ಕಲಬುರಗಿ: ನಗರದಲ್ಲಿ ಹೆಚ್ಚುತ್ತಿರುವ ದ್ವಿಚಕ್ರ ವಾಹನ ತ್ರಿಬಲ್ ರೈಡಿಂಗ್, ಅತಿ ಶಬ್ದದಿಂದ ವಾಹನ ಓಡಿಸುವಿಕೆ ಹಾಗೂ ಒನ್ ವೇ ದಲ್ಲಿ ಚಾಲನೆ ತಡೆಯಲು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಆರ್ ಚೇತನ ತಿಳಿಸಿದರು.
ದ್ವಿಚಕ್ರ ವಾಹನಗಳ ಸಂಚಾರ ನಿಯಮಗಳ ಉಲ್ಲಂಘನೆಯಿಂದ ಸಾರ್ವಜನಿಕವಾಗಿ ತೊಂದರೆಯಾಗುತ್ತಿದೆಯಲ್ಲದೇ ಅಪಘಾತಗಳಿಗೂ ಕಾರಣವಾಗುತ್ತಿದೆ. ಹೀಗಾಗಿ ತಡೆಯಲು ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪಾಲಕರು ಇನ್ನೂ 18 ವರ್ಷವಾಗದ ಹಾಗೂ ಡ್ರೈವಿಂಗ್ ಲೈಸೆನ್ಸ್ ಇಲ್ಲದ ಮಕ್ಕಳ ಕೈಗೆ ದ್ವಿಚಕ್ರ ವಾಹನ ಕೊಡಬಾರದು. ಇಷ್ಟೂ ಮೀರಿ ಸಂಚಾರ ನಿಯಮಗಳನ್ನು ಗಾಳಿಗೆ ತೂರಿ ಉಲ್ಲಂಘನೆ ಮಾಡಿದ್ದಲ್ಲಿ ಕ್ರಮ ಕೈಗೊಳ್ಳುವುದು ನಿಶ್ಚಿತ. ಸೈಲೆನ್ಸ್ರ್ ತೆಗೆದು ಶಬ್ದ ಮಾಡುವುದನ್ನು ತಡೆಗಟ್ಟಲು ಮೆಕ್ಯಾನಿಕ್ದವರಿಗೆ ನಿರ್ದೇಶನ ನೀಡಲಾಗಿದೆ. ಕೆಲ ಮೆಕ್ಯಾನಿಕ ವಿರುದ್ದ ಕ್ರಮ ಸಹ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
