20ಕ್ಕೂ ಹೆಚ್ಚು ಕೋತಿಗಳ ಶವ ಪತ್ತೆ: ವಿಷಪ್ರಾಶನ ಶಂಕೆ

ಚಾಮರಾಜನಗರ: 20ಕ್ಕೂ ಹೆಚ್ಚು ವಾನರಗಳ ಮೃತದೇಹ ಪತ್ತೆಯಾಗಿದ್ದು, ವಾನರಗಳಿಗೆ ವಿಷವಿಟ್ಟು ಹತ್ಯೆ ಮಾಡಿ ನಂತರ ಇಲ್ಲಿ ತಂದುಹಾಕಲಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಇತ್ತೀಚೆಗೆ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ 5 ಹುಲಿಗಳು ಮೃತಪಟ್ಟ ಬೆನ್ನಲ್ಲೇ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ ಸಮೀಪ ಕೋತಿಗಳ ಮಾರಣಹೋಮ ನಡೆಸಿದ ಘಟನೆ ಬುಧವಾರ ಬೆಳಕಿಗೆ ಬಂದಿದೆ. ಎರಡು ಚೀಲಗಳಲ್ಲಿ ಕೋತಿಗಳ ಮೃತದೇಹಗಳನ್ನು ಕಟ್ಟಿಟ್ಟು ಬಿಸಾಡಿ ಹೋಗಿದ್ದಾರೆ‌. ದಾರಿಹೋಕರು ಚೀಲವನ್ನು ಬಿಚ್ಚಿ ನೋಡಿದ ವೇಳೆ 20ಕ್ಕೂ ಅಧಿಕ ಕೋತಿಗಳ ಕಳೇಬರಗಳು ಪತ್ತೆಯಾಗಿವೆ. ಮೇಲ್ನೋಟಕ್ಕೆ ವಿಷಪ್ರಾಶನ, ಇಲ್ಲವೇ ಹೊಡೆದು ಕೊಂದಿರುವ ಶಂಕೆ ವ್ಯಕ್ತವಾಗಿದೆ. ಕೋತಿಗಳ ಮೃತದೇಹಗಳು ಸಿಕ್ಕ ಪ್ರದೇಶವು ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಫರ್ ವಲಯದ ವ್ಯಾಪ್ತಿಗೆ ಬರುತ್ತದೆ. ಮಾಹಿತಿ ತಿಳಿದು ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವೈದ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.