ಮಂಗಳೂರು: ಭಾರತದಲ್ಲಿ ಅಭಿವೃದ್ದಿ ಎನ್ನುವದು ಕೆವಲ ಮಹಾನಗರಗಳಿಗೆ ಸೀಮತ ಆಗಬಾರದು ಎನ್ನುವ ಆಶಯ ಪ್ರತಿಯೊಬ್ಬರಲು ಮೂಡತೊಡಗಿದೆ, ಬಿಯಾಂಡ ಬೆಂಗಳೂರು ಎಂಬ ಮೂಲ ಮಂತ್ರದೊಂದಿಗೆ ಬೆಂಗಳೂರಿನಿಂದಾಚೆಗೆ ಕರ್ನಾಟಕದಲ್ಲಿ ಬೇರೆ ಜಿಲ್ಲೆಗಳಲ್ಲಿ ಹೂಡಿಕೆದಾರರಿಗೆ ಲಾಭದಾಯಕ ಅವಕಾಶಗಳನ್ನು ಸೃಷ್ಟಿಸಿರುವ ಮೂಲಸೌಕರ್ಯ ಅಭಿವೃದ್ಧಿ ಮಾಡುವತ್ತ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ಗಮನ ಹರಿಸಿವೆ.
‘ವೋಕಲ್ ಫಾರ್ ಲೋಕಲ್ ಅಭಿಯಾನವು ಭಾರತದಲ್ಲಿ ಸ್ಥಳಿಯ ಜನರ ಮನಸ್ಥಿತಿಯನ್ನು ಸ್ಥಳೀಯ ಉತ್ಪನ್ನಗಳಿಗೆ ನಾವು ದನಿಯಾಗಬೇಕು ಎನ್ನುವ ಮೂಲಮಂತ್ರ ಆಗಿದೆ, ನಮ್ಮದೇ ಪ್ರಕೃತಿ, ಸಂಸ್ಕೃತಿ, ಪರಂಪರೆಯಡಿ ದಕ್ಷಿಣ ಕನ್ನಡದ ಭಾಗಗಳಲ್ಲಿ ಹೋಮ್ ಕಮಿಂಗ್ ಪ್ಲಾಟ್ ಫಾರ್ಮ್ ಮೂಲಕ ‘ಬ್ಯಾಕ್ ಟು ಊರು’ ಪರಿಕಲ್ಪನೆ ಆರಂಭವಾಗಿದೆ.
ಈ ಕುರಿತಂತೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ ‘ಬ್ಯಾಕ್ ಟು ಊರು’ ಪರಿಕಲ್ಪನೆಗೆ ಪೂರಕವಾಗಿ ಸಿಲಿಕಾನ್ ಬೀಚ್ ಪ್ರೋಗ್ರಾಂ ಮೂಲಕ ಹೋಮ್ ಕಮಿಂಗ್ ಪ್ಲಾಟ್ ಫಾರ್ಮ್ ರೂಪಿಸಿರುವುದು ಶ್ಲಾಘನೀಯ ಕಂಪೆನಿ ಸ್ಥಾಪನೆ, ಅಭಿವೃದ್ಧಿಗೆ ಬೇಕಾದ ಮಾದರಿ ನಮ್ಮಲ್ಲೇ ಇದ್ದು, ಸಮೀಕ್ಷೆಯೊಂದರ ಪ್ರಕಾರ ಶೇ.95ರಷ್ಟು ಜನರು ಮರಳಿ ಮಂಗಳೂರಿಗೆ ಆಗಮಿಸಲು ಉತ್ಸುಕತೆ ತೋರಿದ್ದಾರೆ ಎಂಬುದು ಆಶಾದಾಯಕ ಬೆಳವಣಿಗೆ ಎಂದಿದ್ದಾರೆ.
ನಗರದ ಯೆಯ್ಯಾಡಿಯಲ್ಲಿ ಶನಿವಾರ ಸಿಲಿಕಾನ್ ಬೀಚ್ ಪ್ರೋಗ್ರಾಂ ಮೂಲಕ ಹೋಮ್ ಕಮಿಂಗ್ ಪ್ಲಾಟ್ ಫಾರ್ಮ್ಗೆ ಚಾಲನೆ ನೀಡಿ ಮಾತನಾಡಿ ಐಟಿಗೆ ಸಂಬಂಧಿಸಿ ವಿಶ್ವದೆಲ್ಲಡೆ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಮರಳಿ ಮಂಗಳೂರಿಗೆ ಆಗಮಿಸಲು ಹೋಮ್ ಕಮಿಂಗ್ ವೇದಿಕೆ ಉತ್ತಮವಾಗಿದೆ. ಐಟಿ ಹೊರತಾಗಿಯೂ ಈ ಪರಿಕಲ್ಪನೆ ವ್ಯಾಪಕಗೊಳ್ಳಬೇಕು ಎಂದಿದ್ದಾರೆ.
ಸಂಘಟಿತವಾಗಿ ಈ ಕಾರ್ಯಕ್ಕೆ ವೇಗ ದೊರೆಯಬೇಕಿದೆ. ‘ಬ್ಯಾಕ್ ಟು ಊರು’ ಪರಿಕಲ್ಪನೆಯಡಿ ಸಂಸದರ ಕಚೇರಿ ಇತ್ತೀಚೆಗೆ ಬೊಲ್ಪು ಕಾರ್ಯಕ್ರಮ ಆಯೋಜಿಸಿತ್ತು. ಮಂಗಳೂರನ್ನು ಋಣಾತ್ಮಕವಾಗಿ, ಪದೇ ಪದೇ ಅಪರಾಧ ಸಂಭವಿಸುವ ಪ್ರದೇಶ ಎಂದು ಬಿಂಬಿಸಲಾಗುತ್ತಿದ್ದು, ಧನಾತ್ಮಕ ವಿಷಯಗಳ ಮೂಲಕ ಮಂಗಳೂರು ಪ್ರಚಾರಗೊಳ್ಳಬೇಕು ಎಂದರು.
ಸಿಲಿಕಾನ್ ಬೀಚ್ ಪ್ರೋಗ್ರಾಂ ಸಂಚಾಲಕ ರೋಹಿತ್ ಭಟ್ ಮಾತನಾಡಿ, ಹೋಮ್ ಕಮಿಂಗ್ ಪ್ಲಾಟ್ ಫಾರ್ಮ್ ಕರಾವಳಿ ಕರ್ನಾಟಕಕ್ಕೆ ಮರಳಲು ಅನುಭವಿ ವೃತ್ತಿಪರರನ್ನು ಬೆಂಬಲಿಸುವ ಒಂದು ಉಪಕ್ರಮವಾಗಿದೆ. ತಮ್ಮ ಹುಟ್ಟೂರು ಪ್ರದೇಶದಲ್ಲಿ ಅಭಿವೃದ್ಧಿ ಹೊಂದುತ್ತಿರುವ ವೃತ್ತಿಜೀವನ ಮತ್ತು ಉತ್ತಮ ಗುಣಮಟ್ಟದ ಜೀವನವನ್ನು ಮರು ಶೋಧಿಸಲು ಸಹಾಯ ಮಾಡುವ ಈ ಉಪಕ್ರಮವು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ನೊಂದಿಗೆ ಕಾರ್ಯತಂತ್ರದ ಪಾಲುದಾರಿಕೆಯಿಂದ ನಡೆಸಲ್ಪಡುತ್ತದೆ ಎಂದರು.
ಕಳೆದ ಎರಡು ವರ್ಷಗಳಲ್ಲಿ 40ಕ್ಕೂ ಹೆಚ್ಚು ಹೊಸ ಕಂಪೆನಿಗಳು ಇಲ್ಲಿ ಆರಂಭಗೊಂಡಿದ್ದು, 8,000ಕ್ಕೂ ಮೀರಿ ಉದ್ಯೋಗಗಳನ್ನು ಸೃಷ್ಟಿಸಿವೆ. ಮುಂಬರುವ ದಿನಗಳಲ್ಲಿ ಅವಕಾಶಗಳು ಇನ್ನಷ್ಟು ವೃದ್ಧಿಸಲಿದ್ದು, ಅನುಭವಿ ವೃತ್ತಿಪರರು ಭಾರತದ ಸಿಲಿಕಾನ್ ಬೀಚ್ಗೆ ತೆರಳಲು ಈಗ ಸೂಕ್ತ ಸಮಯವಾಗಿದೆ. ಕರಾವಳಿಗೆ ಮರಳಿ ಬರುವ ಪ್ರತಿಯೊಬ್ಬ ವೃತ್ತಿಪರ ತಾನೂ 15-25 ಇತರ ವೃತ್ತಿಪರ ಅಥವಾ ಹೊಸ ಪದವೀಧರರಿಗೆ ಉದ್ಯೋಗ ಸೃಷ್ಟಿಸುವ ಮೂಲಕ ತನ್ನ ಪ್ರದೇಶದಿಂದ ಪ್ರತಿಭಾ ಪಲಾಯನವನ್ನು ತಡೆಗಟ್ಟಲು ಸಾಧ್ಯವಾಗುತ್ತದೆ ಎಂದರು.