ಬೆಂಗಳೂರು: ಕರ್ನಾಟಕ ಸರ್ಕಾರದಿಂದ ಭಾರತ್ ಗೌರವ್ ದಕ್ಷಿಣ ಕ್ಷೇತ್ರಗಳ ಯಾತ್ರೆಯನ್ನು ಕೈಗೊಳ್ಳಲಾಗುತ್ತಿದ್ದು, ಇದಕ್ಕಾಗಿ ಕರ್ನಾಟಕ ಸರ್ಕಾರದಿಂದ 5,000 ರೂಪಾಯಿ ಸಹಾಯಧನ ಕೂಡ ನೀಡಲಾಗುತ್ತಿದೆ. ಯಾವೆಲ್ಲಾ ಕ್ಷೇತ್ರಗಳಿಗೆ ಯಾತ್ರೆ, ಯಾವಾಗ ಹಾಗೂ ಎಷ್ಟು ಸಹಾಯಧನ ನೀಡಲಾಗುತ್ತದೆ. ಯಾತ್ರೆಯ ಒಟ್ಟು ಪ್ಯಾಕೇಜ್ ಮೊತ್ತ 15,000 ರೂಪಾಯಿಗಳಾಗಿದ್ದು, ಕರ್ನಾಟಕ ಸರ್ಕಾರದಿಂದ 5,000 ರೂಪಾಯಿ ಸಹಾಯಧನ ಲಭ್ಯವಾಗುವ ಕಾರಣ ಯಾತ್ರಿಕರು ಹತ್ತು ಸಾವಿರ ರೂಪಾಯಿ ಪಾವತಿಸಿದರೆ ಸಾಕಾಗುತ್ತದೆ.
IRCTC ವೆಬ್ ಸೈಟ್ ಮೂಲಕ ಆಸಕ್ತರು ಬುಕ್ ಮಾಡಿಕೊಳ್ಳಬಹುದಾಗಿದ್ದು, ಆರು ದಿನಗಳ ಈ ಯಾತ್ರೆಯಲ್ಲಿ ತ್ರೀ ಟೈರ್ ಎಸಿ ರೈಲು ಪ್ರಯಾಣ, ತಿಂಡಿ, ಊಟ, ವಸತಿ ಮತ್ತು ದರ್ಶನ ವ್ಯವಸ್ಥೆಯನ್ನು ಒಳಗೊಂಡಿದೆ. ಈ ವಿಶೇಷ ರೈಲು ಜೂನ್ 23ರಂದು ಹೊರಡುತ್ತಿದ್ದು, ಜೂನ್ 28 ರಂದು ಮರಳಲಿದೆ. ಮತ್ತೊಂದು ರೈಲು ಜುಲೈ 1 ರಂದು ಹೊರಡಲಿದ್ದು, ಜುಲೈ 6 ಕ್ಕೆ ಮರಳಲಿದೆ. ಈ ಯಾತ್ರೆಗೆ ನೋಂದಾಯಿಸಿಕೊಂಡವರು ಬೆಳಗಾವಿ, ಹುಬ್ಬಳ್ಳಿ ಬೀರೂರು, ತುಮಕೂರು, ಹಾವೇರಿ, ದಾವಣಗೆರೆ ಹಾಗೂ ಯಶವಂತಪುರಗಳಲ್ಲಿ ಹತ್ತುವ ಹಾಗೂ ಇಳಿಯುವ ಸ್ಥಳಗಳನ್ನು ನಿಗದಿ ಮಾಡಲಾಗಿದೆ. ಯಾತ್ರಾರ್ಥಿಗಳ ಆರೋಗ್ಯ ಹಾಗೂ ಕ್ರಮದ ದೃಷ್ಟಿಯಿಂದ ವೈದ್ಯಕೀಯ ವ್ಯವಸ್ಥೆಯನ್ನು ಸಹ ಒದಗಿಸಲಾಗುತ್ತದೆ. ಯಾತ್ರಾರ್ಥಿಗಳಿಗೆ ವಿಶೇಷ ವೈದ್ಯಕೀಯ ವ್ಯವಸ್ಥೆಯನ್ನೂ ಧಾರ್ಮಿಕ ದತ್ತಿ ಇಲಾಖೆ ಮಾಡಲಿದೆ.

ಉಚಿತ ಯಾತ್ರೆ: ದೇವಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಹಾಗೂ ನೌಕರರು ಮತ್ತು ಅವರ ಕುಟುಂಬದ ಒಬ್ಬ ಸದಸ್ಯರನ್ನು ಕರ್ನಾಟಕ ಭಾರತ್ ಗೌರವ್ ದಕ್ಷಿಣ ಕ್ಷೇತ್ರಗಳ ಯಾತ್ರೆ ಯೋಜನೆಯಡಿ ಉಚಿತವಾಗಿ ಯಾತ್ರೆಗೆ ನೊಂದಣಿ ಮಾಡಿಕೊಳ್ಳಲು ಸೂಚಿಸಿದೆ.
ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯಲ್ಲಿ ಬರುವ ಪ್ರವರ್ಗ ʼಸಿʼ ಅಧಿಸೂಚಿತ ದೇವಾಲಯ/ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು/ನೌಕರರು ಮತ್ತು ಅವರ ಕುಟುಂಬದ ಒಬ್ಬ ಸದಸ್ಯರನ್ನು ಕರ್ನಾಟಕ ಭಾರತ್ ಗೌರವ್ ದಕ್ಷಿಣ ಕ್ಷೇತ್ರಗಳ ಯಾತ್ರೆ ಯೋಜನೆಯಡಿ ಉಚಿತವಾಗಿ ಯಾತ್ರೆಗೆ ಕಳುಹಿಸಲಾಗುತ್ತದೆ. ಐಆರ್ಸಿಟಿಸಿ ವೆಬ್ಸೈಟ್ ಮೂಲಕ ಬುಕ್ಕಿಂಗ್ ಮಾಡಿಕೊಳ್ಳಿ. ಅಥವಾ 8595931291, 8595931292, 8595931294 ಗೆ ಸಂಪರ್ಕಿಸಬಹುದು ಎಂದಿದ್ದಾರೆ.