“ಉದ್ಯಾನ ನಗರಿ” ಎಂಬ ಖ್ಯಾತಿಯ ಬೆಂಗಳೂರು, ಕಸ ಮತ್ತು ಗುಂಡಿಗಳ ಸಮಸ್ಯೆಯ ಜೊತೆಗೆ ಇದೀಗ ಎಲ್ಲೆಂದರಲ್ಲಿ ಉಗುಳುವವರ ಹಾವಳಿಯಿಂದ ತನ್ನ ಸೌಂದರ್ಯವನ್ನು ಕಳೆದುಕೊಳ್ಳುತ್ತಿದೆ.
ಈ ಬಗ್ಗೆ ಸದಾ ಧ್ವನಿ ಎತ್ತುತ್ತಾ ಬಂದಿರುವ ಬಯೋಕಾನ್ ಮುಖ್ಯಸ್ಥೆ ಮತ್ತು ಬೆಂಗಳೂರಿನ ಪ್ರಬಲ ಧ್ವನಿಗಳಲ್ಲಿ ಒಬ್ಬರಾದ ಕಿರಣ್ ಮಜುಂದಾರ್ ಶಾ ತಾಳ್ಮೆಯ ಕಟ್ಟೆ ಒಡೆದಿದ್ದು, ನಗರದ ಸೌಂದರ್ಯಕ್ಕೆ ಕಳಂಕ ತರುವ “ಪಿಚಕಾರಿ ರಾಯರ” ವಿರುದ್ಧ ತಮ್ಮ ಆಕ್ರೋಶವನ್ನು ಖಾರವಾಗಿಯೇ ಹೊರಹಾಕಿದ್ದಾರೆ.
ವೈರಲ್ ಆದ ಆ ಒಂದು ಟ್ವೀಟ್!: ಬೆಂಗಳೂರಿನ ಸಮಸ್ಯೆಗಳ ಕುರಿತು ಬೆಳಕು ಚೆಲ್ಲುವ ‘Bengaluru Post’ ಎಂಬ ಎಕ್ಸ್ ಖಾತೆಯು, ನಗರದ ಬಸ್ ನಿಲ್ದಾಣ, ಗೋಡೆ, ರಸ್ತೆ ವಿಭಜಕಗಳ ಮೇಲೆಲ್ಲಾ ಪಾನ್, ಗುಟ್ಕಾ ಉಗುಳಿ ಕೆಂಪು ಕಲೆಗಳನ್ನು ಸೃಷ್ಟಿಸುತ್ತಿರುವವರನ್ನು “ಬೆಂಗಳೂರಿನ ಹೊಸ ಖಳನಾಯಕರು” ಎಂದು ಬಣ್ಣಿಸಿ ಪೋಸ್ಟ್ ಒಂದನ್ನು ಹಂಚಿಕೊಂಡಿತ್ತು. ಈ ಪೋಸ್ಟ್ನಲ್ಲಿ, “ಬೆಂಗಳೂರಿನ ಉಗುಳು ಸಮಸ್ಯೆ – ಶೀಘ್ರದಲ್ಲೇ ಬರಲಿದೆ!” ಎಂದು ಎಚ್ಚರಿಸಲಾಗಿತ್ತು.
ಈ ಪೋಸ್ಟ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಿರಣ್ ಮಜುಂದಾರ್ ಶಾ, ಕೇವಲ ಎರಡೇ ಶಬ್ದಗಳಲ್ಲಿ ತಮ್ಮೆಲ್ಲಾ ಸಿಟ್ಟನ್ನು ಹೊರಹಾಕಿದ್ದಾರೆ. ಅವರು ರೀಟ್ವೀಟ್ ಮಾಡಿ, “Spit on them!!” (ಅಂಥವರ ಮುಖಕ್ಕೆ ಉಗಿಯಿರಿ!) ಎಂದು ಬರೆದುಕೊಂಡಿದ್ದಾರೆ. ಅವರ ಈ ನೇರ ಮತ್ತು ಖಡಕ್ ಪ್ರತಿಕ್ರಿಯೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಕೇವಲ ಉಗುಳುವವರ ತಪ್ಪೇ? ಕಂಪನಿಗಳ ಜವಾಬ್ದಾರಿ ಇಲ್ಲವೇ?: ಕಿರಣ್ ಶಾ ಅವರ ಈ ಪೋಸ್ಟ್, ಕೇವಲ ನಾಗರಿಕರ ಬೇಜವಾಬ್ದಾರಿತನದ ಚರ್ಚೆಗೆ ಸೀಮಿತವಾಗಿಲ್ಲ. ಬದಲಿಗೆ, ಸಮಸ್ಯೆಯ ಮೂಲ ಕಾರಣದ ಕಡೆಗೂ ಗಮನ ಸೆಳೆದಿದೆ.
ಹಲವು ನೆಟ್ಟಿಗರು ಇದಕ್ಕೆ ಪ್ರತಿಕ್ರಿಯಿಸಿದ್ದು, ಡಾ. ದಿವ್ಯಾ ಶರ್ಮಾ ಎಂಬುವವರು, “ನಗರವನ್ನು ಸ್ವಚ್ಛಗೊಳಿಸುವ ವೆಚ್ಚವನ್ನು ಗುಟ್ಕಾ ಮತ್ತು ಪಾನ್ ಮಸಾಲಾ ಕಂಪನಿಗಳೇ ಭರಿಸಬೇಕು. ಇದಕ್ಕಾಗಿ ಸ್ಥಳೀಯ ಸಂಸ್ಥೆಗಳೊಂದಿಗೆ ಅವರು ಒಪ್ಪಂದ ಮಾಡಿಕೊಳ್ಳಬೇಕು,” ಎಂದು ಆಗ್ರಹಿಸಿದ್ದಾರೆ. ಈ ಮೂಲಕ, ಉತ್ಪನ್ನ ತಯಾರಕರನ್ನೂ ಹೊಣೆಗಾರರನ್ನಾಗಿ ಮಾಡಬೇಕೆಂಬ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಬೆಂಗಳೂರಿನ ಮೂಲಸೌಕರ್ಯ ಸಮಸ್ಯೆಗಳ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿರುವ ಕಿರಣ್ ಶಾ ಈ ಆಕ್ರೋಶ, ಕೇವಲ ಒಬ್ಬ ಉದ್ಯಮಿಯ ಮಾತಾಗಿ ಉಳಿದಿಲ್ಲ. ಬದಲಿಗೆ, ಬೆಂಗಳೂರಿನ ಅಂದ ಹಾಳಾಗುತ್ತಿರುವುದನ್ನು ಕಂಡು ಮರುಗುತ್ತಿರುವ ಲಕ್ಷಾಂತರ ನಾಗರಿಕರ ಮೌನ ವೇದನೆಗೆ ಸಿಕ್ಕಿದ ಧ್ವನಿಯಾಗಿದೆ. ಈ ‘ಉಗುಳು’ ಚರ್ಚೆ ಕೇವಲ ಸೋಷಿಯಲ್ ಮೀಡಿಯಾ ಪೋಸ್ಟ್ಗಳಿಗೆ ಸೀಮಿತವಾಗುವುದೇ ಅಥವಾ ನಾಗರಿಕರಲ್ಲಿ ಜವಾಬ್ದಾರಿಯ ಕಿಡಿಯನ್ನು ಹೊತ್ತಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.


























