ಬೆಂಗಳೂರು: ಔಷಧಿ ಖರೀದಿ ಅನುದಾನಕ್ಕೂ ಕುತ್ತು, ಬಡವರ ಜೀವಕ್ಕಿಲ್ಲ ಕಿಮ್ಮತ್ತು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಔಷಧಿ ಖರೀದಿಗಾಗಿ ನೀಡುತ್ತಿದ್ದ ವಾರ್ಷಿಕ ₹70 ಕೋಟಿ ಅನುದಾನದಲ್ಲಿ 40% ಕಮಿಷನ್ ಗುಳುಂ ಮಾಡಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ಜೀವರಕ್ಷಕ ಔಷಧಿಗಳೂ ಲಭ್ಯವಿಲ್ಲದ ಪರಿಸ್ಥಿತಿ ತಂದಿಟ್ಟಿದೆ. ಸಿಎಂ ಸಿದ್ದರಾಮಯ್ಯನವರೇ, ಬಡವರೇ ಹೆಚ್ಚಾಗಿ ಬರುವ ವಿಕ್ಟೋರಿಯಾ ಆಸ್ಪತ್ರೆಯಲ್ಲೂ ಕಮಿಷನ್ ದಂಧೆ ನಡೆಸಿ ದುಡ್ಡು ಹೊಡೆಯುತ್ತೀರಲ್ಲ, ನಿಮಗೆ ಕಿಂಚಿತ್ತಾದರೂ ಮನಸಾಕ್ಷಿ ಇದೆಯಾ? ಬಡವರ ಔಷಧಿ ದುಡ್ಡಲ್ಲೂ ಭ್ರಷ್ಟಾಚಾರ ಮಾಡುವ ತಮ್ಮಂತಹ ಕಡುಭ್ರಷ್ಟ ಮುಖ್ಯಮಂತ್ರಿ ಕರ್ನಾಟಕಕ್ಕೆ ಸಿಕ್ಕಿರುವುದು ಕನ್ನಡಿಗರ ದುರಂತವೇ ಸರಿ ಎಂದಿದ್ದಾರೆ.