ಪಣಜಿ: ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಗೋವಾ ಸಚಿವ ಸಂಪುಟದಲ್ಲಿ ಬಿಜೆಪಿ ಶಾಸಕರಾದ ರಮೇಶ್ ತಾವಡ್ಕರ್ ಮತ್ತು ದಿಗಂಬರ್ ಕಾಮತ್ ಗುರುವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಅಶೋಕ್ ಗಜಪತಿ ರಾಜು ಅವರು ಕಾಮತ್ ಮತ್ತು ತವಡ್ಕರ್ ಅವರಿಗೆ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಸಾವಂತ್, ಬಿಜೆಪಿ ಗೋವಾ ಘಟಕದ ಅಧ್ಯಕ್ಷ ದಾಮು ನಾಯಕ್ ಮತ್ತು ಇತರರು ಹಾಜರಿದ್ದರು.
ರಮೇಶ್ ತಾವಡ್ಕರ್ ಪರಿಚಯ: ಸಚಿವರಾಗಿ ಪ್ರಮಾಣ ವಚನ ಸ್ವಿಕರಿಸುವ ಮುನ್ನ ಗೋವಾ ವಿಧಾನಸಭಾ ಸ್ಪೀಕರ್ ರಮೇಶ್ ತಾವಡ್ಕರ್ ಅವರು ಇಂದು (ಗುರುವಾರ) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಾದ ಕೆಲವೇ ಗಂಟೆಗಳಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ತಾವಡ್ಕರ್ ಈ ಹಿಂದೆ ಏಪ್ರಿಲ್ 2012 ರಿಂದ ಜನವರಿ 2017 ರವರೆಗೆ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ್ದರು ಮತ್ತು ಕೃಷಿ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು, ಬುಡಕಟ್ಟು ಕಲ್ಯಾಣ ಮತ್ತು ಕ್ರೀಡೆ ಮತ್ತು ಯುವ ವ್ಯವಹಾರಗಳು ಸೇರಿದಂತೆ ಖಾತೆಗಳನ್ನು ನಿರ್ವಹಿಸಿದ್ದರು. ರಮೇಶ್ ತಾವಡ್ಕರ್ ಅವರು ಮಾರ್ಚ್ 2022 ರಲ್ಲಿ ಗೋವಾ ಸ್ಪೀಕರ್ ಆಗಿ ಆಯ್ಕೆಯಾದರು, ಕರಾವಳಿ ರಾಜ್ಯದಲ್ಲಿ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಬುಡಕಟ್ಟು ಶಾಸಕರಾದರು.
ಸಚಿವ ದಿಗಂಬರ್ ಕಾಮತ್ ಪರಿಚಯ: ದಿಗಂಬರ್ ಕಾಮತ್ 1954 ರ ಮಾರ್ಚ್ 8ರಂದು ಜನಿಸಿದ್ದು ಇವರು2007 ರಿಂದ 2012 ರವರೆಗೆ ಗೋವಾದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. 2022 ರಲ್ಲಿ ಮಾರ್ಗೋವ್ ಅಸೆಂಬ್ಲಿ ಕ್ಷೇತ್ರದಿಂದ ಏಳನೇ ಅವಧಿಗೆ ಶಾಸಕರಾಗಿ ಗೆದ್ದರು . 2006 ರಿಂದ 2019 ರವರೆಗೆ, ಅವರು ಈಜು ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷರಾಗಿದ್ದರು.
ಮಾರ್ಗೋವಾ ಕ್ಷೇತ್ರದ 71 ವರ್ಷದ ಶಾಸಕರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನೊಂದಿಗೆ (1989-1994, 2005-2022) ತಮ್ಮ ರಾಜಕೀಯ ಪ್ರಯಾಣವನ್ನು ಪ್ರಾರಂಭಿಸಿದರು. ನಂತರ ಅವರು ಸೆಪ್ಟೆಂಬರ್ 2022 ರಲ್ಲಿ ಬಿಜೆಪಿ ಸೇರಿದರು. ಕಾಮತ್ 1994 ರಲ್ಲಿ ಮಾರ್ಗೋವಾದಿಂದ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದರು ಮತ್ತು ಅಂದಿನಿಂದ ಹಲವಾರು ಬಾರಿ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 2022 ರ ಚುನಾವಣೆಯಲ್ಲಿ, ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾರ್ಗೋವಾದಿಂದ ಗೆದ್ದರು ಆದರೆ ಸೆಪ್ಟೆಂಬರ್ 14, 2022 ರಂದು ಇತರ ಏಳು ಶಾಸಕರೊಂದಿಗೆ ಬಿಜೆಪಿಗೆ ಬದಲಾದರು.
ಜೂನ್ 18ರಂದು ಗೋವಿಂದ್ ಗೌಡ ಅವರನ್ನು ಸಂಪುಟದಿಂದ ಕೈಬಿಟ್ಟ ನಂತರ ಒಂದು ಸಚಿವ ಸ್ಥಾನ ಖಾಲಿಯಾಗಿದ್ದರೆ, ಮತ್ತೊಬ್ಬ ಸಚಿವ ಅಲೆಕೊ ಸಿಕ್ಕೇರಾ ಅವರು ವೈಯಕ್ತಿಕ ಕಾರಣಗಳನ್ನು ನೀಡಿ ಬುಧವಾರ ರಾಜೀನಾಮೆ ನೀಡಿದ್ದರು. ತಾವಡ್ಕರ್ ಮತ್ತು ಕಾಮತ್ ಅವರು ಸಚಿವರನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಈ ಮುಂಚೆಯೆ ತಿಳಿಸಿದ್ದರು.