ರೈತನ ಮೇಲೆ ಕರಡಿ ದಾಳಿ: ಗಂಭೀರ ಗಾಯ

ಕರಡಿಯೊಂದಿಗೆ ಕಾದಾಡಿ ತಪ್ಪಿಸಿಕೊಂಡು ಬಂದರೂ ಪದೇ ಪದೇ ದಾಳಿ

ಸಂ.ಕ.ಸಮಾಚಾರ ಜಗಳೂರು: ಹೊಲಕ್ಕೆ ಹೋಗಿ ಮೋಟಾರ್ ಆನ್ ಮಾಡಿ ಮನೆಗೆ ವಾಪಾಸ್ಸಾಗುವ ಸಂದರ್ಭದಲ್ಲಿ ಕರಡಿ ದಾಳಿ ನಡೆಸಿ ರೈತನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ತಾಲೂಕಿನ ಅಣುಬೂರು ಗೊಲ್ಲರಹಟ್ಟಿ ಗ್ರಾಮದ ಮೋಹನ್ ಕರಡಿ ದಾಳಿಗೆ ಒಳಗಾದ ರೈತ. ರಾತ್ರಿ ವೇಳೆ ಮೋಟಾರ್ ಆನ್ ಮಾಡಿ ಮನೆಗೆ ಬರುವ ಸಂದರ್ಭದಲ್ಲಿ ಹೊಲಕ್ಕೆ ಹೋಗುವ ದಾರಿಯಲ್ಲಿ ಸುತ್ತಲು ಮುಳ್ಳು ಕಳೆಗಳು ಎತ್ತರವಾಗಿ ಬೆಳೆದಿವೆ. ಈ ಪೊದೆಯಲ್ಲಿ ಮರಿ ಕರಡಿ ಇರುವುದನ್ನು ಗಮನಿಸದೆ ಮುಂದೆ ಬಂದಿದ್ದಾನೆ. ತಕ್ಷಣ ಕರಡಿ ಹಿಂಬದಿಯಿಂದ ಬಂದು ದಾಳಿ ನಡೆಸಿದೆ.
ಈ ವೇಳೆ ಮೋಹನ್ ಕರಡಿ ಜೊತೆ ೧೦ರಿಂದ ೧೫ ನಿಮಿಷ ಕರಡಿ ಜೊತೆಗೆ ಹೋರಾಡಿ ತಪ್ಪಿಸಿಕೊಂಡಿದ್ದಾನೆ. ನಂತರ ಕರಡಿ ಹೋಗಿರಬಹುದು ಎಂದು ಭಾವಿಸಿ ಮನೆ ಕಡೆ ಬರುವಾಗ ಆ ಕರಡಿ ಹಿಂಬದಿಯಿಂದ ಮತ್ತೆ ದಾಳಿ ನಡೆಸಿ ಮೈಕೈ ಪರಚಿದೆ. ಕೊನೆಗೆ ಕರಡಿಯೊಂದಿಗೆ ಕಾದಾಡಿದ ರೈತ ಮೋಹನ್ ತಪ್ಪಿಸಿಕೊಂಡು ಬಂದಿದ್ದಾನೆ. ಕೂಡಲೇ ಆತನನ್ನು ಜಗಳೂರು ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.