ಮಂಗಳೂರು: ಕಾರಣಿಕ ದೈವ ಕೊರಗಜ್ಜನ ಗುಡಿಗೆ ವ್ಯಕ್ತಿಯೊಬ್ಬ ಬೆಂಕಿ ಇಟ್ಟ ಘಟನೆ ಬೆಳ್ತಂಗಡಿ ವೇಣೂರಿನ ಬಾಡಾರು ಎಂಬಲ್ಲಿ ನಡೆದಿದೆ.
ಬಾಡಾರಿನ ಕೊರಗಕಲ್ಲು ಎಂಬಲ್ಲಿ ಭೂ ವಿಚಾರಕ್ಕೆ ನಡೆದ ಗಲಾಟೆ ಪವಾಡ ಪುರುಷನ ಸನ್ನಿಧಿಗೆ ಬೆಂಕಿ ಇಡುವ ಮೂಲಕ ಅಂತ್ಯವಾಗಿದೆ.
ಸಾರ್ವಜನಿಕರು ಸಮಿತಿ ರಚಿಸಿ ವರ್ಷಂಪ್ರತಿ ಕೊರಗಜ್ಜನ ಆರಾಧನೆ ಮಾಡುತ್ತಿದ್ದರು. ಆದರೆ ಕೊರಗಜ್ಜನ ಗುಡಿ ಇರುವ ಜಾಗದ ಬಗ್ಗೆ ಸ್ಥಳೀಯ ವ್ಯಕ್ತಿ ಆಕ್ಷೇಪ ವ್ಯಕ್ತಪಡಿಸಿದ್ದರು. ಗುಡಿ ಇರುವ ಜಾಗ ಖಾಸಗಿ ಕುಟುಂಬಸ್ಥರದ್ದು, ಸಾರ್ವಜನಿಕ ಹಸ್ತಕ್ಷೇಪ ಮಾಡಬಾರದೆಂದು ತಗಾದೆ ಎತ್ತಿದ್ದರು. ಕಳೆದ ಕೆಲ ವರ್ಷಗಳಿಂದ ಈ ಸಂಬಂಧ ಸಮಿತಿ ಮತ್ತು ಖಾಸಗಿ ವ್ಯಕ್ತಿ ನಡುವೆ ತಗಾದೆ ನಡೆಯುತ್ತಿತ್ತು. ಈಗ ಸ್ಥಳೀಯ ವ್ಯಕ್ತಿ ಕೊರಗಜ್ಜನ ಗುಡಿಗೇ ಬೆಂಕಿ ಇಟ್ಟಿದ್ದಾನೆ. ಘಟನೆ ಖಂಡಿಸಿ ಸ್ವಾಮಿ ಕೊರಗಜ್ಜ ಸಮಿತಿ ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದೆ.
