ಕೊಪ್ಪಳ: ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ತುಂಗಭದ್ರಾ ಆರತಿ ಉತ್ಸವ ಆಯೋಜಿಸಲಾಗಿದೆ. ಕನ್ನಡ ನಾಡಿನ ಜೀವನದಿ ಕಾವೇರಿಗೆ ಕೆಲವು ದಿನಗಳ ಹಿಂದೆ ಗಂಗಾರತಿ ಮಾದರಿಯಲ್ಲಿ ಆರತಿ ಉತ್ಸವ ನಡೆಸಲಾಗಿತ್ತು.
ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಈ ತುಂಗಭದ್ರಾ ಆರತಿ ವಿಶೇಷ ಕಾರ್ಯಕ್ರಮವನ್ನು ಆಗಸ್ಟ್ 26 ರಂದು ಆಯೋಜಿಸಲಾಗಿದೆ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ಹೇಳಿದ್ದಾರೆ.
ಹಿಂದೂ ಧಾರ್ಮಿಕ ದತ್ತಿ ಇಲಾಖೆ ಮತ್ತು ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವತಿಯಿಂದ ತುಂಗಭದ್ರಾ ನದಿ ತೀರದಲ್ಲಿ ತುಂಗಭದ್ರಾ ಆರತಿ ಉತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ.
ಏನಿದು ತುಂಗಭದ್ರಾ ಆರತಿ?; ಈ ಕುರಿತು ಸಂಸದ ರಾಜಶೇಖರ ಬಸವರಾಜ ಹಿಟ್ನಾಳ ಮಾಹಿತಿ ನೀಡಿದ್ದಾರೆ. ತುಂಗಭದ್ರಾ ಆರತಿ ಉತ್ಸವ ಆಚರಣೆಯ ಕುರಿತ ಪೂರ್ವ ಸಿದ್ಧತಾ ಸಭೆಯನ್ನು ಸಹ ನಡೆಸಿದ್ದಾರೆ. ಶ್ರೀ ಕ್ಷೇತ್ರ ಹುಲಿಗಿಯ ತುಂಗಭದ್ರಾ ನದಿ ತೀರದಲ್ಲಿ ತುಂಗಭದ್ರಾ ಆರತಿ ಕಾರ್ಯಕ್ರಮ ಆಗಸ್ಟ್ 26ರ ಮಂಗಳವಾರ ಸಂಜೆ 6.30ಕ್ಕೆ ನಡೆಸಲಾಗುತ್ತದೆ.
ತುಂಗಭದ್ರಾ ಆರತಿ ದಿವಸ ಗರ್ಭಗುಡಿಯಲ್ಲಿ ಶ್ರೀ ದೇವಿಯವರಿಗೆ ವಿಶೇಷ ಹೂವಿನ ಅಲಂಕಾರ, ಒಳಭಾಗ, ಹೊರಭಾಗ, ಸುತ್ತಲೂ, ಮುಂಭಾಗದ ಗೋಪುರದ ಕೈಪಿಡಿ ಗೊಂಬೆಗಳಿಗೆ ಮತ್ತು ನದಿತೀರದಲ್ಲಿ ವೇದಿಕೆಗೆ ಹೂವಿನ ಅಲಂಕಾರ ಮಾಡಲಾಗುತ್ತದೆ.
ತುಂಗಭದ್ರಾ ಆರತಿ ಬಗ್ಗೆ ವ್ಯಾಪಕ ಪ್ರಚಾರ ಮಾಡಲು 20 ಫ್ಲೆಕ್ಸ್, ಬ್ಯಾನರ್ಗಳನ್ನು ಮಾಡಿಸಿ ಹುಲಿಗಿ ಸರ್ಕಲ್, ನಿಂಗಾಪುರ ಕ್ರಾಸ್, ರೈಲ್ವೆ ಗೇಟ್ ಹತ್ತಿರ, ಶಿವಪುರ ರಸ್ತೆ, ಹಿಟ್ನಾಳ್ ಕಮಾನಿನ ಹತ್ತಿರ ಮತ್ತು ಹೊಸಪೇಟೆ, ಕೊಪ್ಪಳ, ಗಂಗಾವತಿಯಲ್ಲಿಯೂ ಅಂಟಿಸಲಾಗುತ್ತದೆ.
ದೇವಸ್ಥಾನಕ್ಕೆ ಮತ್ತು ನದಿತೀರದಲ್ಲಿ ವೇದಿಕೆ, ವಿದ್ಯುತ್ ದೀಪಾಲಂಕಾರ ಮಾಡಬೇಕು ಮತ್ತು ನದಿಯಲ್ಲಿರುವ ಬಂಡೆಗಳಿಗೆ ಸ್ಪಾಟ್ ಲೈಟುಗಳನ್ನು ಹಾಕುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಂಸದರು ಹೇಳಿದ್ದಾರೆ.
ದೇವಸ್ಥಾನದ ಪೂರ್ವ ಗೋಪುರದಿಂದ ನದಿತೀರದವರೆಗೆ ಮತ್ತು ದೇವಸ್ಥಾನದ ಮುಂಭಾಗದಿಂದ 2ನೇ ಗೇಟಿನವರೆಗೆ ರೆಡ್ ಮ್ಯಾಟ್ ಹಾಕಲಾಗುತ್ತದೆ. ದೇವಸ್ಥಾನದ ತಾಯಿ ಮುದ್ದಮ್ಮನ ಕಟ್ಟೆಯಿಂದ ಗಣ್ಯರನ್ನು ಕುಂಭ ಮತ್ತು ವಾದ್ಯಗಳೊಂದಿಗೆ ದೇವಸ್ಥಾನಕ್ಕೆ ಕರೆತಂದು ದರ್ಶನದ ನಂತರ ನದಿತೀರದ ವೇದಿಕೆಗೂ ಸಹ ವಾದ್ಯದೊಂದಿಗೆ ಅವರನ್ನು ಕರೆದುಕೊಂಡು ಹೋಗುವ ವಿವಿಧ ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ 2025ರ ಜಾತ್ರೆಯಲ್ಲಿ ಮಹಾದಾಸೋಹದಲ್ಲಿ ಸೇವೆ ಸಲ್ಲಿಸಿದವರಿಗೆ ಹಾಗೂ ಸೇವಾಕರ್ತರಿಗೆ ಸನ್ಮಾನ ಮಾಡಲಾಗುವುದು. ಬೆಳಗ್ಗೆ ಹೋಮಕ್ಕೆ ಮತ್ತು ತುಂಗಭದ್ರಾ ಆರತಿಗೆ 15 ಜನ ಅರ್ಚಕರನ್ನು ಕರೆಸಿ, ಅವರಿಗೆ ಒಂದೇ ತರಹದ ಸಮವಸ್ತ್ರ ಕೊಡಿಸಲಾಗುತ್ತದೆ.
ಇದಲ್ಲದೆ ಚಂಡಿಕಾ ಹೋಮ, ಮಹಿಳೆಯರಿಗೆ ಉಡಿ ತುಂಬುವ ಕಾರ್ಯ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರಪ್ರಥಮ ಬಾರಿಗೆ ತುಂಗಭದ್ರಾ ಆರತಿ ಉತ್ಸವವನ್ನು ತುಂಗಭದ್ರಾ ನದಿಯ ತೀರದಲ್ಲಿ ವಿಜ್ರಂಭಣೆಯಿಂದ ಆಚರಿಸಲು ನಿರ್ಧರಿಸಿದೆ. ಈ ಉತ್ಸವವನ್ನು ಯಶಸ್ವಿಯಾಗಿಸಲು 5 ಸಮಿತಿಗಳನ್ನು ರಚಿಸಲಾಗಿದೆ.
ಈ ಉತ್ಸವದ ನಿಮಿತ್ತ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಶೇಷ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. ತುಂಗಭದ್ರಾ ಆರತಿ ಕಾರ್ಯಕ್ರಮಕ್ಕೆ ಸಾರಿಗೆ ಮತ್ತು ಮುಜರಾಯಿ ಸಚಿವರು, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು, ಸರ್ಕಾರದ ಕಾರ್ಯದರ್ಶಿಗಳು, ಧಾರ್ಮಿಕ ದತ್ತಿ ಆಯುಕ್ತರು, ಸಂಸದರು, ಶಾಸಕರು ಹಾಗೂ ಇತರೆ ಗಣ್ಯರನ್ನು ಆಹ್ವಾನಿಸಲಾಗುತ್ತದೆ.