ದೆಹಲಿ: ಐತಿಹಾಸಿಕ ಕೆಂಪುಕೋಟೆ ಆವರಣದಲ್ಲಿ ನಡೆದ ಜೈನರ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾರೀ ಕಳ್ಳತನ ನಡೆದಿದೆ. ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ಎರಡು ಚಿನ್ನದ ಕಲಶಗಳು ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ಅಜ್ಞಾತರು ಕದ್ದೊಯ್ದಿದ್ದಾರೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಕೆಂಪುಕೋಟೆಯಲ್ಲಿನ ಈ ಕಳ್ಳತನವು ಸೆಪ್ಟೆಂಬರ್ 2, ಮಂಗಳವಾರ ರಾತ್ರಿ ನಡೆದ ಜೈನ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಜನಸಂದಣಿಯ ಗೊಂದಲವನ್ನು ಬಳಸಿಕೊಂಡು ನಡೆದಿದೆ ಎಂದು ತಿಳಿದುಬಂದಿದೆ. ದೆಹಲಿ ಜನರಿಗೆ ಮತ್ತು ಪೊಲೀಸರಿಗೆ ಈ ಘಟನೆ ಆಶ್ಚರ್ಯ ಉಂಟುಮಾಡಿದೆ.
ಕೆಂಪು ಕೋಟೆಯ ಪಾರ್ಕ್ನಲ್ಲಿ ಆಗಸ್ಟ್ 15ರಿಂದ ಸೆಪ್ಟೆಂಬರ್ 9ರವರೆಗೆ ಜೈನ ಸಮುದಾಯದ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ 760 ಗ್ರಾಂ ಚಿನ್ನದಿಂದ ತಯಾರಾದ ಕಲಶವನ್ನು ಇರಿಸಲಾಗಿತ್ತು, ಇದರಲ್ಲಿ 150 ಗ್ರಾಂ ವಜ್ರಗಳು, ಮಾಣಿಕ್ಯಗಳು ಮತ್ತು ಪಚ್ಚೆಗಳನ್ನು ಒಳಗೊಂಡ ಅಮೂಲ್ಯ ಕಲ್ಲುಗಳಿಂದ ಅಲಂಕರಿಸಲಾಗಿತ್ತು. ಈ ಕಲಶದ ಅಂದಾಜು ಮೌಲ್ಯ 1 ಕೋಟಿ ರೂಪಾಯಿಗಳಾಗಿದ್ದು, ಇದನ್ನು ಉದ್ಯಮಿ ಸುಧೀರ್ ಜೈನ್ ಪ್ರತಿದಿನ ಪೂಜೆಗಾಗಿ ತಂದಿದ್ದರು. ಕಾರ್ಯಕ್ರಮದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಗಣ್ಯ ರಾಜಕಾರಣಿಗಳು ಭಾಗವಹಿಸಿದ್ದರು.
ಅರ್ಚಕನ ವೇಷದಲ್ಲಿ ಬಂದಿದ್ದ ಕಳ್ಳ ವೇದಿಕೆಯ ಹತ್ತಿರ ಸೇರಿಕೊಂಡಿದ್ದಾನೆ. ಬಳಿಕ ಸೂಕ್ತ ಸಮಯ ನೋಡಿ ಚಿನ್ನದ ಕಲಶಗಳನ್ನೂ, ಇನ್ನೂ ಕೆಲವು ಬೆಲೆಬಾಳುವ ವಸ್ತುಗಳನ್ನೂ ಎತ್ತಿ ಕೊಂಡೊಯ್ದಿದ್ದಾನೆ. ಸಿಸಿಟಿವಿ ದೃಶ್ಯಗಳಲ್ಲಿ ಈ ಘಟನೆ ಸ್ಪಷ್ಟವಾಗಿ ಸೆರೆಸಿಕ್ಕಿದ್ದು, ವೀಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಳ್ಳನನ್ನು ಗುರುತಿಸಿರುವ ಪೊಲೀಸರು, “ಅವನನ್ನು ಶೀಘ್ರದಲ್ಲೇ ಬಂಧಿಸಲಾಗುವುದು” ಎಂದು ಭರವಸೆ ನೀಡಿದ್ದಾರೆ.
ಈ ಕುರಿತು ದೆಹಲಿ ಪೊಲೀಸರು ತನಿಖೆ ಕೈಗೊಂಡಿದ್ದು, ಚಿನ್ನದ ಕಲಶಗಳು ಮತ್ತು ಕಳ್ಳತನಗೊಂಡ ಇತರ ವಸ್ತುಗಳ ನಿಖರ ಮೌಲ್ಯವನ್ನು ಪರಿಶೀಲಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಹಾಜರಿದ್ದ ಹಲವಾರು ಭಕ್ತರು ಹಾಗೂ ಸಂಘಟಕರನ್ನು ವಿಚಾರಣೆ ನಡೆಸಲಾಗುತ್ತಿದೆ. ಕೆಂಪು ಕೋಟೆಯಂತಹ ಅತಿ ಭದ್ರತಾ ಪ್ರದೇಶದಲ್ಲಿ ಇಂತಹ ಕಳ್ಳತನ ನಡೆದಿರುವುದು ಭಕ್ತರು ಹಾಗೂ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ಕಾರ್ಯಕ್ರಮ ಆಯೋಜಕರೂ ಕೂಡಾ ಪೊಲೀಸರ ತಕ್ಷಣದ ಕ್ರಮಕ್ಕೆ ಒತ್ತಾಯಿಸಿದ್ದಾರೆ.