ಚಿತ್ರದುರ್ಗ: ರಸ್ತೆ ಅಗಲೀಕರಣ, ಹೊಸ ಡಿಸಿ ಆಫೀಸ್ ನಿರ್ಮಾಣ

0
113

ಚಿತ್ರದುರ್ಗ: ಚಿತ್ರದುರ್ಗ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆಗಳು ಆರಂಭವಾಗಿದೆ. ಮೆಡಿಕಲ್ ಕಾಲೇಜು ನೂತನ ಡಿಸಿ ಆಫೀಸ್ ಕಟ್ಟಡಕ್ಕೆ ಸ್ಥಳಾಂತರ, ಹೊಸ ಸ್ಥಳದಲ್ಲಿ ನೂತನ ಡಿಸಿ ಆಫೀಸ್ ನಿರ್ಮಾಣ, ನಗರದ ಪ್ರಮುಖ ರಸ್ತೆಗಳ ಅಗಲೀಕರಣ ಈ ಯೋಜನೆಗಳಲ್ಲಿ ಸೇರಿವೆ.

ಈ ಕುರಿತು ಯೋಜನೆ ಮತ್ತು ಸಾಂಖ್ಯಿಕ ಖಾತೆ ಸಚಿವ, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಆಕಾಶ್, ಎಸ್‌ಪಿ ರಂಜಿತ್ ಕುಮಾರ್ ಬಂಡಾರು ಮುಂತಾದವರು ಪಾಲ್ಗೊಂಡಿದ್ದರು.

ಸಚಿವ ಡಿ. ಸುಧಾಕರ್ ಮಾತನಾಡಿ, “ಜನರ ಅನುಕೂಲಕ್ಕಾಗಿ ಹಾಗೂ ನಗರದ ಅಭಿವೃದ್ಧಿ ದೃಷ್ಟಿಯಿಂದ ಚಿತ್ರದುರ್ಗ ನಗರದ ಪ್ರಮುಖ ರಸ್ತೆ ಅಗಲೀಕರಣ, ಮೆಡಿಕಲ್ ಕಾಲೇಜು ನೂತನ ಡಿಸಿ ಆಫೀಸ್ ಕಟ್ಟಡಕ್ಕೆ ಸ್ಥಳಾಂತರ, ಹೊಸ ಸ್ಥಳದಲ್ಲಿ ನೂತನ ಡಿಸಿ ಆಫೀಸ್ ನಿರ್ಮಾಣ ಕಾರ್ಯಗಳ ಬಗ್ಗೆ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡು ಕಾಲಮಿತಿಯೊಳಗೆ ಎಲ್ಲ ಕಾರ್ಯಗಳನ್ನು ಕೈಗೊಳ್ಳಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರಸ್ತೆಗಳ ಅಗಲೀಕರಣ: ಚಿತ್ರದುರ್ಗ ನಗರದ ಪ್ರಮುಖ ರಸ್ತೆಯನ್ನು 2 ಹಂತಗಳಲ್ಲಿ ಅಗಲೀಕರಣಗೊಳಿಸುವ ಕಾರ್ಯದ ಬಗ್ಗೆ ಚರ್ಚೆ ನಡೆಸಲಾಗಿದೆ. ಜಿಲ್ಲಾಧಿಕಾರಿ ಟಿ. ವೆಂಕಟೇಶ್ ರಸ್ತೆ ಅಗಲೀಕರಣಕ್ಕಾಗಿ ಕೈಗೊಳ್ಳಲಾಗಿರುವ ಸಿದ್ಧತೆಗಳ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ. ಪ್ರವಾಸಿ ಮಂದಿರ ವೃತ್ತದಿಂದ ಗಾಂಧಿ ವೃತ್ತದವರೆಗೆ ಮೊದಲ ಹಂತ ಹಾಗೂ ಗಾಂಧಿ ವೃತ್ತದಿಂದ ಕನಕ ವೃತ್ತದವರೆಗೆ ಎರಡನೇ ಹಂತದಲ್ಲಿ ರಸ್ತೆಯ ಮಧ್ಯ ಭಾಗದಿಂದ ಕನಿಷ್ಟ 25 ಮೀ. ರಸ್ತೆ ಅಗಲೀಕರಣ ಮಾಡಲು ಉದ್ದೇಶಿಸಲಾಗಿದೆ.

ಈ ಭಾಗದಲ್ಲಿ ಬರುವ ಅಂದಾಜು 400ಕ್ಕೂ ಹೆಚ್ಚು ವಾಣಿಜ್ಯ ಆಸ್ತಿಗಳು ಹಾಗೂ ಇತರೆ ಆಸ್ತಿಗಳ ಪ್ರತಿಯೊಂದು ಕಡತವನ್ನು ಸಿದ್ಧಪಡಿಸಲಾಗಿದೆ. ಈ ಪೈಕಿ ರಸ್ತೆ ಒತ್ತುವರಿ ಮಾಡಿಕೊಂಡಿರುವ ಕಟ್ಟಡಗಳು, ಟ್ರೇಡ್ ಲೈಸೆನ್ಸ್ ಉಲ್ಲಂಘನೆ ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆ ಮಾಡಿರುವ ಬಗ್ಗೆ ಮಾಹಿತಿ ನೀಡಿದರು.
ನಿಯಮಗಳ ಉಲ್ಲಂಘನೆ ಮಾಡಿರುವ ಕಟ್ಟಡಗಳನ್ನು ಗುರುತಿಸಿ, ಅಂತಹವುಗಳನ್ನು ತ್ವರಿತವಾಗಿ ತೆರವುಗೊಳಿಸಿ, ರಸ್ತೆ ಅಗಲೀಕರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

ನಗರದಲ್ಲಿ ಸಂಚಾರ ದಟ್ಟಣೆ, ವಾಹನಗಳ ಓಡಾಟಕ್ಕೆ ಇರುವ ಸಮಸ್ಯೆ, ಫುಟ್‍ಪಾತ್, ಒಳಚರಂಡಿ ವ್ಯವಸ್ಥೆ, ಪಾರ್ಕಿಂಗ್ ಮುಂತಾದ ಸಮಸ್ಯೆಗಳು ಇಲ್ಲಿನ ಪ್ರಮುಖ ರಸ್ತೆಯಲ್ಲಿ ಇದ್ದು, ನಗರದ ಅಭಿವೃದ್ಧಿಯ ದೃಷ್ಟಿಯಿಂದ ರಸ್ತೆ ಅಗಲೀಕರಣ ಆಗಲೇಬೇಕು ಎಂದು ಸಚಿವರು ಸೂಚನೆ ಸಭೆಯಲ್ಲಿ ಸೂಚನೆ ಕೊಟ್ಟರು.

ಮೆಡಿಕಲ್ ಕಾಲೇಜು ಸ್ಥಳಾಂತರ: ಮೆಡಿಕಲ್ ಕಾಲೇಜ್ ಅನ್ನು ಹೊಸದಾಗಿ ನಿರ್ಮಿಸಲಾಗುತ್ತಿರುವ ಡಿಸಿ ಆಫೀಸ್ ಕಟ್ಟಡಕ್ಕೆ ಸ್ಥಳಾಂತರ ಮಾಡಿದಲ್ಲಿ, ನಗರದ ಒಳಗೆ ಸಾರ್ವಜನಿಕರ ಅನುಕೂಲಕ್ಕಾಗಿ ನೂತನವಾಗಿ ಡಿಸಿ ಆಫೀಸ್ ನಿರ್ಮಾಣ ಮಾಡಲು, ಜಿಲ್ಲಾಧಿಕಾರಿಗಳ ವಸತಿ ಗೃಹದ ಹಿಂಭಾಗ, ತೋಟಗಾರಿಕೆ ಇಲಾಖೆ, ಲೋಕೋಪಯೋಗಿ ಇಲಾಖೆ ವಸತಿಗೃಹಗಳ ಜಾಗ ಹಾಗೂ ಅಕ್ಕಪಕ್ಕದಲ್ಲಿ ಲಭ್ಯವಾಗುವ ಸ್ಥಳವನ್ನು ಬಳಸಿಕೊಳ್ಳುವುದರ ಬಗ್ಗೆ ಚರ್ಚೆ ನಡೆಸಲಾಯಿತು.

ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದಂತೆ ನರ್ಸಿಂಗ್, ಪ್ಯಾರಾ ಮೆಡಿಕಲ್, ಅಲೈಡ್ ಹೆಲ್ತ್ ಸೈನ್ಸ್, ಆಡಳಿತ ವಿಭಾಗಗಳ ಪೈಕಿ ಯಾವುದನ್ನು ಸ್ಥಳಾಂತರಿಸಬಹುದು?. ಕಟ್ಟಡದ ವಿನ್ಯಾಸದಲ್ಲಿ ಯಾವ ಸಣ್ಣ ಪುಟ್ಟ ಬದಲಾವಣೆ ಕೈಗೊಳ್ಳಬೇಕು ಎಂಬುದರ ಸಾಧ್ಯಾಸಾಧ್ಯತೆಗಳ ಬಗ್ಗೆ, ಚರ್ಚೆ ನಡೆಸಿದ ಸಚಿವರು, ಈ ಕುರಿತಂತೆ ಅಂತಿಮ ನಿರ್ಧಾರ ಕೈಗೊಳ್ಳುವ ಸಲುವಾಗಿ ಶೀಘ್ರದಲ್ಲಿಯೇ ಕಂದಾಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು, ಈ ಎರಡೂ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಬೆಂಗಳೂರಿನಲ್ಲಿ ಸಭೆ ನಡೆಸಲು ದಿನಾಂಕ ನಿಗದಿಪಡಿಸುವಂತೆ ಸೂಚಿಸಿದರು.

ನಗರದಿಂದ ದೂರದಲ್ಲಿ ಕುಂಚಿಗನಾಳ್ ಸಮೀಪ ಪ್ರಸ್ತುತ ಹೊಸ ಡಿಸಿ ಆಫೀಸ್ ಸಂಕೀರ್ಣ ನಿರ್ಮಾಣವಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ತುಂಬಾ ಅನನುಕೂಲವಾಗಲಿದೆ. ಜಿಲ್ಲಾಧಿಕಾರಿಗಳ ಕಚೇರಿಗೆ ಸಾರ್ವಜನಿಕರು ಬಂದು ಹೋಗಲು ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.

ಈ ಬಗ್ಗೆ ಜನರು ವಿವಿಧ ಸಂಘಟನೆಗಳು ಕೂಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ನಾವು ಜಿಲ್ಲೆಯ ಎಲ್ಲ ಶಾಸಕರು ಕಳೆದ ತಿಂಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇವೆ ಎಂದು ಚರ್ಚಿಸಲಾಯಿತು.

Previous articleಸ್ವಿಗ್ಗಿ ದರ ಏರಿಕೆ: ಆನ್‌ಲೈನ್ ಆರ್ಡರ್ ಮಾಡುವ ಮೊದಲು ತಿಳಿಯಿರಿ
Next articleಬೆಂಗಳೂರು: ವಿಶ್ವ ಒಕ್ಕಲಿಗರ ಮಠದ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಇನ್ನಿಲ್ಲ

LEAVE A REPLY

Please enter your comment!
Please enter your name here