ಬೋಟ್ ಮೂಲಕ ಬಂದು ಮತದಾನ

Advertisement

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿರುಸಿನ ಮತದಾನವಾಗಿದೆ. ಸಾರಿಗೆ ಸೌಲಭ್ಯ ಇಲ್ಲದ ದ್ವೀಪ ಪ್ರದೇಶದ ಮತದಾರರು ಬೋಟ್ ಮೂಲಕ ನಗರಕ್ಕೆ ಆಗಮಿಸಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಮೂಲಕ ಬದ್ಧತೆ ಮೆರೆದಿದ್ದಾರೆ.
ನಗರಕ್ಕೆ ದೂರದಲ್ಲಿರವ ಪಾವೂರು-ಉಳಿಯದ ಜನತೆ ದೋಣಿಯ ಮೂಲಕ ಆಗಮಿಸಿ ಅಮೂಲ್ಯವಾದ ಹಕ್ಕನ್ನು ಚಲಾಯಿಸಿದರು. ಊರಿಗೆ ರಸ್ತೆ ಸಂಪರ್ಕ ಸೇತುವೆ ಇಲ್ಲದಿದ್ದರು ಪಾವೂರು ಉಳಿಯ ದ್ವೀಪದ ಜನರು ಮತದಾನವೆಂಬ ತಮ್ಮ ಕರ್ತವ್ಯವನ್ನು ಮಾತ್ರ ಮರೆಯಲಿಲ್ಲ. ಸುತ್ತಲೂ ಹರಿಯುತ್ತಿರುವ ನೇತ್ರಾವತಿ ನದಿಯನ್ನೇ ದಾಟಿ ಬಂದು ಮತದಾನದ ಪ್ರಕ್ರಿಯೆಯಲ್ಲಿ ಭಾಗಿಯಾದರು.
ಪಾವೂರು ಉಳಿಯ ದ್ವೀಪ ಪ್ರದೇಶದಲ್ಲಿ ಸುಮಾರು ೫೦ಕ್ಕೂ ಅಧಿಕ ಕುಟುಂಬಗಳು ವಾಸಿಸುತ್ತಿವೆ. ಇಲ್ಲಿ ಸುಮಾರು ೧೫೦ಕ್ಕೂ ಅಧಿಕ ಮತದಾರರಿದ್ದಾರೆ. ಆದ್ದರಿಂದ ಇಲ್ಲಿನ ಮತದಾರರು ಹಿರಿಯರು, ಕಿರಿಯರೆನ್ನದೆ ಎಲ್ಲರೂ ಬೋಟ್ ಏರಿ ಬಂದು ಮತದಾನದ ಕರ್ತವ್ಯದಲ್ಲಿ ಭಾಗಿಯಾದರು.