ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 20 ವರ್ಷ ಕಾರಾಗೃಹ ಶಿಕ್ಷೆ ಹಾಗೂ 1.30 ಲಕ್ಷ ರೂ. ದಂಡ ವಿಧಿಸಿ ಮಂಡ್ಯ ಅಧಿಕ ಸೆಷನ್ಸ್ ಮತ್ತು 2ನೇ ತ್ವರಿತಗತಿ ನ್ಯಾಯಾಲಯವು ತೀರ್ಪು ನೀಡಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲ್ಲೂಕು ಅಕ್ಕಿಹೆಬ್ಬಾಳು ಹೋಬಳಿ ನಂದೀಪುರ ಗ್ರಾಮದ ಬಸವರಾಜು ಅವರ ಮಗ ಅಪ್ಪು.ಬಿ.ಎನ್ ಅಲಿಯಾಸ್ ಅಪ್ಪುಗೌಡ ಅಲಿಯಾಸ್ ಅಪ್ಪು ಶಿಕ್ಷೆಗೆ ಒಳಗಾದವನು.
ಏನಿದು ಪ್ರಕರಣ ?: ಆರೋಪಿ ಅಪ್ಪು.ಬಿ.ಎನ್. ಅಲಿಯಾಸ್ ಅಪ್ಪುಗೌಡ ಅಲಿಯಾಸ್ ಅಪ್ಪು(23 ವರ್ಷ) ಅಪ್ರಾಪ್ತ ಬಾಲಕಿಯು ಕಾಲೇಜಿಗೆ ಹೋಗುವಾಗ ಮತ್ತು ಬರುವಾಗ ಪರಿಚಯ ಮಾಡಿಕೊಂಡಿದ್ದ. ಅಲ್ಲದೇ ಬಾಲಕಿಯನ್ನು ಮದುವೆಯಾಗುವುದಾಗಿ ಹೇಳುತ್ತಿದ್ದ, ಆಗ ಅಪ್ರಾಪ್ತ ಬಾಲಕಿ ನನಗೆ ಇನ್ನೂ ಮದುವೆ ವಯಸ್ಸಾಗಿಲ್ಲವೆಂದು ಹೇಳಿದರೂ ಸಹ ಆರೋಪಿ ಮದುವೆ ಮಾಡಿಕೊಂಡರೆ ಯಾರು ಕೇಳುವುದಿಲ್ಲ ಎಂದು ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ.
ನಂತರ ಬಾಲಕಿ ಕಾಣೆಯಾದ ಬಗ್ಗೆ ನೊಂದ ಬಾಲಕಿಯ ತಂದೆ ಕೆ.ಆರ್.ಪೇಟೆ ಪೊಲೀಸ್ ಠಾಣೆಗೆ ಹಾಜರಾಗಿ ದಿನಾಂಕ ಜ.27,2022 ರಂದು ದೂರನ್ನು ದಾಖಲಿಸಿದ್ದರು. ನಂತರ ಇದರ ತನಿಖಾಧಿಕಾಧಿಕಾರಿ ಇನ್ಸ್ಪೆಕ್ಟರ್ ದೀಪಕ್.ಎಂ.ಕೆ. ಅವರು ಪ್ರಕರಣವನ್ನು э 383, 3762) (2), 354(2), 386 ಐಪಿಸಿ ಕಾಯ್ದೆ ಹಾಗೂ ಫೋಕೋ ಕಲಂ 4, 8, 12 ಅಡಿ ಪ್ರಕರಣವನ್ನು ತನಿಖೆ ನಡೆಸಿ, ನ್ಯಾಯಾಲಯಕ್ಕೆ. ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.
ಈ ಪ್ರಕರಣವು ಮಂಡ್ಯದ ಅಧಿಕ ಸತ್ರ ಮತ್ತು ತ್ವರಿತಗತಿ 2ನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಬಿ.ದಿಲೀಪ್ ಕುಮಾರ್ ಅವರ ಮುಂದೆ ವಿಚಾರಣೆ ನಡೆದು, ಆರೋಪಿ ಅಪ್ಪುವಿಗೆ ಫೋಕ್ಸ್ ಕಲಂ 12 ಅಪರಾಧಕ್ಕೆ 2 ವರ್ಷ ಸಾದಾ ಶಿಕ್ಷೆ ಹಾಗೂ 10,000/- ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ 2 ತಿಂಗಳ ಸಾದಾ ಶಿಕ್ಷೆ, ಭಾದಂಸಂ ಕಲಂ 366 ಅಪರಾಧಕ್ಕೆ 4 ವರ್ಷ ಸಾದಾ ಶಿಕ್ಷೆ ಹಾಗೂ 20,000 ದಂಡ, ದಂಡ ಪಾವತಿಸಲು ತಪ್ಪಿದ್ದಲ್ಲಿ 3 ತಿಂಗಳ ಸಾದಾ ಶಿಕ್ಷೆ ಹಾಗೂ “ಭಾದಂಸಂ ಕಲಂ 376(2)(ಎನ್) ಹಾಗೂ ಫೋಕೋ ಕಲಂ 6 ಕಾಯ್ದೆ ಅಡಿಯಲ್ಲಿನ ಅಪರಾಧಕ್ಕೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 1,00,000/- ರೂ.ಗಳ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷ ಸಾದಾ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಲಾಗಿದೆ.
ಅಭಿಯೋಜನೆಯ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಹೆಬ್ಬಕವಾಡಿ ನಾಗರಾಜು ಅವರು ವಾದ ಮಂಡಿಸಿದ್ದರು.