ದಾವಣಗೆರೆ: ಮಾಜಿ ಸಂಸದ ರಮೇಶ್ ಕತ್ತಿ ಅವರು ವಾಲ್ಮೀಕಿ ಸಮಾಜದ ವಿರುದ್ಧ ಮಾಡಿದ ಅವಹೇಳನಕಾರಿ ಹೇಳಿಕೆಯ ಹಿನ್ನೆಲೆ, ವಾಲ್ಮೀಕಿ ಗುರುಪೀಠದ ಪ್ರಸನಾನಂದಪುರಿ ಸ್ವಾಮೀಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ಬಳಿ ಇರುವ ವಾಲ್ಮೀಕಿ ಗುರುಪೀಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ವಾಮೀಜಿ, “ಬೆಳಗಾವಿಯಲ್ಲಿ ರಮೇಶ್ ಕತ್ತಿ ಬಳಸಿದ ಭಾಷೆ ನಮ್ಮ ಸಮಾಜದ ಗೌರವಕ್ಕೆ ಧಕ್ಕೆ ಉಂಟುಮಾಡಿದೆ. ವಾಲ್ಮೀಕಿ ಸಮಾಜದ ಜನರು ಹಾಗೂ ನಾಯಕರು ನೋವಿಗೆ ಒಳಗಾಗಿದ್ದಾರೆ. ಇಂತಹ ಮಾತುಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ,” ಎಂದು ಸ್ಪಷ್ಟಪಡಿಸಿದರು.
ಸ್ವಾಮೀಜಿ ಸರ್ಕಾರವನ್ನು ಉದ್ದೇಶಿಸಿ, “ಈ ವಿಷಯದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ಯಾವುದೇ ವ್ಯಕ್ತಿ ತನ್ನ ಸ್ಥಾನ ಅಥವಾ ಹುದ್ದೆ ಬಳಸಿಕೊಂಡು ಸಮುದಾಯಗಳ ಬಗ್ಗೆ ಅವಹೇಳನಕಾರಿ ಮಾತು ಆಡಲು ಅವಕಾಶ ಇರಬಾರದು,” ಎಂದು ಆಗ್ರಹಿಸಿದರು.
ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯಕ್ಕಾಗಿ ಹಾಗೂ ಹಿಂದಿಕ್ಕಲ್ಪಟ್ಟ ಸಮುದಾಯಗಳಿಗೆ ಕಾನೂನಾತ್ಮಕ ರಕ್ಷಣೆಯನ್ನು ನೀಡಿದ್ದರು ಎಂಬುದನ್ನು ಸ್ಮರಿಸಿದ ಸ್ವಾಮೀಜಿ, “ಅಂಬೇಡ್ಕರ್ ನೀಡಿದ ಕಾನೂನು ರಕ್ಷಣೆ 78 ವರ್ಷಗಳಾದರೂ, ಇನ್ನೂ ಕೆಲವರು ಆ ಮನಸ್ಥಿತಿಯಿಂದ ಹೊರಬರದೆ ಇಂತಹ ಮಾತುಗಳನ್ನು ಆಡುತ್ತಿರುವುದು ಬೇಸರದ ಸಂಗತಿ,” ಎಂದು ಹೇಳಿದರು.
ಈ ಕುರಿತಂತೆ ಗುರುಪೀಠದ ನಾಯಕರು ಮತ್ತು ವಾಲ್ಮೀಕಿ ಸಮಾಜದ ವಿವಿಧ ಸಂಘಟನೆಗಳು ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರದಿಂದ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕತ್ತಿ ವಿರುದ್ಧ ಎಫ್ಐಆರ್!: ವಾಲ್ಮೀಕಿ ನಾಯಕ ಸಮಾಜದ ಬಗ್ಗೆ ರಮೇಶ ಕತ್ತಿ ನೀಡಿರುವ ಅವಹೇಳನಕಾರಿ ಹೇಳಿಕೆ ಹಿನ್ನೆಲೆ ಕತ್ತಿ ವಿರುದ್ಧ ವಾಲ್ಮೀಕಿ ಸಮಾಜದ ಮುಖಂಡರು ನಗರದ ಹೈಸ್ಕೂಲ್ ಮೈದಾನದಲ್ಲಿ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿ, ಬಡಾವಣೆ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ದೂರು ದಾಖಲಿಸಿದ್ದಾರೆ.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ವೇಳೆ ಮಾಜಿ ಸಂಸದ ರಮೇಶ ಕತ್ತಿಯವರು ನಾಯಕ ಸಮಾಜದವರ ಬಗ್ಗೆ ಕೀಳು ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿದ್ದು, ಕತ್ತಿಯನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿದ್ದಾರೆ.