ಚನ್ನಗಿರಿ: ಪಟ್ಟಣದಲ್ಲಿ ಸೆ. 24ರ ಬುಧವಾರ ನಡೆಯಲಿರುವ ಗಣಪತಿ ವಿಸರ್ಜನಾ ಶೋಭಾಯಾತ್ರೆಗೆ ಪಟ್ಟಣದ ಮಾರುತಿ ವೃತ್ತದ ಬಳಿ ಇರುವ ಎಸ್ಬಿಐ ವೃತ್ತದಲ್ಲಿ ವಿವಾದಾ ತ್ಮಕವಾದ ಫ್ಲೆಕ್ಸ್ ಬೋರ್ಡ್ ಹಾಕಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು.
ಚನ್ನಗಿರಿಯ ಮುಖ್ಯ ಬಸ್ ನಿಲ್ದಾಣದ ಬಳಿಯ ಊರಬಾಗಿಲ ಶ್ರೀಹನುಮಂತ ದೇವರ ಸಭಾ ಮಂಟಪದಲ್ಲಿ ವಿಶ್ವ ಹಿಂದೂ ಪರಿಷದ್-ಬಜರಂಗದಳದ ವತಿಯಿಂದ ಪ್ರತಿ ಷ್ಠಾಪಿಸಿರುವ ಗಣಪತಿಯ ಶೋಭಾಯಾತ್ರೆಯು ಬುಧ ವಾರ ಬೆಳಗ್ಗೆ 11 ಗಂಟೆಯಿಂದ ಆರಂಭವಾಗಲಿದ್ದು ಈ ನಿಮಿತ್ತ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ರಾಷ್ಟ್ರ ನಾಯಕರ, ದೇಶಭಕ್ತರ, ಫ್ಲೆಕ್ಸ್ ಬೋರ್ಡ್ ಹಾಕಲಾಗಿದೆ. ಎಸ್ಬಿಐ ಸರ್ಕಲ್ ವೃತ್ತದಲ್ಲಿ ವಿವಾದಾತ್ಮಕವಾದ ಬ್ಯಾನರ್ ಹಾಕಿರುವುದನ್ನು ಆ ಪ್ರದೇಶದ ಕೆಲವರು ತೆಗೆಸಬೇಕು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಬಂದು ಗಣಪತಿ ಸಮಿತಿಯ ಅಧ್ಯಕ್ಷರಿಗೆ ವಿವಾದಾತ್ಮಕ ಪೋಸ್ಟರ್ ತೆರವುಗೊಳಿಸುವಂತೆ ಸೂಚನೆ ನೀಡಿ ಪೊಲೀಸರೇ ಆ ವಿವಾದಾತ್ಮಕ ಪೋಸ್ಟರ್ಗೆ ಬಿಳಿ ಬಣ್ಣ ಬಳಿದಿದ್ದರು.
ಇದನ್ನು ಗಮನಿಸಿದ ಕೆಲ ಯುವಕರು ಸ್ಥಳಕ್ಕೆ ಬಂದು ಈ ಪೊಸ್ಟರ್ಗೆ ಯಾರು ಬಣ್ಣ ಬಳಿದರು ಎಂದು ವಿಚಾರಿಸುತ್ತಾ ಪ್ರತಿಭಟನೆಗೆ ಮುಂದಾದಾಗ ಸಿಪಿಐ ರವೀಶ್, ಪಿಎಸ್ಐ ಸುರೇಶ್ ಸ್ಥಳಕ್ಕೆ ಬಂದು ಪ್ರತಿಭಟನಾನಿರತ ಯುವಕರಿಗೆ ನಿಮ್ಮ ಸಮಿತಿಯ ಅಧ್ಯಕ್ಷರ ಗಮನಕ್ಕೆ ತಂದು ಬಣ್ಣ ಬಳಿಯಲಾಗಿದೆ ಎಂದು ತಿಳಿಸಿದಾಗ ಯುವಕರು ಅಲ್ಲಿಂದ ತೆರಳಿದರು.