ಬೆಂಗಳೂರು: ಬಿಜೆಪಿ ನಾಯಕ, ಕೆ. ಆರ್. ಪುರ ಕ್ಷೇತ್ರದ ಶಾಸಲ ಬೈರತಿ ಬಸವರಾಜ್ ವಿರುದ್ಧ ಕೊಲೆ ಪ್ರಕರಣದಲ್ಲಿ ಎಫ್ಐಆರ್ ದಾಖಲಾಗಿದೆ. ರೌಡಿ ಶೀಟರ್ ಶಿವ ಪ್ರಕಾಶ್ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವರು 5ನೇ ಆರೋಪಿಯಾಗಿದ್ದಾರೆ.
ಭಾರತಿ ನಗರದ ರೌಡಿ ಶೀಟರ್ ಶಿವ ಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆಗೆ ಸಂಬಂಧಿಸಿದಂತೆ ಆತನ ತಾಯಿ ವಿಜಯಲಕ್ಷ್ಮೀ ಪೊಲೀಸರಿಗೆ ದೂರು ನೀಡಿದ್ದರು. ಶಾಸಕ ಬೈರತಿ ಬಸವರಾಜ್ ಮತ್ತು ಅವರ ಆಪ್ತ ಜಗದೀಶ್ ಹತ್ಯೆಗೆ ಸಂಚು ರೂಪಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣದ ಕುರಿತು ಎಫ್ಐಆರ್ ದಾಖಲಾಗಿದೆ. ಬೈರತಿ ಬಸವರಾಜ್ ಎ5 ಆರೋಪಿ. ಜಗದೀಶ್ ಎ1, ಕಿರಣ್ ಎ2, ವಿಮಲ್ ಎ3 ಮತ್ತು ಅನಿಲ್ ಎ4 ಆರೋಪಿಗಳು.
ಜಾಗದ ವಿಚಾರಕ್ಕೆ ಕೊಲೆ: ಕಿತ್ತಕನೂರು ಜಾಗದ ವಿಚಾರಕ್ಕೆ ಕೊಲೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೊಲೆ ಮಾಡಿರುವ ಹಲವು ಆರೋಪಿಗಳು ಹಲವು ಬಾರಿ ನನ್ನ ಮಗನಿಗೆ ಬೆದರಿಕೆ ಹಾಕಿದ್ದರು. ಮಗ ಹಲವು ಬಾರಿ ಬೈರತಿ ಬಸವರಾಜ್ ಮತ್ತು ಜಗದೀಶ್ ನನಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಮಗ ಹೇಳಿದ್ದ ಎಂದು ತಾಯಿ ದೂರಿನಲ್ಲಿ ತಿಳಿಸಿದ್ದರು.
ಶಿವಪ್ರಕಾಶ್ ಜಗದೀಶ್ ಮತ್ತು ಇತರರ ವಿರುದ್ಧ ಭಾರತಿ ನಗರ ಪೊಲೀಸ್ ಠಾಣೆಯಲ್ಲಿ ಫೆಬ್ರವರಿಯಲ್ಲಿಯೇ ದೂರು ನೀಡಿದ್ದರು. ಕಿತ್ತಕನೂರು ಬಳಿ ನಾನು ಜಾಗವನ್ನು ಖರೀದಿ ಮಾಡಿದ್ದೆ. ಈ ಜಾಗವನ್ನು ಮಾರಾಟ ಮಾಡಬೇಕು ಜಗದೀಶ್ ಮತ್ತು ಇತರರು ನನಗೆ ಜೀವ ಬೆದರಿಕೆ ಹಾಕಿದ್ದಾರೆ, ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದರು.
ಹಲಸೂರು ಕೆರೆಯ ಬಳಿಯ ವಾರ್ ಮೆಮೋರಿಯಲ್ ಸರ್ಕಲ್ನಲ್ಲಿ ರೌಡಿ ಶೀಟರ್ ಶಿವಕುಮಾರ್ ಹತ್ಯೆ ಮಾಡಲಾಗಿತ್ತು. ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಶಿವಕುಮಾರ್ ಹತ್ಯೆ ಮಾಡಿದ್ದರು.
ಬಿಜೆಪಿ ನಾಯಕ ಬೈರತಿ ಬಸವರಾಜ್ ಕೆ. ಆರ್. ಪುರ ಕ್ಷೇತ್ರದ ಹಾಲಿ ಶಾಸಕರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಅವರು ನಗರಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.
ಎಫ್ಐಆರ್ ದಾಖಲಾದ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕ ಬೈರತಿ ಬಸವರಾಜ್, “ಕೊಲೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ಯಾರೇ ಸುಮ್ಮನೆ ದೂರು ನೀಡಿದರೂ ಎಫ್ಎಆರ್ ದಾಖಲಿಸಬಹುದೇ?, ಎಫ್ಐಆರ್ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ” ಎಂದು ಹೇಳಿದ್ದಾರೆ.