ಮಾಟ-ಮಂತ್ರ ಪ್ರತಿತಂತ್ರ

Advertisement

ಚಿತ್ರ: ಅವತಾರ ಪುರುಷ 2
ನಿರ್ದೇಶನ: ಸಿಂಪಲ್ ಸುನಿ
ನಿರ್ಮಾಣ: ಪುಷ್ಕರ್ ಮಲ್ಲಿಕಾರ್ಜುನಯ್ಯ
ತಾರಾಗಣ: ಶರಣ್, ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಭವ್ಯ, ಸುಧಾರಾಣಿ, ಆಶಿಕಾ ರಂಗನಾಥ್, ಆಶುತೋಷ್ ರಾಣಾ, ಅಯ್ಯಪ್ಪ ಪಿ ಶರ್ಮಾ, ಬಾಲಾಜಿ ಮನೋಹರ್, ವಿಜಯ್ ಚೆಂಡೂರು ಇತರರು.
ರೇಟಿಂಗ್ಸ್: 3

  • ಗಣೇಶ್ ರಾಣೆಬೆನ್ನೂರು

ಅವತಾರ ಪುರುಷ ಭಾಗ 1ರಲ್ಲಿ ಒಂದಷ್ಟು ಕುತೂಹಲಕಾರಿ ಅಂಶಗಳೊಂದಿಗೆ ಎರಡನೇ ಭಾಗಕ್ಕೆ ಲೀಡ್ ಕೊಟ್ಟಿದ್ದರು ನಿರ್ದೇಶಕ ಸಿಂಪಲ್ ಸುನಿ. ಮೊದಲನೇ ಭಾಗದಲ್ಲಿ ಕಾಮಿಡಿಗೆ ಹೆಚ್ಚು ಒತ್ತು ಕೊಟ್ಟು, ಸಸ್ಪೆನ್ಸ್ ಹಾಗೂ ಮಾಟ-ಮಂತ್ರಕ್ಕೆ ಒಂಚೂರು ಜಾಗ ಮಾಡಿಕೊಟ್ಟಿದ್ದರು. ಆದರೆ ಎರಡನೇ ಭಾಗದಲ್ಲಿ ಅದರ ತದ್ವಿರುದ್ಧವಾಗಿ ಚಿತ್ರಕಥೆ ಹೆಣೆದಿದೆ ಸುನಿ ಆಂಡ್ ಟೀಂ.

ಅವತಾರ ಪುರುಷ ಭಾಗ 2ರಲ್ಲಿ ತ್ರಿಶಂಕು ಸ್ಥಿತಿಯೇ ಪ್ರಧಾನ ಅಂಶ. ಹೀಗಾಗಿ ಇಲ್ಲಿ ಮಾಟ-ಮಂತ್ರ ಅದಕ್ಕೆ ಪ್ರತಿತಂತ್ರ ರೂಪಿಸಿ ಎದುರಾಳಿಗಳನ್ನು ಮಂತ್ರಶಕ್ತಿಯಿಂದಲೇ ಹೇಗೆ ಸಂಹಾರ ಮಾಡಬಹುದು ಎಂಬುದನ್ನು ವಿವರಿಸಲಾಗಿದೆ. ವಿಚಿತ್ರ ಲೋಕ, ವಿಕ್ಷಿಪ್ತ ಜನರು, ಮಾಯಾಪ್ರಪಂಚ… ಹೀಗೆ ಒಂದಷ್ಟು ಕುತೂಹಲಗಳೊಂದಿಗೆ ಆರಂಭವಾಗುವ ಸಿನಿಮಾ, ನಾನಾ ‘ಅವತಾರ’ಗಳ ಮೂಲಕ ನೋಡಿಸಿಕೊಂಡು ಹೋಗುವಂತೆ ಮಾಡುವಲ್ಲಿ ಸುನಿ ಬಳಗ ಸಫಲವಾಗಿದೆ. ಕೆಲವೊಮ್ಮೆ ಲಾಜಿಕ್ ಕಡೆ ಗಮನ ಕೊಡದೇ, ಮ್ಯಾಜಿಕ್ ಎಂದುಕೊಂಡರೆ ಸಿನಿಮಾ ನೋಡಲು ಸರಾಗ ಮತ್ತು ಸುಂದರ..!

ಸಾಕಷ್ಟು ಟ್ವಿಸ್ಟ್- ಟರ್ನ್‌ಗಳಿರುವುದರಿಂದ ಪಾತ್ರಗಳೂ ಅಷ್ಟೇ ಪ್ರಮಾಣದಲ್ಲಿ ತೆರೆಯ ಮೇಲೆ ಬಂದು ಹೋಗುತ್ತವೆ. ಆ ಪೈಕಿ ಶರಣ್, ಶ್ರೀನಗರ ಕಿಟ್ಟಿ, ಸಾಯಿಕುಮಾರ್ ಹಾಗೂ ಆಶುತೋಷ್ ರಾಣಾ ಗಮನ ಸೆಳೆಯುತ್ತಾರೆ. ಭವ್ಯ, ಸುಧಾರಾಣಿ, ಸಾಧುಕೋಕಿಲ, ಆಶಿಕಾ ರಂಗನಾಥ್, ಅಯ್ಯಪ್ಪ ಪಿ ಶರ್ಮಾ, ಬಾಲಾಜಿ ಮನೋಹರ್, ವಿಜಯ್ ಚೆಂಡೂರು ಮುಂತಾದವರು ಪಾತ್ರವನ್ನು ನೀಟಾಗಿ ನಿಭಾಯಿಸಿದ್ದಾರೆ.

ಕಥೆ ಮತ್ತು ನಿರೂಪಣೆಯ ಜತೆಗೆ ವಿಎಫ್‌ಎಕ್ಸ್, ಗ್ರಾಫಿಕ್ಸ್ ಸಹ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಒಂದೊಮ್ಮೆ ಅವತಾರ ಪುರುಷ ಮೊದಲನೇ ಭಾಗ ನೋಡದಿದ್ದರೂ, ಎರಡನೇ ಭಾಗ ಯಾವುದೇ ಗೊಂದಲವಿಲ್ಲದಂತೆ ನೋಡಿಸಿಕೊಂಡು ಹೋಗುತ್ತದೆ.