ಉಳ್ಳಾಲ: ಹಠಾತ್ತನೆ ಎಂಜಿನ್ ಬಂದ್ ಆದ ಪರಿಣಾಮ ಮೀನುಗಾರಿಕಾ ಬೋಟ್ ಸಮುದ್ರ ತಟದ ಕಲ್ಲು ಬಂಡೆಗಳಿಗೆ ಬಡಿದು ಪಲ್ಟಿ ಹೊಡೆದ ಘಟನೆ ಉಳ್ಳಾಲ ಸೀಗ್ರೌಂಡಲ್ಲಿ ಸೋಮವಾರ ಮುಂಜಾನೆ ನಡೆದಿದೆ.
ಈ ಸಂದರ್ಭ ಚಾಲಕ ಸಹಿತ ಬೋಟಲ್ಲಿದ್ದ ಹದಿಮೂರು ಮಂದಿ ಮೀನುಗಾರರು ಈಜಿ ದಡ ಸೇರಿದ್ದಾರೆ. ಅಷ್ಪಕ್ ಎಂಬವರ ಮಾಲಿಕತ್ವದ ʻಬುರಖ್’ ಹೆಸರಿನ ಮೀನುಗಾರಿಕಾ ಬೋಟ್ ದುರಂತಕ್ಕೀಡಾಗಿದೆ.
ಸೋಮವಾತ ಮುಂಜಾನೆ 2.30 ರ ಸುಮಾರಿಗೆ ಮಂಗಳೂರಿನ ಧಕ್ಕೆಯಿಂದ ಹದಿಮೂರು ಮಂದಿಯನ್ನು ಹೇರಿಕೊಂಡು ಬೋಟ್ ಮೀನುಗಾರಿಕೆಗೆ ತೆರಳಿತ್ತು. ಈ ವೇಳೆ ಉಳ್ಳಾಲ ಸೀಗ್ರೌಂಡ್ ಬಳಿ ಬೋಟ್ನ ಇಂಜಿನ್ ಹಠಾತ್ತಾಗಿ ಆಫ್ ಆಗಿದೆ. ಇದರಿಂದ ನಿಯಂತ್ರಣ ಕಳಕೊಂಡ ಬೋಟ್ ತೀರ ಪ್ರದೇಶದಲ್ಲಿ ಕಡಲ್ಕೊರೆತದ ತಾತ್ಕಾಲಿಕ ತಡೆಗೆಂದು ಹಾಕಲಾಗಿದ್ದ ಕಲ್ಲುಬಂಡೆಗಳಿಗೆ ಬಡಿದು ಪಲ್ಟಿ ಹೊಡೆದಿದೆ ಎಂದು ಬೋಟ್ನ ವ್ಯವಸ್ಥಾಕ ಖಲೀಲ್ ಮಾಹಿತಿ ನೀಡಿದ್ದಾರೆ.
ಘಟನೆಯಿಂದ ಬೋಟ್ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು ಮೀನಿನ ಬಲೆ, ಇನ್ನಿತರ ಬೆಲೆಬಾಳುವ ಸೊತ್ತು ಸೇರಿ ಸುಮಾರು ಒಂದೂವರೆ ಕೋಟಿಯಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.