ಬಾಗಲಕೋಟೆ: ಮಹಾರಾಷ್ಟ್ರದ ಸೋಲಾಪುರದಲ್ಲಿ ರಾಜ್ಯದ ಬಸ್ಗಳ ಮೇಲೆ ಗೂಂಡಾಗಳು ಪುಂಡಾಟಿಕೆ ಪ್ರದರ್ಶಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ಬಸ್ಗಳು ಗಡಿಯವರೆಗೆ ಮಾತ್ರವೇ ಸಂಚರಿಸಲಿವೆ.
ಸೋಮವಾರ ಬೆಳಗ್ಗೆ ಸೋಲಾಪುರದಲ್ಲಿ ಎರಡು ಬಸ್ಗಳ ಮೇಲೆ ಶಿವಸೇನೆ ಕಾರ್ಯಕರ್ತರು ಕೇಸರಿ ಬಣ್ಣದಲ್ಲಿ ಜೈ ಮಹಾರಾಷ್ಟ್ರ ಎಂದು ಬರೆದಿದಲ್ಲದೇ ಚಾಲಕರು, ನಿರ್ವಾಹಕರಿಂದ ಜೈ ಮಹಾರಾಷ್ಟ್ರ ಎಂದು ಹೇಳಿಸಿ ಬಸ್ಗಳನ್ನು ಬಿಟ್ಟು ಕಳುಹಿಸಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಗಡಿಯವರೆಗೆ ಮಾತ್ರವೇ ಬಸ್ಗಳ ಸಂಚಾರ ಇರಲಿದೆ ಎಂದು ವಿಭಾಗೀಯ ಸಾರಿಗೆ ಅಧಿಕಾರಿ ಕೆ.ಕೆ. ಲಮಾಣಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಬಸ್ಗಳ ಬೋರ್ಡಿಗೆ ಮಸಿ ಬಳೆದಿರುವುದು ಹೊರತುಪಡಿಸಿದರೆ ಯಾವು ಹಾನಿಯಾಗಿಲ್ಲ ನಾವು ಮುಂಜಾಗೃತಾ ಕ್ರಮವಾಗಿ ಕೋಲಾಪುರ, ಸೋಲಾಪುರ ಹಾಗೂ ಪುಣೆ ಮಾರ್ಗದ ಬಸ್ಗಳನ್ನು ಗಡಿಯವರೆಗೆ ಮಾತ್ರವೇ ಸೇವೆ ನೀಡಲಿವೆ ಎಂದರು.
ಜಿಲ್ಲೆಯಿಂದ ಮಹಾರಾಷ್ಟ್ರಕ್ಕೆ ಪ್ರತಿದಿನ ೮೧ ಬಸ್ಗಳು ಸಂಚರಿಸುತ್ತವೆ. ಈ ಪೈಕಿ ಮೀರಜ್ ಮಾರ್ಗದ ೪೦ ಬಸ್ ಸೇವೆ ಹೊರತುಪಡಿಸಿ ೪೧ ಬಸ್ಗಳ ಸೇವೆ ಸ್ಥಗಿತಗೊಳಿಸಲಾಗಿದೆ. ಬಸ್ಗಳು ತೆರಳಿದರೂ ಗಡಿಯವರೆಗೆ ಮಾತ್ರವೇ ಸಂಚರಿಸಲಿವೆ ಎಂದರು.
ಪರಿಸ್ಥಿತಿ ತಿಳಿ ಆಗೋವರೆಗೆ ೪೧ ಬಸ್ಗಳ ಸೇವೆ ಇರುವುದಿಲ್ಲ. ಇಳಕಲ್ ಬಸ್ಸಿಗೆ ಮಸಿ ಬಳೆದ ಪ್ರಕರಣಕ್ಕೆ ಸಂಬಂಧಿಸಿಂತೆ ಕೇಂದ್ರ ಕಚೇರಿಗೆ ಮಾಹಿತಿ ನೀಡಿದ್ದೇವೆ. ಈ ಕುರಿತಾಗಿ ಬಸ್ಗಳು ವಾಪಸ್ ಬರೋವರೆಗೆ ಪ್ರಕರಣ ದಾಖಲಿಸುವುದಿಲ್ಲ. ಪರಿಸ್ಥಿತಿ ತಿಳಿ ಆಗುವವರೆಗೂ ಕೊಲ್ಹಾಪುರ, ಸೋಲಾಪುರ ಹಾಗೂ ಪುಣೆ ಮಾರ್ಗದ ಬಸ್ಗಳ ಕಾರ್ಯಾಚರಣೆ ಇರುವುದಿಲ್ಲ ಎಂದು ಲಮಾಣಿ ಹೇಳಿದ್ದಾರೆ.