ಮೊಳಕಾಲ್ಮೂರು: ರೈತರ ನಿದ್ದೆಗೆಡಿಸಿದ್ದ ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲ್ಲೂಕಿನ ಅಮುಕುಂದಿ ಗ್ರಾಮದ ಬಳಿಯ ನಾಗೇಶ್ ಅವರ ಮಾವಿನ ತೋಪಿನಲ್ಲಿ ಚಿರತೆ ಅಡಗಿ ಕುಳಿತಿತ್ತು. ಇದನ್ನು ಗಮನಿಸಿದ ನಾಗೇಶ್ ಅರಣ್ಯ ಇಲಾಖೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಎರಡು ಗಂಟೆಗಳ ಕಾಲ ಕಾರ್ಯಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸೆರೆ ಹಿಡಿದ ಚಿರತೆಯನ್ನು ಪಟ್ಟಣದ ಹೊರವಲಯದಲ್ಲಿರುವ ಮಹಾದೇವ ಸಸ್ಯ ಕ್ಷೇತ್ರಕ್ಕೆ ಕೊಂಡೊಯ್ದು ಬೋನಿನಲ್ಲಿ ಇಡಲಾಗಿತ್ತು. ಅಲ್ಲಿ ಚಿರತೆಗೆ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಂಗಪ್ಪ ಪ್ರಥಮ ಚಿಕಿತ್ಸೆ ನೀಡಿದರು.
ಸೆರೆ ಹಿಡಿಯಲಾದ ಚಿರತೆಯು ಎರಡು ವರ್ಷದ ಹೆಣ್ಣು ಚಿರತೆ ಎಂದು ಗುರುತಿಸಲಾಗಿದೆ. ಕೊನೆಗೆ ಚಿರತೆಯನ್ನು ಬೋನಿನಲ್ಲಿ ಚಿತ್ರದುರ್ಗದ ಆಡು ಮಲ್ಲೇಶ್ವರ ಮೃಗಾಲಕ್ಕೆ ಸಾಗಿಸಲಾಯಿತು.