ಮಂಗಳೂರು: ತುಳುನಾಡಿನ ದೈವರಾಧನೆ ಆಚರಣೆ ಸಂಪ್ರದಾಯಕ್ಕೆ ತನ್ನದೇ ಆದ ಮಹತ್ವವಿದ್ದು ಸರ್ಕಾರವು ಭೂಮಿಯನ್ನು ಯಾವುದೋ ಕಾರಣಕ್ಕೆ ಸ್ವಾದಿನಪಡಿಸಿಕೊಂಡರೂ ವಾರ್ಷಿಕ ನೇಮ, ಇನ್ನಿತರ ಶುಭ ದಿನಗಳಲ್ಲಿ ಆಚರಣೆಗೆ ಅಡ್ಡಿ ಪಡಿಸದೆ ಅವಕಾಶ ಮಾಡಿಕೊಡಬೇಕು ಎಂದು ಶಾಸಕರಾದ ಡಾ. ಭರತ್ ಶೆಟ್ಟಿ ಹೇಳಿದ್ದಾರೆ.
ಎಂ ಎಸ್ ಇ ಝೆಡ್ ಕೈಗಾರಿಕಾ ವ್ಯಾಪ್ತಿಯ ಒಳಭಾಗದಲ್ಲಿರುವ, ಬಜಪೆಯ ನೆಲ್ಲಿದಡಿ ಗುತ್ತು ಆರಾಧಿಸಿಕೊಂಡು ಬರುತ್ತಿರುವ ದೈವ ಕಾಂತೇರಿ ಜುಮಾದಿ ದೈವಸ್ತಾನಕ್ಕೆ ಸ್ಥಾನಕ್ಕೆ ತೆರಳಿ ಪೂಜಾರಿ ಕಾರ್ಯಗಳನ್ನು ಮಾಡಲು ತಡೆವೊಡ್ದುತ್ತಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಮ್ಮ ಅಸಮಧಾನ ವ್ಯಕ್ತಪಡಿಸಿರುವ ಶಾಸಕರು, ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ, ಸಂಪ್ರದಾಯದಂತೆ ಪೂಜಾ ವಿಧಿ ವಿಧಾನಗಳನ್ನು ಮಾಡಲು ಅವಕಾಶ ಮಾಡಿಕೊಡಬೇಕು.ಹಾಗೂ ದೈವಸ್ಥಾನ ಕ್ಕೆ ಬರಲು ಸೂಕ್ತ ಪ್ರತ್ಯೇಕ ಸಂಪರ್ಕ ರಸ್ತೆ ಮಾಡಿಕೊಡಲು ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ದೇಶದ ಅಭಿವೃದ್ಧಿಗಾಗಿ ಭೂಮಿ ತ್ಯಾಗ ಮಾಡಿ ಹೋದವರು ತಮ್ಮ ದೇವಸ್ಥಾನದಲ್ಲಿ ತಾವು ನಂಬಿದ ದೈವಗಳನ್ನು ಆರಾಧಿಸಿ ಕೊಂಡು ಬರುವ ಸಂಪ್ರದಾಯವನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ತುಳುನಾಡಿನ ಸಂಪ್ರದಾಯ ಸಂಸ್ಕೃತಿಯ ಸೂಕ್ಷ್ಮತೆಯನ್ನ ಅರಿತುಕೊಂಡು ಜನರೊಡನೆ ಬೆರೆತು ಕೆಲಸ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ