ರಾಜ್ಯ ರಾಜಕಾರಣದಲ್ಲಿ ‘ದೈವವಾಣಿ’ ಮತ್ತು ‘ಮುಂದಿನ ಮುಖ್ಯಮಂತ್ರಿ’ ಎಂಬ ಚರ್ಚೆಗಳು ಜೋರಾಗಿರುವ ಬೆನ್ನಲ್ಲೇ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯದ ಅಸ್ತ್ರಗಳನ್ನು ಪ್ರಯೋಗಿಸಿದ್ದಾರೆ.
ಬಾಳೆಹೊನ್ನೂರಿನ ಸೀಗೋಡು ಗ್ರಾಮದಲ್ಲಿ ನಡೆದ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ಅವರು, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಡಿಕೆಶಿ ‘ದೈವವಾಣಿ’ಗೆ ಲೇವಡಿ: ಇತ್ತೀಚೆಗೆ ಡಿ.ಕೆ. ಶಿವಕುಮಾರ್ ತಮಗೆ ದೈವವಾಣಿ ಕೇಳಿಸಿದೆ ಎಂಬರ್ಥದಲ್ಲಿ ಮಾತನಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ಡಿ.ಕೆ. ಶಿವಕುಮಾರ್ ನೇರವಾಗಿ ದೇವರ ಜೊತೆಯೇ ಮಾತನಾಡಿದ್ದಾರಂತೆ. ಹಾಗಾಗಿ ಅವರು ಹೇಳಿರುವ ಆ 45 ದಿನಗಳಲ್ಲಿ ಏನು ಪವಾಡ ನಡೆಯುತ್ತದೆ ಎಂದು ನಾವೂ ಕಾದು ನೋಡೋಣ” ಎಂದು ಮಾರ್ಮಿಕವಾಗಿ ಹೇಳಿದರು.
ಅಲ್ಲದೆ ಮುಂದಿನ ಮೂರು ಬಜೆಟ್ಗಳನ್ನು ನಾನೇ ಮಂಡಿಸುತ್ತೇನೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ, “ಈಗ ಅಧಿಕಾರ ಅವರ ಕೈಯಲ್ಲೇ ಇದೆ, ಏನು ಬೇಕಾದರೂ ಹೇಳಿಕೊಳ್ಳಲಿ, ಕಾಲವೇ ಉತ್ತರಿಸಲಿದೆ” ಎಂದು ತಿರುಗೇಟು ನೀಡಿದರು.
ಅಭಿವೃದ್ಧಿ ಶೂನ್ಯ, ಖರ್ಚು ಮಾತ್ರ ಕೋಟಿ ಕೋಟಿ: ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತು ಅಭಿವೃದ್ಧಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಹೆಚ್ಡಿಕೆ, “ರಾಜ್ಯದಲ್ಲಿ ರಸ್ತೆಗಳ ಸ್ಥಿತಿ ಹದಗೆಟ್ಟಿದೆ, ರೈತರು ಸಂಕಷ್ಟದಲ್ಲಿದ್ದಾರೆ. ಆದರೆ ಮುಖ್ಯಮಂತ್ರಿಗಳು ಮೈಸೂರಿನಿಂದ ಕೆ.ಆರ್.ಪೇಟೆಯಂತಹ ಹತ್ತಿರದ ಜಾಗಕ್ಕೂ ಹೋಗಲು ಹೆಲಿಕಾಪ್ಟರ್ ಬಳಸುತ್ತಿದ್ದಾರೆ.
ಕೇವಲ ಅವರ ವೈಮಾನಿಕ ಸಂಚಾರಕ್ಕಾಗಿಯೇ ಬರೋಬ್ಬರಿ 47 ಕೋಟಿ ರೂ. ಸಾರ್ವಜನಿಕ ಹಣ ಖರ್ಚಾಗುತ್ತಿದೆ. ದಾಖಲೆಯ ಬಜೆಟ್ ಮಂಡಿಸಿದ್ದೇವೆ ಎಂದು ಹೇಳಿಕೊಳ್ಳುವವರು, ಜನಸಾಮಾನ್ಯರ ಮೇಲೆ ಮತ್ತಷ್ಟು ತೆರಿಗೆ ಹೇರಲು ಹೊಂಚು ಹಾಕುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.
ದಾಖಲೆ ಸಮೇತ ಭ್ರಷ್ಟಾಚಾರ ಬಯಲು: ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ ಅವರು, “ಈಗಾಗಲೇ ಹತ್ತಾರು ಬಿಲ್ಗಳನ್ನು ಚರ್ಚೆಯೇ ಇಲ್ಲದೆ ಸದನದಲ್ಲಿ ಅಂಗೀಕರಿಸಲಾಗಿದೆ. ವಿರೋಧ ಪಕ್ಷದ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಆದರೆ ನಾನು ಸುಮ್ಮನೆ ಕೂರುವುದಿಲ್ಲ. ಸೂಕ್ತ ಸಮಯ ಬಂದಾಗ ಸರ್ಕಾರದ ಎಲ್ಲಾ ಲೂಟಿಗಳನ್ನು ದಾಖಲೆ ಸಮೇತ ಜನರ ಮುಂದೆ ಇಡುತ್ತೇನೆ” ಎಂದು ಎಚ್ಚರಿಕೆ ನೀಡಿದರು.
ಕೊನೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಹೆಸರನ್ನು ಎಳೆದು ತಂದ ಕುಮಾರಸ್ವಾಮಿ, “ಇಲ್ಲಿ ಕುರ್ಚಿ ಉಳಿಸಿಕೊಳ್ಳಲು ಹೋರಾಡುತ್ತಿರುವವರು ಟ್ರಂಪ್ಗೆ ಸಹಾಯ ಮಾಡಲು ಅಲ್ಲಿಗೆ ಹೋದರೆ ಒಳ್ಳೆಯದು” ಎಂದು ಲೇವಡಿ ಮಾಡಿದರು. ಈ ಮೂಲಕ ಸ್ಯಾಂಡಲ್ವುಡ್ ಮತ್ತು ರಾಜಕೀಯದ ಗದ್ದಲಗಳ ನಡುವೆ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಹೊಸ ಸಮರ ಸಾರಿದ್ದಾರೆ.






















