ರಾಯಚೂರು : ಬೆಂಗಳೂರು-ಸಿಂಧನೂರು ನಡುವಿನ ಪ್ರಯಾಣಿಕರಿಗೆ ಸಿಹಿಸುದ್ದಿ. ಸಿಂಧನೂರು-ಬೆಂಗಳೂರು ನಡುವೆ ಸಂಚಾರ ನಡೆಸಲು ಶುಕ್ರವಾರ ರೈಲು ಸೇವೆ ಆರಂಭವಾಗಿದೆ. ರೈಲ್ವೆ ಇಲಾಖೆ ಕೆಎಸ್ಆರ್ ಬೆಂಗಳೂರು- ಎಸ್ಎಸ್ಎಸ್ ಹುಬ್ಬಳ್ಳಿ ರೈಲನ್ನು ಸಿಂಧನೂರು ತನಕ ವಿಸ್ತರಣೆ ಮಾಡಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು.
ಸಿಂಧನೂರಿನಿಂದ ಹುಬ್ಬಳ್ಳಿ ಮತ್ತು ಬೆಂಗಳೂರು ನಗರಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ, ವಿಶೇಷವಾಗಿ ವ್ಯಾಪಾರಿಗಳು, ಸಾಫ್ಟ್ವೇರ್ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ಸುಲಭ ಮತ್ತು ಅನುಕೂಲಕರ ಪ್ರಯಾಣ ವ್ಯವಸ್ಥೆಯನ್ನು ರೈಲು ಒದಗಿಸುತ್ತದೆ.
ಅಲ್ಲದೆ, ಸಿಂಧನೂರಿನಿಂದ ಬೆಂಗಳೂರು ಮತ್ತು ಹುಬ್ಬಳ್ಳಿಗೆ ನೇರ ರೈಲು ಸಂಪರ್ಕವು ಮಾರುಕಟ್ಟೆ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳಿಗೆ ಉತ್ತಮ ಸಂಪರ್ಕವನ್ನು ಒದಗಿಸುತ್ತದೆ. ಉತ್ತರ ಕರ್ನಾಟಕಕ್ಕೆ ಉತ್ತಮ ಸಂಪರ್ಕ, ರಾಜ್ಯದ ರಾಜಧಾನಿಯೊಂದಿಗೆ ಆರ್ಥಿಕ ಹಾಗೂ ಸಾಮಾಜಿಕ ಸಂಬಂಧಗಳನ್ನು ರೈಲು ಇನ್ನಷ್ಟು ಬಲಗೊಳಿಸಲಿದೆ.
ಪ್ರಮುಖ ಕೃಷಿ ಪ್ರದೇಶವಾಗಿರುವ ಸಿಂಧನೂರಿನ ಜನತೆಗೆ ಭತ್ತ ಮತ್ತು ಹತ್ತಿಯಂತಹ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಲಭ್ಯವಾಗಲಿದ್ದು, ಇದು ರೈತರ ಆದಾಯವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ವಿ. ಸೋಮಣ್ಣ ಹೇಳಿದ್ದಾರೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ ಮತ್ತು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ನಿಲ್ದಾಣಗಳ ನಡುವೆ ಪ್ರತಿದಿನ ಸಂಚರಿಸುವ ಎಕ್ಸ್ಪ್ರೆಸ್ (17391/ 17392) ರೈಲುಗಳನ್ನು ಈಗ ಸಿಂಧನೂರಿನವರೆಗೆ ವಿಸ್ತರಿಸಲಾಗಿದೆ. ನೈಋತ್ಯ ರೈಲ್ವೆ ವಲಯದ ಈ ನಿರ್ಧಾರದಿಂದ ಸಿಂಧನೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಉತ್ತಮ ರೈಲು ಸಂಪರ್ಕ ಲಭ್ಯವಾಗಲಿದೆ.
ಜುಲೈ 12ರಂದು ರೈಲು ಸಿಂಧನೂರಿನಿಂದ ತನ್ನ ಸಂಚಾರವನ್ನು ಆರಂಭಿಸಿದ್ದು, ಅದೇ ರೀತಿ ರೈಲು ಸಂಖ್ಯೆ 17391 ಕೆಎಸ್ಆರ್ ಬೆಂಗಳೂರು – ಎಸ್ಎಸ್ಎಸ್ ಹುಬ್ಬಳ್ಳಿ ರೈಲು ಜುಲೈ 13ರಂದು ಸಿಂಧನೂರಿಗೆ ಬರಲಿದೆ. ಕೆಎಸ್ಆರ್ ಬೆಂಗಳೂರು ಮತ್ತು ಕುಂದಗೋಳ ನಿಲ್ದಾಣಗಳ ನಡುವಿನ ಸಮಯಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಈ ರೈಲು ಸಂಚಾರದಿಂದ ಶಿಶ್ವಿನಹಳ್ಳಿ, ಅಣ್ಣಿಗೇರಿ, ಗದಗ, ತಳಕಲ್, ಭಾಣಾಪುರ, ಕೊಪ್ಪಳ, ಗಿಣಿಗೇರಾ ಭಾಗದ ಜನರಿಗೂ ಅನೂಕೂಲವಾಗಲಿದ್ದು, ರಾಜ್ಯ ರಾಜಧಾನಿ ಬೆಂಗಳೂರಿಗೆ ನೇರ ಸಂಪರ್ಕ ಹೊಂದಲು ಅನೂಕೂಲ ಕಲ್ಪಿಸಿದಂತಾಗುತ್ತದೆ. ಇನ್ನು ಹುಬ್ಬಳ್ಳಿಯವರೆಗೆ ಸೀಮಿತವಾಗಿದ್ದ ರೈಲಿನ ಸೇವೆಯನ್ನು, ಸಿಂಧನೂರು ವರೆಗೆ ಸೇವೆಗಳನ್ನು ವಿಸ್ತರಿಸಿದ ಹಿನ್ನಲೆಯಲ್ಲಿ, ಪರಿಷ್ಕೃತ ಸಮಯದ ರೈಲು ಇಲಾಖೆ ರೈಲಿನ ವೇಳಾಪಟ್ಟಿ, ನಿಲ್ದಾಣ ಈ ಕೆಳಗಿನಂತಿದೆ.