ಮೈಸೂರು: ರಿಯಲ್ ಎಸ್ಟೇಟ್ಗಾಗಿ ರಾಮನಗರದ ಹೆಸರು ಬದಲಾವಣೆ ಮಾಡಲಾಗಿದೆ. ರಾಮ ಅಂಥ ಹೆಸರು ಇರುವುದು ಸರ್ಕಾರಕ್ಕೆ ಅಲರ್ಜಿ ತರಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯಾರ್ಯಾರು ಅಲ್ಲಿ ಎಷ್ಟೇಷ್ಟು ಸೈಟ್ ಮಾಡಿದ್ದಾರೆ ಗೊತ್ತಾಗಲಿ ಮೊದಲು. ಆ ನಂತರ ಹೆಸರು ಬದಲಾವಣೆಯ ಅಸಲಿ ಕಥೆ ಸ್ಪಷ್ಟವಾಗುತ್ತೆ. ಹೆಸರು ಬದಲಾವಣೆ ಮಾಡಿದ ಕೂಡಲೇ ಏನು ದಿಢೀರ್ ಬದಲಾವಣೆ ಆಗಿಬಿಡುತ್ತಾ? ಹಾಗೇ ಬದಲಾವಣೆ ಆಗುವುದಾದರೇ ಬೆಂಗಳೂರು ಅಂಥ ಸೇರಿಸಿಬಿಡಿ ಎಂದರು.
ಸಿದ್ದರಾಮಯ್ಯ ಏನು ರಾಜ್ಯದ ಮುಖ್ಯಮಂತ್ರಿಯಾ ಅಥವಾ ಬೆಂಗಳೂರಿನ ಮುಖ್ಯಮಂತ್ರಿಯಾ? ಡಿ.ಕೆ ಶಿವಕುಮಾರ್ ಹೇಗೆ ಒಬ್ಬರೇ ಇದರ ನಿರ್ಧಾರ ತೆಗೆದುಕೊಳ್ಳುತ್ತಾರೆ.
ಇದರ ಹಿಂದೆ ರಿಯಲ್ ಎಸ್ಟೇಟ್ ಮಾಫಿಯಾ ಇದೆ. ರಿಯಲ್ ಎಸ್ಟೇಟ್ಗಾಗಿಯೇ ಹೆಸರು ಬದಲಾವಣೆ ಆಗಿದೆ ಎಂದು ಆರೋಪಿಸಿದರು.
ಮೈಸೂರು ಸ್ಯಾಂಡಲ್ಗೆ ತಮ್ಮನ್ನ ಬಾಟಿಯಾ ಹೆಸರು ಸೂಚಿಸಿದ ತಜ್ಞ ಯಾರು?. ಬರಿ ತಜ್ಞರು ತಜ್ಞರು ಎಂದು ಹೆಸರು ಹೇಳಬೇಡಿ. ನನಗೆ ಅವರ ಹೆಸರುಬೇಕಿದೆ. ಜಮೀರ್ ಅಹಮದ್ ಹೇಳಿದ್ರಾ ಅಥವಾ ಇನ್ಯಾರು ಹೇಳಿದರು. ತಮ್ಮನ್ನ ಬಾಟಿತಾರನ್ನ ರಾಯಭಾರಿ ಮಾಡಿಕೊಳ್ಳುವ ಅವಶ್ಯಕತೆ ಏನಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಮಾಡಿದ ಕನ್ನಡಿಗರು ಇರಲಿಲ್ವಾ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯರನ್ನ ಖುಷಿ ಪಡಿಸಲು ಚಾರ್ಜ್ಶೀಟ್ ಬಿಡುಗಡೆ ಮಾಡಿಲ್ಲ. ಚಾರ್ಜ್ಶೀಟ್ನಲ್ಲಿರುವ ಸತ್ಯ ನೋಡಿ ಸಿದ್ದರಾಮಯ್ಯ ಕಂಗಲಾಗಿದ್ದಾರೆ. ಸರ್ಕಾರ ಇನ್ನೂ ಮೂರು ವರ್ಷದಲ್ಲಿ ಇನ್ನಷ್ಟು ತಪ್ಪುಗಳನ್ನ ಮಾಡಲಿ. ಆಗ ಆ ಚಾರ್ಜ್ಶೀಟ್ ಕೂಡ. ಬೆಳೆಯುತ್ತದೆ ಎಂದು ಹೇಳಿದರು.
ರಾಜ್ಯದ ಮೆಡಿಕಲ್ ಮಾಫಿಯಾಗೆ ಸಹಾಯ ಮಾಡಲು ಜನೌಷಧ ಕೇಂದ್ರ ಬಂದ್ ಮಾಡಲಾಗಿದೆ. ಸಿದ್ದರಾಮಯ್ಯಗೆ ಪ್ರಧಾನಿ ನರೇಂದ್ರ ಮೋದಿ ಮೇಲೆ ಕೋಪ. ಅವರ ಪೋಟೋ ಕಂಡರೆ ಆಗಲ್ಲ. ಪೋಟೋ ಕಾಣಬಾರದು ಅಂತ ಬಂದ್ ಮಾಡಿದ್ದಾರೆ. ಬಡವರ ಅನುಕೂಲಕ್ಕಾಗಿ ಜನೌಷಧ ಕೇಂದ್ರ ಮಾಡಲಾಗಿತ್ತು. ಸಿಎಂ ಸಿದ್ದರಾಮಯ್ಯ ಸ್ವತಃ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಲಿ. ಆಸ್ಪತ್ರೆಯಲ್ಲಿರುವ ಔಷಧಿ ಸ್ಟಾಕ್ ಬಗ್ಗೆ ಪರಿಶೀಲನೆ ಮಾಡಲಿ. ಬಂದ್ ಮಾಡುವ ಮೂಲಕ ಪ್ರಧಾನಿ ಮೋದಿಗೆ ಅವಮಾನ, ಬಡವರಿಗೆ ಅನ್ಯಾಯ ಮಾಡಲಾಗಿದೆ. ಸರ್ಕಾರಿ ವೈದ್ಯರು ಹೊರಗಡೆ ಔಷಧಿ ತೆಗೆದುಕೊಳ್ಳಲು ಬರೆದುಕೊಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಯಾವುದೇ ಔಷಧಿ ಕೊಡುತ್ತಿಲ್ಲ. ಇದರಿಂದ ಬಡವರಿಗೆ ಅನ್ಯಾಯ ಆಗುತ್ತಿದೆ. ರಾಜ್ಯ ಸರ್ಕಾರ ಕೇಂದ್ರದ ಯೋಜನೆಗಳಿಗೆ ಸಹಕಾರ ನೀಡುತ್ತಿಲ್ಲ. ಈ ಮೂಲಕ ಜನರಲ್ಲಿ ಕೇಂದ್ರದ ಬಗ್ಗೆ ತಪ್ಪು ಭಾವನೆ ಮೂಡಿಸಲು ಯತ್ನಿಸುತ್ತಿದೆ. ಇವರ ಹುಳುಕನ್ನ, ವೈಫಲ್ಯವನ್ನ ಮುಚ್ಚಿಕೊಳ್ಳಲು ಕೇಂದ್ರದ ಮೇಲೆ ಆರೋಪ ಮಾಡಲಾಗುತ್ತಿದೆ. ಕೇಂದ್ರದ ಯೋಜನೆಗಳಿಗೆ ಕಲ್ಲು ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ದುಡ್ಡು ಸಿಗುತ್ತೆ ಅಂದ್ರೆ ರಾಜ್ಯ ಸರ್ಕಾರ ಯಾವ ಮಟ್ಟಕ್ಕೆ ಬೇಕಾದ್ರು ಇಳಿಯುತ್ತದೆ. ಗ್ಯಾರಂಟಿ ಕೊಡುತ್ತಿರುವುದರಿಂದ ಇಂತಹದೆಲ್ಲ ಕೆಲಸಕ್ಕೆ ಕೈ ಹಾಕುತ್ತಾರೆ. ಅವರೇ ಹೇಳಿದ್ದಾರೆ. ಒಂದು ಕೈಯಲ್ಲಿ ಕಿತ್ತುಕೊಂಡು ಮತ್ತೊಂದು ಕೈಗೆ ಕೊಟ್ತಿವಿ ಅಂತ. ಕಿತ್ತುಕೊಳ್ಳಲು ಏನೇನು ಬೇಕು ಅದನ್ನೆಲ್ಲಾ ಮಾಡುತ್ತಿದ್ದಾರೆ. ಪರಿಣಿತರು ಅಯೋಗ್ಯ ಐಡಿಯಾಗಳನ್ನ ಕೊಡುತ್ತಿದ್ದಾರೆ. ಅದನ್ನ ಇವರು ಅಳವಡಿಸಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಎಂಬ ನಾಮನಿಶಾನೆ ಕಾಣುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಶಾಸಕರು ಹಾರೆ, ಗುದ್ದಲಿಯನ್ನ ತಮ್ಮ ಮನೆಯಲ್ಲಿ ಇಟ್ಟು ಬಿಟ್ಟಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ತಿಂಗಳಿಗೆ ಒಂದು ಗುದ್ದಲಿ ಪೂಜೆ ಆಗುತ್ತಿತ್ತು. ಈಗ ಎರಡು ವರ್ಷದಿಂದ ಅದೆಲ್ಲ ಏನೂ ಇಲ್ಲ
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಗೆದ್ದಿರುವ ವಿರೋಧ ಪಕ್ಷದ ಹೊಸ ಶಾಸಕರು ಪಾಪಿಗಳು. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಹಣ ಕೊಡುತ್ತಿಲ್ಲ. ಆಡಳಿತ ಪಕ್ಷದ ಶಾಸಕರಿಗೂ ಹಣ ಕೊಡುತ್ತಿಲ್ಲ. ಇದೇ ಕಾರಣಕ್ಕೆ ರಾಜು ಕಾಗೆ ಆತ್ಮಹತ್ಯೆ ಮಾಡಿಕೊಳ್ಳುವ ಮಾತುಗಳನ್ನು ಆಡಿದ್ದಾರೆ. ಹಿರಿಯ ನಾಯಕ ದೇಶಪಾಂಡೆ ಅಸಮಾಧಾನಗೊಂಡಿದ್ದಾರೆ. ಇಂತಹ ಅಯೋಗ್ಯ ಸರ್ಕಾರ ಬಂದ ಮೇಲೆ ಅಭಿವೃದ್ಧಿಗೆ ಹಣ ಕೊಡುತ್ತಿಲ್ಲ ಹಾಗಾಗಿ ಶಾಸಕರು, ಜನರು ಪರದಾಡುತ್ತಿದ್ದಾರೆ. ಖಾಸಗಿ ಸರ್ವೆಯಲ್ಲಿ ಇದು ರುಜುವಾತಾಗಿದೆ ಎಂದು ಹೇಳಿದರು.
ಈಗ ವಿಧಾನಸಭಾ ಚುನಾವಣೆ ನಡೆದರೆ ಬಿಜೆಪಿ 140 ರಿಂದ 150 ಸ್ಥಾನ ಗೆಲ್ಲಲಿದೆ ರಾಜ್ಯದ ಜನರ ಬೇಸತ್ತಿದ್ದಾರೆ ಜನರ ಆಸೆಗಳ ಮಣ್ಣು ಪಾಲಾಗಿವೆ ಎಂದರು.