ಕಲಬುರಗಿ: ಕೊಲೆಗೆ ಯತ್ನದ ಆರೋಪದ ಮೇರೆಗೆ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ನನ್ನು ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸರು ಗುರುವಾರ ತಡರಾತ್ರಿ ಬಂಧಿಸಿದ್ದಾರೆ.
ಜೇವರ್ಗಿಯ ನಾರಾಯಣಪುರ ಗ್ರಾಮದ ನಾಟಿ ಔಷಧಿ ಕೊಡುವ ರಶೀದ್ ಮುತ್ಯಾ ಎಂಬಾತರನ್ನು ಬಂಧಿಸಿ, ಅವರನ್ನು ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಮಣಿಕಂಠ ರಾಠೋಡ ಅದೇ ಗ್ರಾಮದಲ್ಲಿ ಹಲವು ಜನರೊಂದಿಗೆ ಪ್ರತಿಭಟನೆ ನಡೆಸಿದ್ದರು.
ಪ್ರತಿಭಟನೆಯ ಬಳಿಕ ಗ್ರಾಮದಲ್ಲಿ ದೊಡ್ಡ ಹೈಡ್ರಾಮಾ ಸೃಷ್ಟಿಸಲಾಗಿದೆ. ಬಳಿಕ ರಶೀದ್ ಮುತ್ಯಾ ಅಲ್ಲಿಂದ ಕಾರಿನ ಮೂಲಕ ಬೇರೆ ಕಡೆಗೆ ಹೋಗುತ್ತಿದ್ದ ವೇಳೆ ಕಾರಿಗೆ ಕಲ್ಲು ಹೊಡೆದಿದ್ದು, ಕಾರ ಚಾಲಕನಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕಾಗಿ ಕೊಲೆಗೆ ಯತ್ನಿಸಿರುವ ಆರೋಪದ ಮೇರೆಗೆ ಮಣಿಕಂಠ ರಾಠೋಡನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























