ಮಂಗಳೂರು: ತುರ್ತು ಸಂದರ್ಭಗಳಲ್ಲಿ ಪೊಲೀಸರಿಗೆ ಕರೆ ಮಾಡಲು ಇರುವ ೧೧೨ ನಂಬರ್ಗೆ ವ್ಯಕ್ತಿಯೊಬ್ಬ ಚಪ್ಪಲಿ ಹುಡುಕಿ ಕೊಡಲು ಕರೆ ಮಾಡಿದ ಘಟನೆಯೊಂದು ನಗರದಲ್ಲಿ ಇಂದು ನಡೆದಿದೆ.
ನಗರದ ಹಂಪನಕಟ್ಟೆ ಬಳಿ ಇರುವ ಶರವು ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಬಂದಿದ್ದ ಯುವಕನೊಬ್ಬನ ಚಪ್ಪಲಿ ನಾಪತ್ತೆಯಾಗಿದೆ. ದೇವರ ದರ್ಶನ ಮಾಡಲು ಹೋಗುವಾಗ ತೆಗೆದಿಟ್ಟ ಚಪ್ಪಲಿ ದರ್ಶನ ಮುಗಿಸಿ ಬರುವಾಗ ಇಟ್ಟಿದ್ದ ಸ್ಥಳದಲ್ಲಿರಲಿಲ್ಲ. ಯುವಕ ಚಪ್ಪಲಿಗಾಗಿ ಹುಡುಕಾಡಿದ್ದಾನೆ, ಚಪ್ಪಲಿ ದೊರೆಯದಿದ್ದಾಗ ಕೊನೆಗೆ ೧೧೨ ನಂಬರಿಗೆ ಕರೆ ಮಾಡಿದ್ದಾನೆ. ಕರೆ ಸ್ವೀಕರಿಸಿದ ಪೊಲೀಸರು ಏನೋ ಗೊಂದಲವಾಗಿರಬಹುದೆಂದು ಸ್ಥಳಕ್ಕೆ ಆಗಮಿಸಿದ್ದಾರೆ. ಚಪ್ಪಲಿ ಕಳವಾಗಿರುವ ವಿಷಯ ಗೊತ್ತಾಗುತ್ತಿದ್ದಂತೆ ಪೊಲೀಸರು ಕೂಡಾ ಹುಡುಕಾಡಿದ್ದಾರೆ. ಸಿಸಿ ಟಿವಿಯನ್ನು ಕೂಡಾ ಪರಿಶೀಲಿಸಿದ್ದಾರೆ, ಆದರೆ ಏನೂ ಪ್ರಯೋಜನವಾಗಿಲ್ಲ. ನಾಪತ್ತೆಯಾದ ಚಪ್ಪಲಿ ಪತ್ತೆಯಾಗಿಲ್ಲ.