ಬೆಂಗಳೂರು: ಕರ್ನಾಟಕ ಸರ್ಕಾರ ಸರ್ಕಾರಿ ನೌಕರರ ಸಂಬಳ ಪ್ಯಾಕೇಜ್ ಖಾತೆ ಕುರಿತು ಸೂಚನೆಯೊಂದನ್ನು ಹೊರಡಿಸಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘಕ್ಕೆ ಈ ಕುರಿತು ಪತ್ರವನ್ನು ರವಾನೆ ಮಾಡಿದೆ.
ಡಾ. ವಿಶಾಲ್ ಆರ್, ಸರ್ಕಾರದ ಕಾರ್ಯದರ್ಶಿಗಳ (ವಿತ್ತೀಯ ಸುಧಾರಣೆ) ಆರ್ಥಿಕ ಇಲಾಖೆ ಈ ಕುರಿತು ಸರ್ಕಾರಿ ನೌಕರರಿಗೆ ಮಾಹಿತಿಯನ್ನು ನೀಡಿದ್ದಾರೆ. ಯಾವ-ಯಾವ ಗುಂಪಿನ ಸರ್ಕಾರಿ ಅಧಿಕಾರಿಗಳು ಯಾವ ಗಡುವಿನೊಳಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.
ಈ ಆದೇಶ ಸರ್ಕಾರದಿಂದ ನೇರವಾಗಿ/ ಪರೋಕ್ಷವಾಗಿ ನೇಮಕಗೊಂಡಿರುವ ಎಲ್ಲಾ ಅರ್ಹ ಅಧಿಕಾರಿ/ ನೌಕರರು ಕಡ್ಡಾಯವಾಗಿ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಸೂಚನೆಯ ವಿವರಗಳು: ಸರ್ಕಾರದ ಇಲಾಖೆಗಳಲ್ಲಿ ನೇರವಾಗಿ/ ಪರೋಕ್ಷವಾಗಿ ಇರುವ ವಿವಿಧ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತಾ ಜಾಲವನ್ನು ಜಾರಿಗೆ ತರಲು ಅಥವಾ ಹೆಚ್ಚಿಸಲು ಉದ್ದೇಶಿಸಿರುವ ಸರ್ಕಾರಿ ಆದೇಶ ದಿನಾಂಕ 21.02.2025ರ ಬಗ್ಗೆ ತಮ್ಮ ಗಮನವನ್ನು ಸೆಳೆಯಲಾಗಿದೆ.
ಮೇಲಿನ ಸರ್ಕಾರಿ ಆದೇಶದ ಉದ್ದೇಶವೆಂದರ ವಿವಿಧ ಬ್ಯಾಂಕುಗಳು ತಮ್ಮ ಸಂಬಳ ಪ್ಯಾಕೇಜುಗಳಲ್ಲಿ ಉಚಿತವಾಗಿ ಅಥವಾ ನಾಮಮಾತ್ರ ವೆಚ್ಚದಲ್ಲಿ ನೀಡುವ ಅಪಘಾತ/ ಅವಧಿ ವಿಮಾ ರಕ್ಷಣೆ ಮತ್ತು ಇತರ ಪ್ರಯೋಜನಗಳನ್ನು ಅಧಿಕಾರಿ/ ನೌಕರರು ಪಡೆದು, ತಮ್ಮ ಅವಲಂಬಿತ ಕುಟುಂಬಗಳನ್ನು ಸುರಕ್ಷಿತಗೊಳಿಸುವುದು.
ಅಲ್ಲದೆ, ಸಂಬಂಧಪಟ್ಟ ಅಧಿಕಾರಿ/ ನೌಕರರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಯೋಜನೆಗಳಡಿ ಹೆಚ್ಚಿನ ವಿಮಾ ರಕ್ಷಣೆಗಾಗಿ ನೋಂದಾವಣಿ ಮಾಡಿಕೊಳ್ಳಲು ಪ್ರೇರೇಪಿಸುವುದು, ಅದಲ್ಲದೆ ಹೆಚ್ಚುವರಿ/ ನಾಮಮಾತ್ರ ಪ್ರೀಮಿಯಂ ಪಾವತಿಸುವ ಮೂಲಕ, ಹೆಚ್ಚಿನ ವಿಮಾ ರಕ್ಷಣೆಗಾಗಿ ಬ್ಯಾಂಕುಗಳು ನೀಡುತ್ತಿರುವ ವೈಯಕ್ತಿಕ ಅಪಘಾತ ವಿಮೆಯನ್ನು ಪಡೆಯಲು ಪ್ರೋತ್ಸಾಹಿಸುವುದು.
ಆದ್ದರಿಂದ, ಸರ್ಕಾರಿ ಆದೇಶದ ಹೊರಡಿಸಿದ 3 ತಿಂಗಳಲ್ಲಿ ಎಲ್ಲಾ ಅಧಿಕಾರಿ/ ನೌಕರರು ಮತ್ತು ವಿವಿಧ ನಿಗಮಗಳು/ ಮಂಡಳಿಗಳ ಉದ್ಯೋಗಿಗಳು ತಮ್ಮ ಕುಟುಂಬಗಳ ಹಿತದೃಷ್ಟಿಯಿಂದ ತಮ್ಮ ಆಯ್ಕೆಯ ಯಾವುದೇ ಬ್ಯಾಂಕ್ ನೀಡುವ ಸಂಬಳ ಪ್ಯಾಕೇಜ್ಗಳನ್ನು ಸ್ವಯಂಪ್ರೇರಿತವಾಗಿ ಆಯ್ಕೆ ಮಾಡಲು ಹೆಚ್ಚಿನ ಆಸಕ್ತಿಯಿಂದ ಮನವೊಲಿಸುವುದು ಮತ್ತು ಸಂಬಂಧಪಟ್ಟ ಬ್ಯಾಂಕಿಗೆ ಸಂಬಳ ಪ್ಯಾಕೇಜುಗಳಲ್ಲಿ ಸೇರಿಸಲು ಅರ್ಜಿಯನ್ನು ಸಲ್ಲಿಸಲು ತಮ್ಮನ್ನು ಮತ್ತು ಎಲ್ಲಾ ಅಧಿಕಾರಿ/ ನೌಕರರನ್ನು ಪ್ರೇರೇಪಿಸಲು ಸೂಕ್ತ ಕ್ರಮ ಕೈಗೊಳ್ಳಲು ಎಲ್ಲಾ ಇಲಾಖಾ ಮುಖ್ಯಸ್ಥರನ್ನು ಕೋರಲಾಗಿತ್ತು.
ಸರ್ಕಾರಿ ಆದೇಶ ಹೊರಡಿಸಿ 4 ತಿಂಗಳಾದರೂ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಂಡ ಅಧಿಕಾರಿಗಳು/ ನೌಕರರ ಸಂಖ್ಯೆ 3 ಲಕ್ಷಗಳಿಗೆ ಮಾತ್ರ ತಲುಪಿದೆಯೆಂದು ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಯಡಿ 32,611 ಮತ್ತು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (PMJJBY) ಯಡಿ 25,386 ನೋಂದಣಿಗಳು ಮಾತ್ರ ಹೆಚ್.ಆರ್.ಎಂ.ಎಸ್ ನಲ್ಲಿ ದಾಖಲಾಗಿದ್ದು, ಯೋಜನೆಗಳಡಿ ಹೆಚ್ಚಿನ ಪ್ರಗತಿಯಾಗಿರುವುದಿಲ್ಲವೆಂದು ತಿಳಿದು ಬಂದಿದೆ.
ಸರ್ಕಾರಿ ಆದೇಶದಲ್ಲಿ ವಿವರಿಸಿದಂತೆ ಎಲ್ಲಾ ಅರ್ಹ ಅಧಿಕಾರಿ/ ನೌಕರರು ಕಡ್ಡಾಯವಾಗಿ ಸಂಬಳ ಪ್ಯಾಕೇಜಿನಲ್ಲಿ ನೋಂದಾಯಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಿದ ಅವಧಿಯೊಳಗೆ ನೋಂದಾಯಿಸದಿದ್ದರೆ ಅಧಿಕಾರಿಗಳ ಸಂಬಳದ ವಿತರಣೆಯನ್ನು ತಡೆಹಿಡಿಯಲು ಕ್ರಮ ಕೈಗೊಳ್ಳಲು ಸರ್ಕಾರವು ಯೋಚಿಸಿದೆ.
‘ಎ’ ಗುಂಪಿನ ಅಧಿಕಾರಿಗಳು 31/82025, ‘ಬಿ’ ಗುಂಪಿನ ಅಧಿಕಾರಿಗಳು 30/9/2025, ‘ಸಿ’ ಗುಂಪಿನ ಅಧಿಕಾರಿಗಳು 30/11/2025 ಮತ್ತು ‘ಡಿ’ ಗುಂಪಿನ ಅಧಿಕಾರಿಗಳು 31/1/2026ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.