ಇಲಕಲ್ಲ (ಬಾಗಲಕೋಟೆ): ಸಂಯುಕ್ತ ಕರ್ನಾಟಕ ಪತ್ರಿಕೆಯ ಇಲಕಲ್ಲ ತಾಲೂಕಿನ ಹಿರಿಯ ವರದಿಗಾರ ಬಿ. ಬಾಬು (70) ಹೃದಯಾಘಾತದಿಂದ ಇಂದು ನಿಧನ ಹೊಂದಿದ್ದಾರೆ. ಅವರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಹಲವು ದಶಕಗಳಿಂದ ಸಂಯುಕ್ತ ಕರ್ನಾಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ ಬಾಬು, ತಮ್ಮ ಅಂತಿಮ ದಿನದವರೆಗೂ ಕ್ರಿಯಾಶೀಲರಾಗಿ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಇಳಕಲ್ಲಿನಿಂದ ಹೊರಟು ತುಂಬ ಎಂಬ ಗ್ರಾಮದ ಮೂಲಕ ಕರಡಿಗೆ ತಲುಪುತ್ತಿದ್ದ ರಾಜ್ಯ ಸಾರಿಗೆ ಸಂಸ್ಥೆ ಬಸ್ಸಿನ ಕುರಿತಾಗಿ ಅವರು ಸಂಯುಕ್ತ ಕರ್ನಾಟಕದಲ್ಲಿ ಇಳಕಲ್ಲ ತುಂಬ ಕರಡಿ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದ ವರದಿಯು ಒಂದು ಕಾಲದಲ್ಲಿ ರಾಜ್ಯದ ಗಮನಸೆಳೆದಿತ್ತು.
ಇತ್ತೀಚೆಗಷ್ಟೇ ತಗಡಿನ ಶೆಡ್ನಲ್ಲಿ ನಡೆಯುತ್ತಿದ್ದ ಸರ್ಕಾರಿ ಶಾಲೆಯ ಕುರಿತು ಬರೆದ ಲೇಖನ ಮುಖ್ಯಮಂತ್ರಿಗಳ ಗಮನ ಸೆಳೆದು, ಶಾಲೆಗೆ ಶಾಶ್ವತ ಸೂರು ಒದಗುವಂತೆ ಪರಿಹಾರ ಕಂಡಿತ್ತು.
ಚಿಕ್ಕ ಹಾಗೂ ಪರಿಣಾಮಕಾರಿ ವರದಿಗಳ ಮೂಲಕ ಸರ್ಕಾರದ ಗಮನ ಸೆಳೆಯುವಲ್ಲಿ ಮಾದರಿಯಾಗಿದ್ದ ಬಾಬು, ಇಳಕಲ್ಲಿನ ಅಭಿವೃದ್ಧಿಗೆ ತಮ್ಮ ಲೇಖನಿಯಿಂದ ಶ್ರಮಿಸಿದ್ದರು. ಅವರ ನಿಧನಕ್ಕೆ ಇಲಕಲ್ಲ ಹಾಗೂ ಬಾಗಲಕೋಟೆ ಪ್ರದೇಶದಲ್ಲಿ ಅನೇಕರು ಕಂಬನಿಮಿಡಿದಿದ್ದಾರೆ.