಲಜೀ ಪಾರ್ಕ್ಸ್ ಆಫ್ ಇಂಡಿಯಾ, ಬೆಂಗಳೂರು ಇವರ ವತಿಯಿಂದ ಆಯೋಜಿಸಲಾದ ‘ಬೆಂಗಳೂರು ಟೆಕ್ ಸಮ್ಮಿಟ್’ 28ನೇ ಆವೃತ್ತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಮುಖ ನೀತಿಗಳ ರಚನೆ-ಐತಿಹಾಸಿಕ ಹೆಜ್ಜೆ: ಈ ಶೃಂಗಸಭೆಯಲ್ಲಿ, ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿ 2025–2030, ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-2030, ಮತ್ತು ಸ್ಟಾರ್ಟ್ಅಪ್ ನೀತಿ 2025-2030 ಗಳಂತಹ ಮೂರು ಪ್ರಮುಖ ನೀತಿಗಳನ್ನು ರಚಿಸುವ ಮೂಲಕ ಐತಿಹಾಸಿಕ ಹೆಜ್ಜೆಯನ್ನು ಇಡಲಾಗಿದೆ. ದತ್ತಾಂಶ ಚಾಲಿತ ಹಾಗೂ ಆಧುನಿಕ ತಂತ್ರಜ್ಞಾನಕ್ಕೆ ಪೂರಕವಾದ ಕರ್ನಾಟಕ ಮಾಹಿತಿ ತಂತ್ರಜ್ಞಾನ ನೀತಿಯಿಂದ, ರಾಜ್ಯವನ್ನು ನಾವೀನ್ಯತೆ ಮತ್ತು ಡೀಪ್ ಟೆಕ್‌ಗಳಿಗೆ ಜಾಗತಿಕ ತಾಣವಾಗಿಸುವ ಗುರಿಯನ್ನು ಸರ್ಕಾರ ಹೊಂದಿದೆ. 2034ರ ವೇಳೆಗೆ ಕರ್ನಾಟಕವನ್ನು ಭಾರತದ ಪ್ರಮುಖ ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರವಾಗಿ ಪರಿವರ್ತಿಸುವ ನಮ್ಮ ಗುರಿಗೆ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2025-30 ಸಹಕಾರಿಯಾಗಲಿದೆ. ಹೊಸ ಸ್ಟಾರ್ಟ್ಅಪ್ ನೀತಿಯಿಂದ ಮುಂದಿನ ಐದು ವರ್ಷಗಳಲ್ಲಿ ಬಂಡವಾಳ ನೆರವು, ಮಾರುಕಟ್ಟೆ ಅವಕಾಶ, ಮೂಲಸೌಲಭ್ಯ, ಕೌಶಲ್ಯಾಭಿವೃದ್ಧಿಯಂತಹ ಕ್ರಮಗಳ ಮೂಲಕ 25,000 ಸ್ಟಾರ್ಟ್ಅಪ್‌ಗಳ ಸ್ಥಾಪನೆಗೆ ನೆರವಾಗುವ ಗುರಿಯನ್ನು ಸರ್ಕಾರ ಹೊಂದಿದೆ.

ಕಳೆದ ಮೂರು ದಶಕಗಳಿಂದ ಬೆಂಗಳೂರಿನಲ್ಲಿ ಸಮಾವೇಶಗೊಳ್ಳುತ್ತಿರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು ಅಂತಾರಾಷ್ಟ್ರೀಯ ಸಹಭಾಗಿತ್ವದಲ್ಲಿ ನಾವೀನ್ಯತೆ ಮತ್ತು ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳನ್ನು ಸಂಶೋಧಿಸಿ, ಸೃಷ್ಟಿಸಿ ಹೊಸ ದಿಕ್ಕಿನಲ್ಲಿ ಹೆಜ್ಜೆಗಳನ್ನಿಟ್ಟು ವಿಶ್ವದ ಗಮನವನ್ನು ಕರ್ನಾಟಕದತ್ತ ಸೆಳೆಯುತ್ತಿದೆ ಎಂದರು.
  
ಪರಿವರ್ತನೆಯ ಮನ್ವಂತರಕ್ಕೆ ವೇದಿಕೆ: ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯು ಒಂದು ಸಮಾವೇಶಕ್ಕಿಂತಲೂ ಹೆಚ್ಚಾಗಿ ಹೊಸ ಹೊಸ ವಿಚಾರಗಳು, ಸಂವಾದಗಳು, ಬಂಡವಾಳ ಹೂಡಿಕೆ ಆವಿಷ್ಕಾರ ಮತ್ತು ಪರಿವರ್ತನೆಯ ಮನ್ವಂತರಕ್ಕೆ ವೇದಿಕೆಯಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಈ ಸಮ್ಮೇಳನ ಹಲವು ಉತ್ತಮ ಅವಕಾಶಗಳಿಗೆ ಜಾಗತಿಕ ವೇದಿಕೆಯಾಗಿ ಹೊಸ ಮುನ್ನುಡಿ ಬರೆಯಲಿ ಎಂದು ಹಾರೈಸುತ್ತೇನೆ ಎಂದರು.

ಈ ವರ್ಷದ ಧ್ಯೇಯವಾಕ್ಯ: “ಭವಿಷ್ಯೀಕರಣಗೊಳ್ಳಿ-ಅಜ್ಞಾತವನ್ನು ರೂಪಿಸುತ್ತಾ, ಊಹಿಸಿಲಾಗದ್ದನ್ನು ಅಳೆಯುತ್ತಾ, ಜಗತ್ತನ್ನು ಮುಂದೆ ಕೊಂಡೊಯ್ಯುವುದು” ಎಂಬುದಾಗಿದೆ. ಈ ಆಶಯ ನಮ್ಮ ಸಾಮೂಹಿಕ ಧ್ಯೇಯದ ಸಂಕಲ್ಪವನ್ನು ಎತ್ತಿ ಹಿಡಿಯುತ್ತದೆ.

ಈ ಧ್ಯೇಯ ವಾಕ್ಯದ ಆಶಯದಂತೆ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ – 2025, ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ 600ಕ್ಕೂ ಹೆಚ್ಚು ಜಾಗತಿಕ ಭಾಷಣಕಾರರು, 1200ಕ್ಕೂ ಹೆಚ್ಚು ಪ್ರದರ್ಶಕರು, 60ಕ್ಕೂ ಹೆಚ್ಚು ದೇಶದ ನಿಯೋಗಗಳು ಮತ್ತು ಸಾವಿರಾರು ಪರಿಣತರು ಮುಂದಿನ ದಶಕಗಳಲ್ಲಿ ತಂತ್ರಜ್ಞಾನದ ರೂಪುರೇಷೆಗಳನ್ನು, ಹೊಸ ಸಾಧ್ಯತೆಗಳನ್ನು ಇಲ್ಲಿ ಸಂವಾದಿಸಿ, ಕೇವಲ ಕರ್ನಾಟಕಕ್ಕಾಗಲಿ ಅಥವಾ ಭಾರತಕ್ಕೆ ಆಗಲಿ ಮಾತ್ರವಲ್ಲ, ಇಡೀ ಜಗತ್ತಿಗೇ ತೆರೆದಿಡುತ್ತಾರೆ.

ಕೃತಕ ಬುದ್ಧಿಮತ್ತೆ, ಕ್ವಾಂಟಮ್, ಬಯೋಟೆಕ್, ಬಾಹ್ಯಾಕಾಶ ಮತ್ತು ಹಸಿರು ತಂತ್ರಜ್ಞಾನಗಳಿಂದ  ಕೂಡಿರುವ ಡಿಜಿಟಲ್ ಯುಗದಲ್ಲಿ ನಾವು ನಿಂತಿದ್ದೇವೆ. ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2025 ದಿಟ್ಟ, ಮಾನವೀಯ ಮತ್ತು ಪರಿವರ್ತನಾತ್ಮಕ ಭವಿಷ್ಯವನ್ನು ಸಹ-ಸೃಷ್ಟಿಸಲು ಇಡೀ ಜಗತ್ತಿಗೆ ಕರ್ನಾಟಕದ ಆಹ್ವಾನವಾಗಿದೆ. ದಶಕಗಳಿಂದ, ಬೆಂಗಳೂರನ್ನು ಭಾರತದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತಿದೆ. ಆದರೆ ಇಂದು, ಅದು ಇನ್ನೂ ದೊಡ್ಡದಾಗಿ, ನಾವೀನ್ಯತೆ, ಪ್ರತಿಭೆ, ಸಂಶೋಧನೆ ಮತ್ತು ತಾಂತ್ರಿಕ ನಾಯಕತ್ವದ ಮುಂಚೂಣಿಯಲ್ಲಿ ಜಾಗತಿಕ ಕೇಂದ್ರವಾಗಿ ಬೆಳೆದು ನಿಂತಿದೆ ಎಂದರು.

ತಂತ್ರಜ್ಞಾನ ಶಕ್ತಿ ಕೇಂದ್ರವಾಗಿ ಕರ್ನಾಟಕದ ಬೆಳವಣಿಗೆ ಆಕಸ್ಮಿಕವಲ್ಲ: ಇದು ದೂರದೃಷ್ಟಿಯ ನೀತಿಗಳು, ಆಳವಾದ ಸಾಂಸ್ಥಿಕ ಶಕ್ತಿ ಮತ್ತು ಪ್ರತಿ ಹಂತದಲ್ಲೂ ಸೃಜನಶೀಲತೆ ಮತ್ತು ಶ್ರೇಷ್ಠತೆಯನ್ನು ಪೋಷಿಸುವ ಪರಿಸರ ವ್ಯವಸ್ಥೆಯ ಪರಿಣಾಮವಾಗಿದೆ. ಕರ್ನಾಟಕವು ಜ್ಞಾನಕಾಶಿ ಎಂಬುದನ್ನು ಹೆಮ್ಮೆಯಿಂದ ಹೇಳುತ್ತೇನೆ‌. 85 ವಿಶ್ವವಿದ್ಯಾಲಯಗಳು, 243 ಎಂಜಿನಿಯರಿಂಗ್ ಕಾಲೇಜುಗಳು ಮತ್ತು ಸುಮಾರು 1,800 ಐಟಿಐಗಳಿಗೆ ಕರ್ನಾಟಕ ನೆಲೆಯಾಗಿದೆ. ರಾಜ್ಯದ ನಿರುದ್ಯೋಗ ಪ್ರಮಾಣ 4.3% ರಷ್ಟು ಮಾತ್ರ ಇದ್ದು, ಇದು ರಾಜ್ಯದ ಸಮರ್ಥ ಉತ್ಪಾದಕತೆ ಮತ್ತು ಉದ್ಯೋಗಾವಕಾಶಗಳನ್ನು ಎತ್ತಿ ತೋರಿಸುತ್ತದೆ.

ಬೆಂಗಳೂರು ನಗರವು IISc, IIM-B, IIIT-B, NCBS, JNCASR, NIMHANS, DRDO ಪ್ರಯೋಗಾಲಯಗಳು, ISRO ಕೇಂದ್ರಗಳು ಮತ್ತು ಹಲವಾರು ವಿಶ್ವ ದರ್ಜೆಯ ಖಾಸಗಿ ವಿಶ್ವವಿದ್ಯಾಲಯಗಳಂತಹ ಪ್ರಮುಖ ಸಂಸ್ಥೆಗಳ ತವರಾಗಿ, ಸಾಟಿಯಿಲ್ಲದ ಬೌದ್ಧಿಕ ಪರಿಸರ ವ್ಯವಸ್ಥೆಯನ್ನು ಸೃಷ್ಟಿಸುತ್ತದೆ ಮತ್ತು ಪೋಷಿಸುತ್ತದೆ ಎಂಬುದು ಅತ್ಯಂತ ಮಹತ್ವದ ವಿಚಾರ. ಉದ್ಯಮಶೀಲತಾ ಶಕ್ತಿಗೆ ಬೆಂಗಳೂರು ಅನ್ವರ್ಥವಾಗಿದೆ. ಕರ್ನಾಟಕವು 16,000 ಕ್ಕೂ ಹೆಚ್ಚು ನವೋದ್ಯಮಗಳಿಗೆ ನೆಲೆಯಾಗಿದೆ ಮತ್ತು ಭಾರತದ ಒಟ್ಟು ನವೋದ್ಯಮ ನಿಧಿಗೆ ಸುಮಾರು 47% ರಷ್ಟನ್ನು ರಾಜ್ಯವು ಕೊಡುಗೆ ನೀಡಿದೆ ಎಂದರು.

ಕರ್ನಾಟಕವು ಭಾರತದ ಅತಿದೊಡ್ಡ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ: ಭಾರತದ ಐಟಿ ರಫ್ತಿನಲ್ಲಿ ನಾವು 42% ಕೊಡುಗೆ ನೀಡುತ್ತೇವೆ, ಇದರ ಮೌಲ್ಯ 3.2 ಲಕ್ಷ ಕೋಟಿ ರೂ. ಗಳಿಗಿಂತ ಹೆಚ್ಚು, ಮತ್ತು ಈ ಪ್ರಗತಿ ವರ್ಷದಿಂದ ವರ್ಷಕ್ಕೆ 27% ರಷ್ಟು ವೇಗವಾಗಿ ಬೆಳೆಯುತ್ತಿದೆ. ರಾಜ್ಯವು 550 ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು (ಜಿಸಿಸಿ) ಹೊಂದಿದೆ, ಇದು ಭಾರತದ ಒಟ್ಟು ಕಂಪನಿಯ ಮೂರನೇ ಒಂದು ಭಾಗವಾಗಿದೆ.

ಬೆಂಗಳೂರು ಸೆಮಿಕಂಡಕ್ಟರ್, ಏರೋಸ್ಪೇಸ್, ರಕ್ಷಣಾ, ಬಯೋಟೆಕ್, ಎಲೆಕ್ಟ್ರಾನಿಕ್ಸ್ ಉತ್ಪಾದನೆ, ಅನಿಮೇಷನ್ ಮತ್ತು ಗೇಮಿಂಗ್ ಮತ್ತು ಡೀಪ್-ಟೆಕ್‌ಗಳಿಗೆ ಪ್ರಮುಖ ಕೇಂದ್ರವಾಗಿದೆ. ನೀತಿ-ನಾವೀನ್ಯತೆ ರೂಪಿಸುವಲ್ಲಿ ಕರ್ನಾಟಕ ಯಾವಾಗಲೂ ಭಾರತವನ್ನು ಮುನ್ನಡೆಸಿದೆ. ನಾವು 1997 ರಲ್ಲಿಯೇ ಭಾರತದ ಮೊದಲ ತಂತ್ರಜ್ಞಾನ ನೀತಿಯನ್ನು ರೂಪಿಸಿದ್ದೇವೆ ಮತ್ತು ಹೊಸ ನೀತಿಗಳೊಂದಿಗೆ ಈ ನಾಯಕತ್ವವನ್ನು ಮುಂದುವರಿಸುತ್ತಿದ್ದೇವೆ.

ಜಾಗತಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಸಕ್ರಿಯ ಪಾಲ್ಗೊಳ್ಳುವಿಕೆ: ಸರ್ಕಾರದ ದೂರದೃಷ್ಟಿಯ ಆಡಳಿತದ ಪರಿಣಾಮವಾಗಿ, ಜಾಗತಿಕ ತಂತ್ರಜ್ಞಾನದ ಕ್ಷೇತ್ರದಲ್ಲಿ ಕರ್ನಾಟಕ ಸಕ್ರಿಯವಾಗಿ ಪಾಲ್ಗೊಂಡಿದೆ. ವಿದೇಶಿ ಬಂಡವಾಳ ಹೂಡಿಕೆ, ಜಾಗತಿಕ ಸಹಭಾಗಿತ್ವ ಹಾಗೂ ಬಹುರಾಷ್ಟ್ರೀಯ ಹೂಡಿಕೆಗಳಲ್ಲಿ ಕರ್ನಾಟಕವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ನಮ್ಮ ಪರಿಸರ ವ್ಯವಸ್ಥೆಯು ವಿಶ್ವದರ್ಜೆಯ ಇಂಜಿನಿಯರಿಂಗ್, ಪಾರದರ್ಶಕ ನೀತಿ, ಸದೃಢ ಐಪಿ ಸಂಸ್ಕೃತಿ ಹಾಗೂ ವೈವಿಧ್ಯಮಯ ಜಾಗತಿಕ ಸಮುದಾಯಗಳನ್ನು ಒಳಗೊಂಡಿದೆ. ನಮ್ಮ ವಾಣಿಜ್ಯ ಪರಿಸರಕ್ಕೆ ಉನ್ನತಮಟ್ಟದ ಕಾನೂನು, ಆರ್ಥಿಕ ಹಾಗೂ ತಾಂತ್ರಿಕ ಬಲದ ಬೆಂಬಲವಿದೆ. ವಿಶೇಷವಾಗಿ ಬೆಂಗಳೂರಿನ ಹವಾಮಾನ, ಬಹುಸಂಸ್ಕೃತಿಗಳು ವಿಶ್ವದ ಜನರನ್ನು ಆಕರ್ಷಿಸುತ್ತವೆ. ಒಟ್ಟಾರೆ, ರಾಜ್ಯವು ಹೂಡಿಕೆದಾರರಿಗೆ ಸಂಶೋಧನೆಯಿಂದ ಮಾರುಕಟ್ಟೆಯವರೆಗೂ, ಮೂಲಸೌಕರ್ಯದಿಂದ ಕೌಶಲ್ಯದವರೆಗಿನ ಎಲ್ಲ ಅಗತ್ಯತೆಗಳನ್ನು ಪೂರೈಸುತ್ತಿದ್ದು, ಕರ್ನಾಟಕವು ಜಾಗತಿಕ ತಂತ್ರಜ್ಞಾನ ಕ್ರಾಂತಿಯನ್ನು ಮುನ್ನಡೆಸುತ್ತಿದೆ ಎಂದರು.

ಕ್ವಾಂಟಮ್ ತಂತ್ರಜ್ಞಾನಕ್ಕೆ ಒತ್ತು ನೀಡಿದ ಮೊದಲ ರಾಜ್ಯ ಕರ್ನಾಟಕ: ಡೀಪ್ ಸೈನ್ಸ್ ಮತ್ತು ಸುಧಾರಿತ ಇಂಜಿನಿಯರಿಂಗ್ ವ್ಯವಸ್ಥೆ ಒದಗಿಸಲು ರಾಜ್ಯ ಬದ್ಧವಾಗಿದ್ದು, ಎಐ, ಸೈಬರ್-ಭದ್ರತೆ, ದತ್ತಾಂಶ ವಿಜ್ಞಾನ, ಅನಿಮೇಷನ್ ಮತ್ತು ರೊಬೊಟಿಕ್ಸ್‌ನಲ್ಲಿ ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕ್ವಾಂಟಮ್ ತಂತ್ರಜ್ಞಾನದ ಮಾರ್ಗಸೂಚಿಗಳನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ‘ಬಿಯಾಂಡ್ ಬೆಂಗಳೂರು’ ಉಪಕ್ರಮದ ಮೂಲಕ ತಂತ್ರಜ್ಞಾನ ಆರ್ಥಿಕತೆಯ ವಿಕೇಂದ್ರೀಕರಣಕ್ಕೆ ಮುಂದಾಗಿರುವ ನಮ್ಮ ಸರ್ಕಾರ, ಮುಂದಿನ ಪೀಳಿಗೆಗಾಗಿ ಟೈರ್ 2 ನಗರಗಳನ್ನು ನಾವಿನ್ಯತೆಯ ಕ್ಲಸ್ಟರ್‌ಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ತಂತ್ರಜ್ಞಾನದ ವಿಫುಲ ಬಂಡವಾಳ ಅವಕಾಶಗಳನ್ನು ಬಳಸಿಕೊಳ್ಳಿ, ಹೂಡಿಕೆದಾರರಿಗೆ ಸಿಎಂ ಕರೆ: ಈ ಎಲ್ಲ ಕ್ರಮಗಳು ಕೇವಲ ಆರ್ಥಿಕತೆಯನ್ನು ಕೇಂದ್ರೀಕರಿಸದೇ, ಸಮಾನ ಬೆಳವಣಿಗೆಗೂ ಬದ್ಧವಾಗಿವೆ. ರಾಜ್ಯದ ಪ್ರತಿ ಜಿಲ್ಲೆಯೂ ಹಾಗೂ ಯುವಪೀಳಿಗೆಯು ಡಿಜಿಟಲ್ ಯುಗಕ್ಕೆ ತೆರೆದುಕೊಳ್ಳುವ ಅವಕಾಶವನ್ನು ನೀಡಲಾಗಿದೆ. ನಮ್ಮ ಆಡಳಿತದ ಮಾದರಿಯು ಪಾರದರ್ಶಕತೆ, ನಿರೀಕ್ಷಿತ ನಡೆ ಹಾಗೂ ಸ್ಥಿರತೆಗೆ ಬದ್ಧವಾಗಿದೆ. ನಮ್ಮ ಸ್ಪಷ್ಟ ನೀತಿಗಳು, ಸುಗಮ ಅನುಮತಿಗಳು, ಕೌಶಲ್ಯ, ಮೂಲಸೌಕರ್ಯ ಹಾಗೂ ಪೂರಕ ವಾತಾವರಣಗಳು ಕರ್ನಾಟಕವನ್ನು ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆ ತಾಣವಾಗಿ ಮುಂದುವರೆದಿದೆ. ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರವಾಗಲಿ, ಸ್ಟಾರ್ಟ್ ಅಪ್ ಆಗಲಿ, ಶೈಕ್ಷಣಿಕ ಸಂಶೋಧನೆಯಾಗಲಿ, ಯಾವುದೇ ಕ್ಷೇತ್ರದ ಬಂಡವಾಳ ಹೂಡಿಕೆ ಕರ್ನಾಟಕ ರಾಜ್ಯ ತಾಣವಾಗಿವೆ. ಎಐ, ಕ್ವಾಂಟಮ್ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನದಲ್ಲಿನ ವಿಫುಲ ಅವಕಾಶಗಳನ್ನು ಬಳಸಿಕೊಂಡು ಮಾನವ ಪ್ರಗತಿಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕೆಂದು ಮುಖ್ಯಮಂತ್ರಿಗಳು ಕರೆ ನೀಡಿದರು.

Previous articleಪ್ರಚೋದನಕಾರಿ ಭಾಷಣ: ರತ್ನಾಕರ ಅಮೀನ್ ಬಂಧನ
Next articleಧಾರವಾಡದಲ್ಲಿ AI – ಕ್ವಾಂಟಮ್ ಕಂಪ್ಯೂಟಿಂಗ್‌ Excellence Centre ಸ್ಥಾಪಿಸಲು ತೀರ್ಮಾನ

LEAVE A REPLY

Please enter your comment!
Please enter your name here