ಬೆಂಗಳೂರು: ತಂತ್ರಜ್ಞಾನ ನಗರಿ ಬೆಂಗಳೂರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಘಟನೆಯೊಂದು ನಡೆದಿದ್ದು, ದೇವಸ್ಥಾನಕ್ಕೆ ಚಪ್ಪಲಿ ಸಮೇತ ನುಗ್ಗಿದ ವ್ಯಕ್ತಿಯೊಬ್ಬ ದೇವರ ಮೂರ್ತಿಗಳ ಮೇಲೆ ದಾಳಿ ಮಾಡಲು ಯತ್ನಿಸಿ ಹುಚ್ಚಾಟ ಮೆರೆದಿದ್ದಾನೆ. ಆತನನ್ನು ಹಿಡಿದ ಸ್ಥಳೀಯರು ತಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಾರತ್ತಹಳ್ಳಿ ಸಮೀಪದ ದೇವರಬೀಸನಹಳ್ಳಿಯಲ್ಲಿರುವ ಪ್ರಸಿದ್ಧ ವೇಣುಗೋಪಾಲ ಸ್ವಾಮಿ ದೇವಸ್ಥಾನವೇ ಈ ಅಹಿತಕರ ಘಟನೆಗೆ ಸಾಕ್ಷಿಯಾದ ಸ್ಥಳ. ಕಬೀರ್ ಎಂದು ಗುರುತಿಸಲಾದ ಸ್ಥಳೀಯ ನಿವಾಸಿಯೊಬ್ಬ, ಮಂಗಳವಾರ ಸಂಜೆ ಏಕಾಏಕಿ ಚಪ್ಪಲಿ ಸಮೇತ ದೇವಸ್ಥಾನದ ಒಳಗೆ ಪ್ರವೇಶಿಸಿದ್ದಾನೆ. ಇದನ್ನು ಕಂಡ ಭಕ್ತರು ಮತ್ತು ಸ್ಥಳೀಯರು ಆತನನ್ನು ಪ್ರಶ್ನಿಸಿದ್ದಾರೆ.
ಆದರೆ, ಅದಕ್ಕೆ ಕ್ಯಾರೇ ಎನ್ನದ ಕಬೀರ್, ತನ್ನ ಕೈಯಲ್ಲಿದ್ದ ಚಪ್ಪಲಿಯಿಂದ ದೇವಸ್ಥಾನದ ದ್ವಾರಪಾಲಕರ ವಿಗ್ರಹಗಳನ್ನು ಹಾನಿಗೊಳಿಸಲು ಮುಂದಾಗಿದ್ದಾನೆ. ಅಲ್ಲದೆ, ಕಲ್ಲು ತೂರಾಟ ನಡೆಸಿ ದೇವಸ್ಥಾನದ ಕಂಬಗಳಿಗೂ ಹಾನಿ ಮಾಡಲು ಯತ್ನಿಸಿದ್ದಾನೆ.
ಆತನ ವರ್ತನೆಯಿಂದ ಆಘಾತಗೊಂಡ ಮತ್ತು ಕೋಪಗೊಂಡ ಭಕ್ತರು ತಕ್ಷಣವೇ ಆತನನ್ನು ಹಿಡಿದು ತಡೆದಿದ್ದಾರೆ. ಈ ಸಂಪೂರ್ಣ ಘಟನೆಯು ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮರಕ್ಕೆ ಕಟ್ಟಿ ಥಳಿಸಿದ ಸ್ಥಳೀಯರು: ಈ ಕೃತ್ಯಕ್ಕೂ ಮುನ್ನ, ಮಂಗಳವಾರ ಬೆಳಿಗ್ಗೆ ಕೂಡ ಕಬೀರ್ ಇದೇ ಪ್ರದೇಶದಲ್ಲಿ ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ, ದೇವರ ಭಾವಚಿತ್ರವೊಂದನ್ನು ಹಾನಿ ಮಾಡಲು ಯತ್ನಿಸಿದ್ದ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆತನ ವರ್ತನೆಯಿಂದ ಕೋಪಗೊಂಡ ಜನರು, ಕಬೀರ್ನನ್ನು ಹಿಡಿದು ದೇವಸ್ಥಾನದ ಆವರಣದಲ್ಲಿದ್ದ ಮರಕ್ಕೆ ಕಟ್ಟಿ ಥಳಿಸಿದ್ದಾರೆ.
ನಂತರ, ಮಾರತ್ತಹಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಕಬೀರ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳದಿಂದ ಚಪ್ಪಲಿ, ಕಲ್ಲು ಹಾಗೂ ಎಣ್ಣೆ ಬಾಟಲಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಚಮ್ಮಾರನಾಗಿ ಕೆಲಸ ಮಾಡುತ್ತಿದ್ದ ಕಬೀರ್ ಈ ಕೃತ್ಯ ಎಸಗಲು ಕಾರಣವೇನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

























