ಬೆಂಗಳೂರು: ನಾಡಿನ ಖ್ಯಾತ ಭರತನಾಟ್ಯ ವಿದುಷಿ ಡಾ. ಸುಪರ್ಣಾ ವೆಂಕಟೇಶ್ ಅವರ ಶಿಷ್ಯೆ ರಾಧಾ ಶ್ರೀವತ್ಸ ಅವರ ರಂಗ ಪ್ರವೇಶ ಕಾರ್ಯಕ್ರಮ ಅಕ್ಟೋಬರ್ 25 ರಂದು ಬೆಂಗಳೂರಿನ ಪ್ರಸಿದ್ಧ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಹಿರಿಯ ಕಲಾವಿದೆ ಕಲಾಮಂಡಲಂ ಉಷಾ ದಾತಾರ್, ಚಿತ್ರನಟಿ ಮಾಳವಿಕಾ ಅವಿನಾಶ್, ಹಾಗೂ ಹಿರಿಯ ನಟ ನೆ.ಲ. ನರೇಂದ್ರ ಬಾಬು ಭಾಗವಹಿಸಲಿದ್ದಾರೆ. ತಾಂತ್ರಿಕ ನಿರ್ದೇಶಕರಾಗಿ ಸಾಯಿ ವೆಂಕಟೇಶ್ ಕಾರ್ಯನಿರ್ವಹಿಸಲಿದ್ದಾರೆ. ರಾಧಾ ಅವರ ಪಾಲಕರಾದ ಶ್ರೀವತ್ಸ ಮತ್ತು ಕವಿತಾ ಸಹ ಹಾಜರಿರಲಿದ್ದಾರೆ.
ನಟವಾಂಗದಲ್ಲಿ ಗುರು ಸುಪರ್ಣಾ ವೆಂಕಟೇಶ್, ಗಾಯನದಲ್ಲಿ ರೋಹಿತ್ ಭಟ್, ಮೃದಂಗದಲ್ಲಿ ಗುರುಮೂರ್ತಿ, ಕೊಳಲಿನಲ್ಲಿ ನಿತೀಶ್ ಅಮ್ಮಣ್ಣಾಯ, ವೀಣೆಯಲ್ಲಿ ಗೋಪಾಲ್, ಹಾಗೂ ರಿದಂ ಪ್ಯಾಡ್ನಲ್ಲಿ ಪವನ್ ದತ್ತ ಅವರ ಹಿಮ್ಮೇಳ ಸಹಕಾರ ಇರಲಿದೆ.
ಯುವ ಪ್ರತಿಭೆ ರಾಧಾ ಶ್ರೀವತ್ಸ: ಪ್ರಸ್ತುತ ದ್ವಿತೀಯ ಪಿಯು ಅಧ್ಯಯನ ಮಾಡುತ್ತಿರುವ ರಾಧಾ, ಸಾಯಿ ಆರ್ಟ್ಸ್ ಸಂಸ್ಥೆಯ ವಿವಿಧ ನೃತ್ಯ ಕಾರ್ಯಕ್ರಮಗಳಲ್ಲಿ ತಮ್ಮ ಭಾವಭರಿತ ನೃತ್ಯ ಪ್ರದರ್ಶನಗಳಿಂದ ಗಮನ ಸೆಳೆದಿದ್ದಾರೆ. ನರ್ತನದಲ್ಲಿ ನವೀನ ತಂತ್ರಗಳನ್ನು ಕಲಿಯುವಲ್ಲಿ ಆಸಕ್ತಿ ಹೊಂದಿರುವ ರಾಧಾ, ಮುದ್ರಾ, ತಾಳ, ಲಯ ಮತ್ತು ಅಭಿನಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾಳೆ.
ಅವರು ವಿದುಷಿ ಹರ್ಷಿತಾ ವಿದ್ಯಾ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವೂ ಕಲಿಯುತ್ತಿದ್ದಾರೆ — ಇದರಿಂದ ನೃತ್ಯ ಮತ್ತು ಸಂಗೀತದ ನಡುವಿನ ಆಳವಾದ ಸಂವಾದವನ್ನು ಅನುಭವಿಸುತ್ತಿದ್ದಾರೆ.
ರಾಧಾಳ ಕನಸು: “ನೃತ್ಯದಲ್ಲಿ ವಿದ್ವತ್ ಮಾಡುವ ಜೊತೆಗೆ ಇಂಜಿನಿಯರಿಂಗ್ ವ್ಯಾಸಂಗವೂ ಮುಂದುವರಿಸಬೇಕು. ಜೀವನಕ್ಕೆ ಭದ್ರವಾದ ವೃತ್ತಿ ಬೇಕು. ಆದರೆ ನೃತ್ಯ ನನ್ನ ಹೃದಯದ ಭಾಗವಾಗಿಯೇ ಉಳಿಯಲಿದೆ. ನಾನು ಉತ್ತಮ ‘ವೇದಿಕೆ ಕಲಾವಿದೆ’ ಆಗಬೇಕು ಎನ್ನುವುದು ನನ್ನ ಕನಸು,” ಎಂದು ರಾಧಾ ತಿಳಿಸಿದ್ದಾಳೆ.
ಪೋಷಕರು ಹಾಗೂ ಗುರುಗಳ ಸಂಪೂರ್ಣ ಬೆಂಬಲದೊಂದಿಗೆ, ಈ ಯುವ ಪ್ರತಿಭೆ ತನ್ನ ಭರತನಾಟ್ಯ ಪಯಣವನ್ನು ಹೊಸ ಹಾದಿಗೆ ತರುತ್ತಿದ್ದಾಳೆ.

























