ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಬುರುಡೆ ಪ್ರಕರಣ ಇದೀಗ ಮತ್ತೊಮ್ಮೆ ಸುದ್ದಿಯಾಗಿದೆ. ಈ ಪ್ರಕರಣದ ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ (SIT) ಈಗಾಗಲೇ ಮಧ್ಯಂತರ ಚಾರ್ಜ್ಶೀಟ್ ಸಲ್ಲಿಸಿದ್ದು, ಅದರ ವಿಚಾರಣೆ ಬೆಳ್ತಂಗಡಿ ಹೆಚ್ಚುವರಿ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಈಗ ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಮಾಸ್ಕ್ಮ್ಯಾನ್ ಚಿನ್ನಯ್ಯಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.
ಮಂಗಳೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಚಿನ್ನಯ್ಯಗೆ ಜಾಮೀನು ನೀಡಿದ್ದು, ಒಟ್ಟು 12 ಷರತ್ತುಗಳನ್ನು ವಿಧಿಸಿದೆ. ಇದರಲ್ಲಿ ಮುಖ್ಯವಾಗಿ: ₹1 ಲಕ್ಷ ರೂ. ಬಾಂಡ್ ಒದಗಿಸುವುದು ಹಾಗೂ ತನಿಖೆಗೆ ಸಹಕರಿಸುವುದು ಮತ್ತು ಸಾಕ್ಷಿಗಳನ್ನು ಪ್ರಭಾವಿತಗೊಳಿಸಬಾರದು ಎಂದು ತಿಳಿಸಿರುವ ನ್ಯಾಯಾಲಯ ಪ್ರಕರಣ ನಡೆಯುವವರೆಗೆ ಜಿಲ್ಲೆಯ ಹೊರಗೆ ಹೋಗಬಾರದು ಎಂಬುದನ್ನು ಒಳಗೊಂಡಿದೆ.
ಪ್ರಕರಣದ ಹಿನ್ನೆಲೆ: ಧರ್ಮಸ್ಥಳದಲ್ಲಿ ಬುರುಡೆ ಹಾಗೂ ಶವಗಳನ್ನು ಹೂತಿಟ್ಟಿರುವ ಕುರಿತು ಆರೋಪಗಳು ಹೊರಬಿದ್ದ ನಂತರ, ಪ್ರಕರಣವು ರಾಜ್ಯ, ದೇಶ ಮತ್ತು ವಿದೇಶಗಳಲ್ಲಿಯೇ ಚರ್ಚೆಗೆ ಗ್ರಾಸವಾಗಿತ್ತು. ಜನ ಸಾಮಾನ್ಯರ ಒತ್ತಾಯದ ಮೇರೆಗೆ SIT ರಚಿಸಲಾಗಿತ್ತು. ತನಿಖಾ ಪ್ರಕ್ರಿಯೆಯಲ್ಲಿ ಹಲವು ಸ್ಥಳಗಳಲ್ಲಿ JCB ಸಹಾಯದಿಂದ ಉತ್ಖನನ ಕಾರ್ಯ ನಡೆಯಿತು. ಅನೇಕ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ SIT ಸುಮಾರು 4,000 ಪುಟಗಳ ಮಧ್ಯಂತರ ಚಾರ್ಜ್ಶೀಟ್ ಅನ್ನು ಸಲ್ಲಿಸಿತು.
ವಿಚಿತ್ರವಾಗಿ, ದೂರು ನೀಡಿದ ಚಿನ್ನಯ್ಯನನ್ನೇ SIT ಬಂಧಿಸಿತ್ತು, ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಶಿವಮೊಗ್ಗ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು.
ಬೆಳ್ತಂಗಡಿ ನ್ಯಾಯಾಲಯ ಹಾಗೂ ಜಿಲ್ಲಾ ಸೆಷನ್ಸ್ ಕೋರ್ಟ್ನಲ್ಲಿ ನಡೆದ ವಾದ-ಪ್ರತಿವಾರಗಳ ಬಳಿಕ, ಈಗ ಚಿನ್ನಯ್ಯ ಪರ ವಕೀಲರ ಮನವಿ ಅಂಗೀಕರಿಸಿ, ಷರತ್ತುಪೂರ್ವಕ ಜಾಮೀನು ಮಂಜೂರಾಗಿದೆ. ಈ ವಿಚಾರದಲ್ಲಿ ಸರ್ಕಾರಿ ಪರವಾಗಿ ವಾದ ಮಂಡಿಸಿದವರು ದಿವ್ಯರಾಜ್ ಇದ್ದರೆ, ಆರೋಪಿಯ ಪರವಾಗಿ ಕಾನೂನು ಸೇವಾ ಪ್ರಾಧಿಕಾರದ ವಕೀಲರು ಭಾಗವಹಿಸಿದ್ದರು.


























