ದಾಂಡೇಲಿ: ದಾಂಡೇಲಿಯಲ್ಲಿ ನವರಾತ್ರಿ ಉತ್ಸವ ಸಂದರ್ಭದಲ್ಲಿ ಶಬ್ದ ಮಾಲಿನ್ಯ ಉಂಟಾಗುತ್ತಿದ್ದು, ಇದರಿಂದ ಅನಾರೋಗ್ಯ ಪೀಡಿತರಿಗೆ, ವೃದ್ಧರಿಗೆ, ಚಿಕ್ಕ ಮಕ್ಕಳಿಗೆ ತೊಂದರೆಯಾಗುತ್ತಿದೆ. ರಾತ್ರಿ 12 ಗಂಟೆಯಾದರೂ ಆಯೋಜಕರು ಕಾರ್ಯಕ್ರಮ ನಡೆಸುತ್ತಾರೆ. ಇದರಿಂದ ಇಡೀ ದಿನ ಶಬ್ದ ಮಾಲಿನ್ಯದಿಂದ ತೊಂದರೆಯಾಗುತ್ತಿದೆ ಎನ್ನುವ ದೂರುಗಳು ಬಂದಿದೆ.
ಈ ಹಿನ್ನಲೆಯಲ್ಲಿ ದಾಂಡೇಲಿ ನಗರಸಭೆಯ ಪೌರಾಯುಕ್ತರಿಗೆ, ಸ್ಥಳೀಯ ಪೋಲಿಸ್ ಅಧಿಕಾರಿಗಳಿಗೆ ನವರಾತ್ರಿಯ ಕಾರ್ಯಕ್ರಮಗಳನ್ನು ಶಬ್ದ ಮಾಲಿನ್ಯವಾಗದಂತೆ ಕ್ರಮ ಜರುಗಿಸಲು ಕ.ರಾ.ಮಾ.ನಿ.ಮಂ. ಯ ಕಾರವಾರದ ಪರಿಸರ ಅಧಿಕಾರಿ ನೋಟಿಸು ನೀಡಿ ಸೂಚಿಸಿದ್ದಾರೆ. ರಾಜ್ಯ ಸರ್ಕಾರ ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆ 2000 ರ ಅಡಿಯಲ್ಲಿ ಸೂಚಿಸಲಾದ ನಿಬಂಧನೆಗಳನ್ನು ಜಾರಿಗೊಳಿಸಲು 2023 ಮೇ 10ರಂದು ಸುತ್ತೋಲೆ ಹೊರಡಿಸಿದೆ.
ಅದರನ್ವಯ ರಾತ್ರಿ 10 ಗಂಟೆಯಿಂದ ಮುಂಜಾನೆ 6 ಗಂಟೆಯವರೆಗೆ ಶಬ್ದ ಮಾಲಿನ್ಯವನ್ನು ನಿಯಂತ್ರಣಗೊಳಿಸುವ ಬಗ್ಗೆ ನಿರ್ದೇಶನ ನೀಡಲಾಗಿರುತ್ತದೆ. ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಶಬ್ದ ಮೂಲಗಳಿಂದ ಹೊರ ಹೊಮ್ಮುವ ಶಬ್ದವು ಆಯಾ ವಲಯಗಳಿಗೆ ನಿಗಧಿ ಪಡಿಸಿದ ಪರಿವೇಷ್ಟಕ ಶಬ್ದದ ಗುಣಮಟ್ಟಕ್ಕಿಂತ 10 ಡೆಸಿಬಲ್ (ಎ) ಹೆಚ್ಚಿರಬಾರದು ಎಂದು ಸೂಚಿಸಲಾಗಿರುತ್ತದೆ. ಆದ್ದರಿಂದ ಕಾರ್ಯಕ್ರಮಕ್ಕೆ ಪರವಾನಗಿ ನೀಡುವಾಗ ಎಚ್ಚರಿಕೆ ವಹಿಸಿ ಸಂಘಟಕರನ್ನು ಕರೆದು ಚರ್ಚಿಸಿ ನಿಯಮಗಳನ್ನು ತಿಳಿಸಿ ನವರಾತ್ರಿಯ ಕಾರ್ಯಕ್ರಮದಲ್ಲಿ ಬಳಸುವ ಧ್ವನಿವರ್ಧಕಗಳಿಂದ ಶಬ್ದ ಮಾಲಿನ್ಯವಾಗದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿಯಮಾನುಸಾರ ಕ್ರಮ ಜರುಗಿಸಲು ತಿಳಿಸಿದ್ದಾರೆ.