ಬಾಗಲಕೋಟೆ: ನವನಗರದ ಜಿಲ್ಲಾಡಳಿತ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಕಸಬುಟ್ಟಿಯಲ್ಲಿ ಇರಿಸಿರುವ ಘಟನೆ ವರದಿಯಾಗಿದೆ.
ಸಮಾಜ ಕಲ್ಯಾಣ ಇಲಾಖೆ ಹೊರಭಾಗದಲ್ಲಿ ಕಸದ ಬುಟ್ಟಿಯನ್ನು ಇರಿಸಲಾಗಿದ್ದು, ಅದರ ಪಕ್ಕದಲ್ಲಿ ರದ್ದಿ ಇರಿಸಿರುವ ರಟ್ಟಿನ ಡಬ್ಬವನ್ನು ಇಡಲಾಗಿದೆ. ಅದನ್ನು ತೆಗೆದು ನೋಡಿದಾಗ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬಂದಿದೆ.
ಘಟನೆ ಸಂಬಂಧ ವಿಡಿಯೋ ಹೇಳಿಕೆ ಬಿಡುಗಡೆಗೊಳಿಸಿರುವ ದಲಿತ ಯುವ ಮುಖಂಡ ಶಿವರಾಜ ಮುತ್ತಣ್ಣ ಬೆಣ್ಣೂರ, ಜಿಲ್ಲಾಡಳಿತ ಭವನದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿ ಮುಂಭಾಗ ಬಾಬಾಸಾಹೇಬರ ಭಾವಚಿತ್ರ ಕಸದ ಬುಟ್ಟಿಯಲ್ಲಿರುವುದು ಕಂಡು ಬಂದಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಘಟನೆಯಿಂದಾಗಿ ಮನಸಿಗೆ ಘಾಸಿಯಾಗಿದ್ದು, ತಪ್ಪಿತಸ್ಥರ ಮೇಲೆ ಕೂಡಲೇ ಕ್ರಮ ಜಾರಿಯಾಗಬೇಕೆಂದು ಒತ್ತಾಯಿಸಿದ್ದಾರೆ.