ಅಂಕಗಳೊಂದಿಗೆ ಕೌಶಲ್ಯವಿದ್ದರೆ ಉದ್ಯೋಗಾವಕಾಶ

0
34

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕೌಶಲ್ಯದ ತರಬೇತಿ ಕೇಂದ್ರ ಆರಂಭ , ಕಾರ್ಯಾಗಾರಕ್ಕೆ ಚಾಲನೆ ನೀಡಿದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

ಬೆಂಗಳೂರು: ಯಾವುದೇ ಕೆಲಸದಲ್ಲಿ ಕೌಶಲ್ಯವಿಲ್ಲದಿದ್ದರೆ ಪ್ರಯೋಜನಕ್ಕೆ ಬರುವುದಿಲ್ಲ. ಕಟ್ಟಡ ಕಾರ್ಮಿಕರಿಂದ ಹಿಡಿದು ಎಂಜಿನಿಯರಿಂಗ್‌ವರೆಗೆ ಎಲ್ಲರಿಗೂ ಕೌಶಲ್ಯ ಅಗತ್ಯ ಎಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಹೇಳಿದರು.

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಮೈಸೂರು ಹಾಗೂ ಧಾರವಾಡದಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ವೃತ್ತಿ ಬುನಾದಿ ಹಾಗೂ ಉನ್ನತೀಕರಿಸಿದ ಕೌಶಲ್ಯದ ಬಗ್ಗೆ ತರಬೇತಿಯನ್ನು ನೀಡುವ ಸಲುವಾಗಿ ವಿಕಾಸಸೌಧದಲ್ಲಿ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಟ್ಟಡ ಕಾರ್ಮಿಕರ ಮಕ್ಕಳಿಗೆ ಉತ್ತಮ ಕೌಶಲ್ಯ ದೊರೆತರೆ ಅವರು, ತಮ್ಮ ಕೆಲಸಗಳನ್ನು ಸುಲಭವಾಗಿ ಮಾಡುವುದಲ್ಲದೆ ಗುಣಮಟ್ಟದಲ್ಲಿ ಮಾಡಬಲ್ಲರು. ಕೌಶಲಕ್ಕೆ ಇರುವ ಬೆಲೆ ಬೇರೆ ಯಾವುದಕ್ಕೂ ಇಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ಬೇರೆ ಬೇರೆ ಕೌಶಲಗಳ ಅಗತ್ಯ ಮತ್ತು ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಉನ್ನತೀಕರಿಸಿದ ಕೌಶಲ್ಯದ ಪ್ರಾಮುಖ್ಯತೆ ಮನಗಂಡು ಕೇಂದ್ರಗಳನ್ನು ಸ್ಥಾಪಿಸಲಿದೆ. ಈ ಪ್ರಯತ್ನಕ್ಕೆ ಉದ್ಯಮಿಗಳು, ಕೈಗಾರಿಕೆಗಳ ಮುಖ್ಯಸ್ಥರು ಆಸಕ್ತಿ ತೋರಿ ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಕಟ್ಟಡ ಕಾರ್ಮಿಕರಿಗೆ ತರಬೇತಿ ಪಡೆದ ಕೌಶಲ್ಯ ಇದ್ದರೆ ಅವರು ನಿರುದ್ಯೋಗಿಗಳಾಗುವ ಪ್ರಮೆಯವೇ ಬರುವುದಿಲ್ಲ. ಒಳ್ಳೆಯ ಪ್ರಮಾಣಪತ್ರ ಇದ್ದರೆ ವಿದೇಶಗಳಲ್ಲೂ ಉದ್ಯೋಗ ಪಡೆಯಬಹುದು. ಕಟ್ಟಡ ಕಾರ್ಮಿಕರ ಮಕ್ಕಳು ಕಟ್ಟಡ ಕಾರ್ಮಿಕರೇ ಆಗದೇ ಒಳ್ಳೆಯ ಕೌಶಲ ಪಡೆದು ವೃತ್ತಿ ಬದುಕಿನಲ್ಲಿ ಯಶಸ್ಸು ಸಾಧಿಸಬಹುದು ಎಂದರು.

ಯಾವುದೊ ಒಂದು ಪದವಿ ಪಡೆದಾಕ್ಷಣ ಕೆಲಸ ಸಿಗಲೇಬೇಕು ಎಂದೇನಿಲ್ಲ. ಕೆಲಸ ಸಿಗುವುದು ಅಷ್ಟು ಸುಲಭವೂ ಅಲ್ಲ. ಅವರ ಶಿಕ್ಷಣಕ್ಕೆ ಸರಿಯಾದ ಕೌಶಲ್ಯ ಇದ್ದರೆ ಅವರಿಗೆ ಕೆಲಸ ಸಿಗುತ್ತದೆ. ಅಂಕಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಕೌಶಲ್ಯದ ಬಗ್ಗೆ ಯೋಚಿಸಿದರೆ ಅನುಕೂಲ. ಈ ಕೌಶಲ ನೀಡಲು ಸರ್ಕಾರ ಸದಾ ಬದ್ಧವಿದೆ ಎಂದು ವಿವರಿಸಿದರು.

ನಿರ್ಮಾಣದ ಕಾರ್ಯವ್ಯಾಪ್ತಿ ದೊಡ್ಡದಿದೆ. ಸಾಮಾನ್ಯ ಕಟ್ಟಡ ನಿರ್ಮಾಣದಿಂದ ಹಿಡಿದು ದೊಡ್ಡ ದೊಡ್ಡ ಅಣೆಕಟ್ಟುಗಳವರೆಗೆ ಸಾಕಷ್ಟು ಉದ್ಯೋಗಾವಕಾಶಗಳು ಸಿಗುತ್ತವೆ. ಆದರೆ ಕೌಶಲ ಹೊಂದಿದ್ದರೆ ಈ ಕೆಲಸಗಳ ಅವಕಾಶಗಳು ಇನ್ನಷ್ಟು ದೊರೆಯುತ್ತವೆ. ಕೌಶಲ ಕೇಂದ್ರಗಳನ್ನು ಎಲ್ಲರ ಸಲಹೆ, ಅಭಿಪ್ರಾಯ ಪಡೆದು ಆರಂಭಿಸಲಾಗುವುದು ಎಂದರು.

ಕಾರ್ಯಾಗಾರದಲ್ಲಿ ಹಾಜರಿದ್ದ ಹಲವರು ಕಾರ್ಮಿಕರ ಅನುಕೂಲಕ್ಕಾಗಿ ಏನೆಲ್ಲ ಸೌಲಭ್ಯಗಳನ್ನು ಒದಗಿಸಬಹುದು ಎಂಬ ಬಗ್ಗೆ ಸಲಹೆಗಳನ್ನು ನೀಡಿದರು.

ಈ ಕಾರ್ಯಾಗಾರದಲ್ಲಿ ಕಾರ್ಮಿಕ ಇಲಾಖೆಯ ಕಾರ್ಯದರ್ಶಿಗಳಾದ ರೋಹಿಣಿ ಸಿಂಧೂರಿ ಕಾರ್ಮಿಕ ಆಯುಕ್ತರಾದ ಡಾ. ಗೋಪಾಲಕೃಷ್ಣ, ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಕಾರ್ಯದರ್ಶಿಗಳಾದ ಡಿ ಭಾರತಿ, ಅಪರ ಕಾರ್ಮಿಕ ಆಯುಕ್ತರಾದ ಶ್ರೀ ರವಿ ಕುಮಾರ್, ಡಾ. ಮಂಜುನಾಥ್, ಜಂಟಿ ಕಾರ್ಯದರ್ಶಿಗಳಾದ ಸಂಗಪ್ಪ ಉಪಾಸೆ, ಉದ್ಯೋಗದಾತರ ಪ್ರತಿನಿಧಿಗಳು, ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಮಂಡಳಿಯ ಸದಸ್ಯರು ಭಾಗವಹಿಸಿದ್ದರು.

Previous articleಮುಸಲ್ಮಾನರ ಕಲ್ಯಾಣಕ್ಕೆ ಸರ್ಕಾರ ಏನೂ ಮಾಡಿಲ್ಲ
Next articleವಾಕ್ ಸ್ವತಂತ್ರ ಕಿತ್ತುಕೊಂಡು ತುಘಲಕ್ ಸರ್ಕಾರ