ಕೆರೆಯಲ್ಲಿ ಈಜಲು ಹೋಗಿ ನಾಲ್ವರು ಬಾಲಕರು ನೀರು ಪಾಲು

0
27

ಹಾವೇರಿ: ಕೆರೆಯಲ್ಲಿ ಈಜಲು ಹೋಗಿ ನಾಲ್ವರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಜಿಲ್ಲೆಯಲ್ಲಿ ರವಿವಾರ ಸಂಭವಿಸಿದೆ.
ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದಲ್ಲಿ ಒಂದು ಘಟನೆ ನಡೆದಿದ್ದು, ಗ್ರಾಮದ ಧನುಷ್ ಪ್ರಕಾಶ ಚೋಳಪ್ಪನವರ(13) ಹಾಗೂ ನಿಖಿಲ್ ಜಗದೀಶ ನಾಗೋಜಿ(11) ಮೃತಪಟ್ಟ ಬಾಲಕರು.
ಧನುಷ್ ಮುಂಡಗೋಡದ ಲೊಯೊಲಾ ವಿಕಾಸ ಕೇಂದ್ರದ ಶಾಲೆಯಲ್ಲಿ ಓದುತ್ತಿದ್ದ. ನಿಖಿಲ್ ಕೊಪ್ಪರಸಿಕೊಪ್ಪದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದ. ಭಾನುವಾರವಾದ್ದರಿಂದ ಗ್ರಾಮದ ದೊಡ್ಡಕೆರೆಯಲ್ಲಿ ಈಜಲು ತೆರಳಿದ್ದರು. ಕೆರೆಯಲ್ಲಿನ ಆಳ ತಿಳಿಯದೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಬ್ಬರು ವಿದ್ಯಾರ್ಥಿಗಳ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ರಾತ್ರಿ ಇಬ್ಬರು ಬಾಲಕರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಶಿಗ್ಗಾವಿ ತಾಲೂಕಿನ ಅತ್ತಿಗೇರಿ ಗ್ರಾಮದ ಗೌಡರ ಕೆರೆಯಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಗ್ರಾಮದ ಪ್ರಜ್ವಲ್ ಅನಿಲ್ ದೇವರಮನಿ(14) ಮತ್ತು ಸನತ್ ರಮೇಶ್ ಭೂಸರೆಡ್ಡಿ(14) ಎಂಬ ಬಾಲಕರು ಮೃತಪಟ್ಟಿದ್ದಾರೆ.
ಕೆರೆಯಲ್ಲಿ ಪ್ರಜ್ವಲ್ ದೇವರಮನಿ ಎಂಬ ಬಾಲಕನ ಶವ ಪತ್ತೆಯಾಗಿದ್ದು ಇನ್ನೋರ್ವ ಬಾಲಕ ಸನತ್ ಭೂಸರೆಡ್ಡಿಯ ಶವಕ್ಕಾಗಿ ಕಾರ್ಯಾಚರಣೆ ನಡೆದಿದೆ.

Previous articleಪಂ.ಗಣಪತಿ ಭಟ್ ಹಾಸಣಗಿಯವರಿಗೆ “ಪುಟ್ಟರಾಜ ಸಮ್ಮಾನ’
Next articleಕೊಪ್ಪಳ ಬಂದ್: ಸರ್ಕಾರಿ ಶಾಲೆಗಳಿಗೆ ರಜೆ