300 ಎಕರೆ ಅರಣ್ಯ ಭೂಮಿ ಉಳಿವು

🌳 ಬುಕ್ಕಾಪಟ್ಟಣ ವನ್ಯಜೀವಿಧಾಮದಲ್ಲಿ ಯಶಸ್ವಿ ತೆರವು ಕಾರ್ಯಾಚರಣೆ 🌳

ತುಮಕೂರು: ಜಿಲ್ಲೆಯ ತಿಪಟೂರು ಉಪ ವಿಭಾಗದ ಬುಕ್ಕಾಪಟ್ಟಣ ಚಿಂಕಾರಾ ವನ್ಯಜೀವಿಧಾಮ ವ್ಯಾಪ್ತಿಯ ಮುತ್ತುಗದಹಳ್ಳಿ ಮೀಸಲು ಅರಣ್ಯದಲ್ಲಿ ಇಂದು 300 ಎಕರೆ ಅರಣ್ಯ ಭೂಮಿಯನ್ನು ಅಕ್ರಮ ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಈ ಭೂಮಿಯು ಮೈಸೂರು ಮಹಾರಾಜರಿಂದ 1926ರಲ್ಲಿ ಅರಣ್ಯ ಇಲಾಖೆಗೆ ನೀಡಲಾಗಿದ್ದು, ನಂತರದ ವರ್ಷಗಳಲ್ಲಿ ಕೆಲವು ಮಂದಿ ಅಕ್ರಮವಾಗಿ ಮಂಜೂರು ಮಾಡಿಕೊಂಡು, ಕೆಲವು ಮಂದಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದರು. ಪ್ರಕರಣ ರಾಜ್ಯ ಹೈಕೋರ್ಟ್ ಮೆಟ್ಟಲೇರಿ ಅರಣ್ಯವಾಗಿ ಉಳಿಸಲು ಆದೇಶವಾಗಿತ್ತು. ಇದೀಗ ಭೂಮಿ ಅರಣ್ಯ ಇಲಾಖೆಯ ಹೆಸರಿಗೆ ನೊಂದಾಯಿತವಾಗಿದೆ. ಹಾಸನ-ತುಮಕೂರು ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ, ಪೊಲೀಸ್ ಇಲಾಖೆಯ ಬೆಂಬಲದಿಂದ ಭೂಮಿಯನ್ನು ತೆರವುಗೊಳಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಅರಣ್ಯ ಸಂರಕ್ಷಣೆಯ ದಿಕ್ಕಿನಲ್ಲಿ ಇದು ಮಹತ್ವದ ಹೆಜ್ಜೆ ಎಂದಿದ್ದಾರೆ.