ಭಾರತೀಯ ಸಂಸ್ಕೃತಿಯ ಪರಂಪರೆ ನಿಂತಿರುವುದೇ ಪ್ರಕೃತಿ ಆರಾಧನೆಯಲ್ಲಿ: ಡಾ. ಕುಮಾರ

ಮಂಡ್ಯ : ಭಾರತೀಯ ಸಂಸ್ಕೃತಿಯ ಪರಂಪರೆ ನಿಂತಿರುವುದೇ ಪ್ರಕೃತಿಯ ಆರಾಧನೆಯಲ್ಲಿ ಪ್ರಕೃತಿ ಸಂರಕ್ಷಣೆ ಎಲ್ಲಾ ಭಾರತೀಯ ನಾಗರೀಕರ ಹೊಣೆಯಾಗಿದೆ ಎಂದು ಜಿಲ್ಲಾಧಿಕಾರಿ ಕುಮಾರ್ ಅವರು ಹೇಳಿದರು.

ಏ.19 ರಂದು ಸ್ಕೋಪ್ ಫೌಂಡೇಶನ್ ಇಂಡಿಯಾ ವತಿಯಿಂದ ಹಲ್ಲೆಗೆರೆಯ ಭೂದೇವಿ ಆಧ್ಯಾತ್ಮಿಕ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಮದರ್ ಅರ್ಥ್ ಡೇ ಸೆಲೆಬ್ರೇಶನ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಆಧುನಿಕ ತಂತ್ರಜ್ಞಾನದಲ್ಲಿ ನಾವೆಲ್ಲರೂ ತಲ್ಲೀನರಾಗಿ ನಮ್ಮ ಪೂರ್ವ ಪರಂಪರೆಯನ್ನು ಮರೆಯುತ್ತಿದ್ದೇವೆ, ನಮ್ಮ ಪೂರ್ವಜರು ನಂಬಿ ಆರಾಧಿಸಿ ಕೊಂಡು ಬಂದದ್ದು ಭೂಮಿ ಮತ್ತು ಪ್ರಕೃತಿಯನ್ನ ಹೀಗಾಗಿ ನಾವು ಯಾರೂ ಸಹ ಭೂತಾಯಿಯನ್ನು ಮರೆಯುವಂತಿಲ್ಲ ಎಂದರು.

ಮನುಷ್ಯ ತನ್ನ ಆಸೆ ಕೂಪಕ್ಕೆ ಬಿದ್ದು ಭೂ ಸಂಪತ್ತನ್ನು ಲೂಟಿ ಮಾಡುತ್ತಿದ್ದಾನೆ, ಪ್ರಕೃತಿಯನ್ನು ವಿನಾಶದತ್ತ ಕೊಂಡೊಯ್ಯುತ್ತಿದ್ದಾನೆ, ಭೂಮಿಯ ಒಡಲನ್ನು ಎಷ್ಟೇ ಬಗೆದರು ಮುನಿಸಾಗದೆ ಭೂತಾಯಿ ಎಲ್ಲರನ್ನೂ ತನ್ನ ಮಕ್ಕಳಂತೆ ಆರೈಕೆ ಮಾಡಿಕೊಂಡು ಬರುತ್ತಿದೆ, ಭೂಮಿಗೆ ಭಾರತದಲ್ಲಿ ಪೂಜನೀಯ ಸ್ಥಾನವಿದೆ, ನಮ್ಮ ಮುಂದಿನ ಪೀಳಿಗೆಗೆ ಭೂಮಿಯ ಆರಾಧನೆ ಮತ್ತು ಸಂರಕ್ಷಣೆಯ ಜವಾಬ್ದಾರಿ ನೀಡಬೇಕಿದೆ ಎಂದು ಹೇಳಿದರು.

ಅದೇ ನಿಟ್ಟಿನಲ್ಲಿ ಹಲ್ಲೆಗೆರೆ ಮೂರ್ತಿ ರವರು ಪ್ರಕೃತಿ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿದ್ದಾರೆ, ಪ್ರಕೃತಿ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಬರುವುದರಿಂದ ಮುಂದಿನ ಪೀಳಿಗೆಯ ಭವಿಷ್ಯ ಉಜ್ವಲವಾಗಿ ಪ್ರಜ್ವಲಿಸುತ್ತದೆ ಎಂದು ಹೇಳಿದರು.

ನಂತರ ಮಾತನಾಡಿದ ಡಾ. ಆನಂದ್ ಭಟ್ ಸೊಸೈಟಿ ಆಫ್ ಚಿಲ್ಡ್ರನ್ ಪ್ಲಾನೆಟ್ ಆನ್ ಅರ್ಥ್ (SCOPE) ಫೌಂಡೇಶನ್ ವತಿಯಿಂದ ಪ್ರಕೃತಿಗೆ ಮೀಸಲಾಗಿರುವ ಸ್ಮಾರಕವನ್ನು ನಿರ್ಮಾಣ ಮಾಡಲಾಗುತ್ತಿದೆ, ಇಡೀ ವಿಶ್ವದಲ್ಲೇ ಇದೆ ಮೊದಲ ಭೂದೇವಿಗೆ ಸಮರ್ಪಿತವಾದ ಸ್ಮಾರಕವಾಗಿ ನಿರ್ಮಾಣಗೊಳ್ಳಲಿದೆ, ಮುಂದೆ ಇದೊಂದು ಐತಿಹಾಸಿಕ ಸ್ಮಾರಕವಾಗಿ ಗುರುತಿಸಿಕೊಳ್ಳಲಿದೆ ಎಂದು ತಿಳಿಸಿದರು.

ಸ್ಕೋಪ್ (SCOPE ) ಫೌಂಡೇಶನ್ ಮೂಲತಃ ಅನೇಕ ಸಮಾಜಮುಖಿ ಕೆಲಸಗಳನ್ನು ಹಲ್ಲೆಗೆರೆ ಮೂರ್ತಿ ಅವರು ನಡೆಸಿಕೊಟ್ಟಿದ್ದಾರೆ, ಮುಂದಿನ ದಿನಗಳಲ್ಲಿ ಹಲ್ಲೆಗೆರೆಯಲ್ಲಿ ಆರೋಗ್ಯ ಕೇಂದ್ರ ತೆರೆಯಲು ಚಿಂತನೆ ನಡೆಸಲಾಗಿದೆ, ಮುಂದಿನ ದಿನಗಳಲ್ಲಿ ಭೂಮಿ ಸ್ಮಾರಕ ಪ್ರವಾಸೋದ್ಯಮ ಪಟ್ಟಿಗೆ ಸೇರಿದ ನಂತರ ಸ್ಥಳೀಯವಾಗಿ ಆರ್ಥಿಕ ಚಟುವಟಿಕೆಗಳು ಹೆಚ್ಚಾಗುತ್ತಿವೆ ಎಂದು ಹೇಳಿದರು.

ನಂತರ ಸ್ಕೋಪ್ ಫೌಂಡೇಶನ್ ಸಂಸ್ಥಾಪಕ ಮೂರ್ತಿ ಅವರು ಮಾತನಾಡಿ ಜಗತ್ತಿನಾದ್ಯಂತ ನಾವೆಲ್ಲರೂ ದೇಶ, ರಾಜ್ಯ, ಜಾತಿ, ಧರ್ಮ ಎಂದು ವಿಕೇಂದ್ರೀಕರಣಗೊಂಡಿದ್ದೇವೆ, ವಾಸ್ತವವೇನೆಂದರೆ ನಾವೆಲ್ಲರೂ ಮನುಷ್ಯರು, ನಮ್ಮೆಲ್ಲರ ತಾಯಿ ಒಬ್ಬಳೆ ಅದೇ ಭೂಮಿ ತಾಯಿ, ಆಕೆಯ ಪ್ರೀತಿ ಸಹನೆ ಅನುಕಂಪ ಗಮನಿಸದೆ, ಭೂಮಿಯ ಖನಿಜ ಸಂಪತ್ತನ್ನು ಲೂಟಿ ಮಾಡಲು ನಿಂತಿದ್ದೇವೆ, ಭೂದೇವಿ ಆಧ್ಯಾತ್ಮಿಕ ಕೇಂದ್ರ ಸ್ಥಾಪಿಸಿದ ನಂತರ ಭೂಮಿಯ ಸಹನೆ, ಕೊಡುಗೆಯ ನೈಸರ್ಗಿಕ ಸಂಪತ್ತುಗಳಾದ ಗಾಳಿ, ನೀರು, ಬೆಳಕುಗಳ ಮೌಲ್ಯವನ್ನು ಪಸರಿಸುತ್ತೇವೆ, ತಾಯಿಯ ಸಂರಕ್ಷಣೆ ಕುರಿತಾಗಿ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ಹಿರಿಯ ವಕೀಲ ಚಂದ್ರಮೌಳಿ, ಜಾನಪದ ಕಲಾವಿದ ಡಾ. ಕಾ ರಮೇಶ್ವರಪ್ಪ, ಗಣ್ಯರಾದ ವೆಂಕಟೇಶ್, ತ್ಯಾಗರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.